ಮೈಸೂರು: ಮೈಸೂರು ಮೇಯರ್ ಚುನಾವಣೆ ಮೈತ್ರಿ ವಿಚಾರವಾಗಿ, ಜೆಡಿಎಸ್-ಕಾಂಗ್ರೆಸ್ ಮೈತ್ರಿಯಾದ ನಂತರ ಏಕಾಂಗಿಯಾದ ಶಾಸಕ ತನ್ವೀರ್, ಕಾಂಗ್ರೆಸ್ನಲ್ಲೇ ಯಾರಿಗೂ ಬೇಡವಾಗಿದ್ದಾರೆ. ಸಿದ್ದರಾಮಯ್ಯ ಅವರ ವಿರೋಧ ಕಟ್ಟಿಕೊಂಡು ಸಿದ್ದು ಟೀಂನಿಂದ ದೂರವಾದ ತನ್ವೀರ್, ಮೇಯರ್ ಸ್ಥಾನ ಬಿಟ್ಟುಕೊಟ್ಟು ಕಾಂಗ್ರೆಸ್ ಕಾರ್ಪೋರೇಟರ್ಗಳಿಂದಲೂ ದೂರವಾದರು. ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ ನಂತರ ಸ್ಥಳೀಯ ಕಾಂಗ್ರೆಸ್ ಮುಖಂಡರಿಂದಲೂ ದೂರವಾಗಿ, ಕೊನೆಗೆ ಹೈಕಮಾಂಡ್ ಸೂಚನೆ ನಂತರ ಡಿಕೆಶಿ ಅವರಿಂದಲೂ ತನ್ವೀರ್ ಸೇಠ್ ದೂರವಾಗಿದ್ದಾರೆ. ಮೇಯರ್ ಚುನಾವಣೆ ವರದಿ ಸಲ್ಲಿಸಿದ ಬಳಿಕೆ ತನ್ವೀರ್ರಿಂದ ಅಂತರ ಕಾಯ್ದುಕೊಂಡ ಡಿಕೆಶಿ, ಎಲ್ಲರಿಗು ತಿಳಿಯುವಂತೆಯೇ ತನ್ವೀರ್ರಿಂದ ದೂರವಾಗಿದ್ದಾರೆ.
ಸಿದ್ದು ಕೋಪಕ್ಕೆ ಥಂಡಹೊಡೆದಿರುವ ಕಾಂಗ್ರೆಸ್ಸಿಗರಿಂದ ಸ್ವತಃ ತನ್ವೀರ್ ಸಹ ದೂರ ದೂರ ಎನ್ನುವಂತೆ ಪಕ್ಷದ ಚಟುವಟಿಕೆಗಳಿಂದಲೂ ಹೊರಗೆ ಉಳಿಯುತ್ತಿದ್ದಾರೆ. ಏನೋ ಮಾಡಲು ಹೋಗಿ ಮತ್ತೇನೋ ಎಡವಟ್ಟು ಮಾಡಿಕೊಂಡ್ರಾ ಶಾಸಕ ತನ್ವೀರ್ ಸೇಠ್ ಅನ್ನೋ ಪ್ರಶ್ನೆ ಮೂಡಿದೆ. ಇದಲ್ಲದೆ ಮೊದಲ ದಿನದ ಸದನಕ್ಕೆ ಗೈರಾಗಿ ಎರಡನೆ ದಿನ ಹಾಜರಾಗಿದ್ದ ತನ್ವೀರ್, ಸದನದಲ್ಲಿ ಸಿದ್ದರಾಮಯ್ಯ ಮುಖಾಮುಖಿಯಾದರೂ ತಿರುಗಿ ನೋಡದೆ ಮುನಿಸು ಪ್ರದರ್ಶನ ಮಾಡಿದ್ದಾರೆ. ಎಐಸಿಸಿ ನೋಟಿಸ್ಗೆ ಉತ್ತರ ನೀಡಿರುವ ಶಾಸಕ ತನ್ವೀರ್ ಮೇಯರ್ ಸ್ಥಾನ ಬಿಟ್ಟು ತವರಿನಲ್ಲೆ ಶಕ್ತಿ ಕಳೆದುಕೊಂಡ್ರಾ ಅನ್ನೋ ಚರ್ಚೆ ಆರಂಭವಾಗಿದೆ.
ಇವೆಲ್ಲದರ ನಡುವೆ ಮೈಸೂರು ಮೇಯರ್ ಚುನಾವಣೆ ಮೈತ್ರಿ ವಿಚಾರವಾಗಿ, ಸಿದ್ದರಾಮಯ್ಯ ವಿರುದ್ದ ಘೋಷಣೆ ಕೂಗಿದ್ದವರಿಗೆ ಶಾಕ್ ಆಗಿದೆ. ಕಾರಣ, ಸಿದ್ದು ವಿರುದ್ದ ಘೋಷಣೆ ಕೂಗಿದ್ದವರನ್ನ ಕಾಂಗ್ರೆಸ್ ಸದಸ್ಯತ್ವ ಸ್ಥಾನ ಅಮಾನತು ಮಾಡಲಾಗಿದೆ. ಮೈಸೂರು ನಗರ ಕಾಂಗ್ರೆಸ್ನಿಂದ ಎನ್.ಆರ್.ಕ್ಷೇತ್ರದಲ್ಲಿ 6 ಮಂದಿ ಕಾಂಗ್ರೆಸ್ ಕಾರ್ಯಕರ್ತರ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಬ್ಲಾಕ್ ಕಾಂಗ್ರೆಸ್ ಸದಸ್ಯರಾಗಿದ್ದರೂ ಸಿದ್ದರಾಮಯ್ಯ ವಿರುದ್ದ ಘೋಷಣೆ ಕೂಗಿದ್ದ ನರಸಿಂಹರಾಜ ಕ್ಷೇತ್ರದ 6 ಮಂದಿಯನ್ನ ಅಮಾನತು ಮಾಡಿ ಆದೇಶ ಮಾಡಲಾಗಿದೆ. ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ ಅವರು ಮುಂದಿನ ಆದೇಶದವರೆಗೂ ಈ ಆರು ಮಂದಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಸತ್ಯ ತಿಳಿಯದೆ ನಮ್ಮ ತೇಜೋವಧೆ ಮಾಡಬಾರದೆಂದು ಕಾನೂನಿನ ಮೊರೆ ಹೋಗಿದ್ದೇವೆ; ಸಚಿವ ಬಿ.ಸಿ. ಪಾಟೀಲ್
ಅಮಾನತಾದವರು ತನ್ವೀರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕಾರ್ಯಕರ್ತರಾಗಿದ್ದು, ಶಾಹಿದ್, ಎಂ.ಎನ್. ಲೋಕೇಶ್, ಅಬೀಬ್, ಅಣ್ಣು ಪುತ್ರರನ್ನ ಸೇರಿ ಮತ್ತೊಬ್ಬ ಅಮಾನತಾಗಿರುವ ಕಾರ್ಯಕರ್ತರಾಗಿದ್ದಾರೆ. ತನ್ವೀರ್ ಮನೆ ಮುಂದೆ ನಡೆದಿದ್ದ ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ ವಿರುದ್ದ ಧಿಕ್ಕಾರ ಕೂಗಿದ್ದ ಕಾರ್ಯಕರ್ತರಲ್ಲಿ ಅಬೀಬ್ ಅವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರೂ, ಸಿದ್ದರಾಮಯ್ಯ ವಿರುದ್ದದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಕ್ಕೆ ಶಿಕ್ಷೆ ನೀಡಲಾಗಿದೆ.
ಫೆ.26ರಂದು ಎನ್.ಆರ್.ಕ್ಷೇತ್ರದಲ್ಲಿರುವ ತನ್ವೀರ್ ಸೇಠ್ ಮನೆ ಮುಂದೆ ನಡೆದಿದ್ದ ಘಟನೆಯಿಂದಾಗಿ ಕಾಂಗ್ರೆಸ್ನಲ್ಲಿ ಕೋಲಾಹಲವೇ ಸೃಷ್ಟಿಯಾಗಿ, ಸ್ವತಃ ಹೈಕಮಾಂಡ್ ವರದಿ ಕೇಳುವಂತಾಗಿತ್ತು. ಅದಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತರ ಅಮಾನತ್ತಿನ ಮೂಲಕ ಮೈಸೂರು ನಗರ ಕಾಂಗ್ರೆಸ್ ಬಹಿರಂಗವಾಗಿಯೇ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವರಿಗೆ ಬಿಸಿ ಮುಟ್ಟಿಸಿದೆ. ಆದ್ರೆ ತನ್ವೀರ್ ಬೆಂಬಲಿಗರನ್ನ ಅಮಾನತು ಮಾಡಿರುವುದು ಮತ್ತೊಂದು ಹಂತದ ಕಲಹಕ್ಕೆ ಕಾರಣವಾಗಲಿದ್ದು, ಇದು ಶಾಸಕ ತನ್ವೀರ್ ಹಾಗೂ ಸಿದ್ದರಾಮಯ್ಯ ಒಳಕದನವನ್ನ ಮತ್ತಷ್ಟು ರಂಗೇರುವಂತೆ ಮಾಡಿದ್ದಂತು ಸುಳ್ಳಲ್ಲ.
ಇದೇ ವೇಳೆ, ತನ್ವೀರ್ ಸೇಠ್ ಅವರ ವೈಯಕ್ತಿಕ ನಿರ್ಧಾರದಿಂದ ಮೇಯರ್ ಸ್ಥಾನ ಗಳಿಸಿರುವ ಜೆಡಿಎಸ್ ಪಕ್ಷ ಮಾತ್ರ ಈ ನಾಯಕನ ಬೆಂಬಲಕ್ಕೆ ನಿಂತಿದೆ. ಯಾರೇ ದೂರ ಮಾಡಿದರೂ ಅಗತ್ಯ ಬಿದ್ದರೆ ತಮ್ಮ ಪಕ್ಷವು ತವ್ವೀರ್ಗೆ ಆಶ್ರಯ ನೀಡುತ್ತದೆ ಎಂಬ ಸೂಚನೆಯನ್ನು ಹೆಚ್ ಡಿ ಕುಮಾರಸ್ವಾಮಿ ನೀಡಿದ್ಧಾರೆ. ಇದರೊಂದಿಗೆ ತನ್ವೀರ್ ಅವರ ಮುಂದಿನ ನಡೆಗಳು ಏನಿರಲಿವೆ ಎಂಬುದು ಕುತೂಹಲಕ್ಕೆ ಕಾರಣವಾಗಿರುವುದಂತೂ ಹೌದು.
ವರದಿ: ಪುಟ್ಟಪ್ಪ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ