ರಾಮನಗರ: KSRTC ನೌಕರರ ಮುಷ್ಕರ ವಿಚಾರಕ್ಕೆ ರಾಮನಗರದಲ್ಲಿ ಡಿಸಿಎಂ ಅಶ್ವಥ್ ನಾರಾಯಣ ಹೇಳಿಕೆ ನೀಡಿದ್ದಾರೆ. ನಗರದ ನೂತನವಾಗಿ ನಿರ್ಮಾಣವಾಗಿರುವ ಜಿ.ಕೆ.ಎಂ.ಪಿ.ಎಸ್ ಶಾಲಾ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ, ಮುಖ್ಯವಾಗಿ ಸರ್ಕಾರ ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದೆ. 6 ನೇ ವೇತನ ಆಯೋಗ ಜಾರಿಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆದರೆ ಶೇ. 8 ಸಂಬಳವನ್ನ ಹೆಚ್ಚುವರಿ ಮಾಡಲು ನಿರ್ಧಾರ ಮಾಡಲಾಗಿದೆ. ಜೊತೆಗೆ ಸರ್ಕಾರದ ಆದಾಯದ ಮೇಲೆ ಎಲ್ಲಾ ನಿರ್ಧಾರ ಮಾಡಲಾಗುತ್ತೆ. ಆದರೆ ಖಾಸಗೀಕರಣ ಮಾಡಲು ಸರ್ಕಾರ ಮುಂದಾಗಿಲ್ಲ, ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದು. ಹಾಗಾಗಿ ಖಾಸಗಿಯವರ ಸಹಕಾರ ಪಡೆಯಲಾಗಿದೆ.ಈ ಕೂಡಲೇ ನೌಕರರು ಮುಷ್ಕರ ಕೈಬಿಡಬೇಕು ಎಂದು ಮನವಿ ಮಾಡಿದರು.
ರಾಮನಗರ - ಚನ್ನಪಟ್ಟಣ ಅವಳಿ ನಗರಗಳಾಗಿ ಅಭಿವೃದ್ಧಿ
ರಾಜಧಾನಿ ಬೆಂಗಳೂರು ಹಾಗೂ ಆರಮನೆ ನಗರಿ ಮೈಸೂರು ಮಾರ್ಗದ ಆಯಕಟ್ಟಿನ ಜಾಗದಲ್ಲಿರುವ ರಾಮನಗರ ಮತ್ತು ಚನ್ನಪಟ್ಟಣವನ್ನು ಅತ್ಯಾಧುನಿಕ ಸೌಲಭ್ಯಗಳುಳ್ಳ ಆಧುನಿಕ ಅವಳಿ ನಗರಗಳನ್ನಾಗಿ ಅಭಿವೃದ್ಧಿಪಡಿಸಲು ಸರಕಾರ ಮುಂದಾಗಿದೆ.
ಬೆಂಗಳೂರು ಅಭಿವೃದ್ಧಿಯ ಮಾದರಿಯನ್ನು ಇಟ್ಟುಕೊಂಡು ಇವೆರಡೂ ಪಟ್ಟಣಗಳನ್ನು ಅಭಿವೃದ್ಧಿಪಡಿಸುವುದು ಸರ್ಕಾರದ ಉದ್ದೇಶವಾಗಿದೆ. ಅತ್ಯುತ್ತಮ ಮೂಲಸೌಕರ್ಯ, ಒಳಚರಂಡಿ ಹಾಗೂ ಕುಡಿಯುವ ನೀರು ಸರಬರಾಜು ವ್ಯವಸ್ಥೆ, ಆಕರ್ಷಕ ವಿಶಾಲ ಉದ್ಯಾನವನಗಳ ನಿರ್ಮಾಣ, ಎಲ್ಲ ರಸ್ತೆಗಳು ಇತಿಹಾಸ ದಾಖಲಿಸಿವುದು, ಕ್ರೀಡಾಂಗಣಗಳ ನಿರ್ಮಾಣ ಸೇರಿದಂತೆ ಅಗತ್ಯವಾದ ಎಲ್ಲ ಕೆಲಸಗಳನ್ನು ಕಾಲಮಿತಿಯೊಳಗೆ ಕೈಗೊಂಡು ಮುಗಿಸುವ ಬಗ್ಗೆ ಅಧಿಕಾರಿಗಳ ಜೊತೆ ಈಗಾಗಲೇ ಚರ್ಚೆ ನಡೆಸಲಾಗಿದೆ. ರಾಮನಗರ ಮತ್ತು ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರಗಳಿಗೆ ಇನ್ನಷ್ಟು ಶಕ್ತಿ ತುಂಬಲಾಗುವುದು. ಎರಡೂ ಪಟ್ಟಣಗಳ ಅಭಿವೃದ್ಧಿಗೆ ಏನೆಲ್ಲ ಅಗತ್ಯವೋ ಎಲ್ಲವನ್ನೂ ಸರ್ಕಾರ ಒದಗಿಸುತ್ತಿದೆ ಎಂದ ಅವರು, ಚನ್ನಪಟ್ಟಣದಲ್ಲಿ ಇನ್ನೊಂದು ಬಸ್ ನಿಲ್ದಾಣದ ಅಗತ್ಯವಿದೆ ಎಂಬ ಬೇಡಿಕೆ ಬಂದಿದೆ. ಅದನ್ನೂ ತ್ವರಿತವಾಗಿ ಕಾರ್ಯಗತ ಮಾಡಲಾಗುವುದು ಎಂದು ಡಿಸಿಎಂ ಅಶ್ವಥ್ ನಾರಾಯಣ ಅವರು ಭರವಸೆ ನೀಡಿದರು.
ಇದನ್ನು ಓದಿ: ಮೇ 2ರ ಬಳಿಕ ಯಡಿಯೂರಪ್ಪ ಕೆಳಗಿಳಿಯುವುದು ಗ್ಯಾರಂಟಿ, ಸ್ವಲ್ಪ ದಿನಗಳಲ್ಲೇ ಅಪ್ಪ-ಮಗನ ಬಣ್ಣ ಬಯಲಾಗಲಿದೆ; ಯತ್ನಾಳ್ ಹೊಸ ಬಾಂಬ್!
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಪರಿಕಲ್ಪನೆಯಂತೆ ಅವಳಿ ನಗರಗಳ ಸ್ವಚ್ಛತೆಯ ಬಗ್ಗೆ ಅದ್ಯತೆ ನೀಡಲಾಗುವುದು. ಕಸ ವಿಂಗಡಣೆ ಮತ್ತು ವಿಲೇವಾರಿಗೆ ಒತ್ತು ನೀಡುವುದರ ಜತೆಗೆ, ನಗರಗಳ ಸೌಂದರ್ಯ ಸಂರಕ್ಷಣೆಗೆ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ವಿಶಾಲವಾದ ಉದ್ಯಾನವನಗಳನ್ನು ನಿರ್ಮಾಣ ಮಾಡುವುದರ ಜತೆಗೆ, ಅವುಗಳ ನಿರ್ವಹಣೆಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.
ವರದಿ : ಎ.ಟಿ. ವೆಂಕಟೇಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ