ಚಿಕ್ಕಬಳ್ಳಾಪುರ: ನಾನು ಉಡಾಫೆ ರಾಜಕಾರಣಿಯಲ್ಲ, ಕೊಟ್ಟ ಭರವಸೆ ಈಡೇರಿಸಲು ಆಗದಿದ್ದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಹೊರತು ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುವುದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು ಸರಣಿ ಸಭೆಗಳನ್ನು ನಡೆಸಿರುವ ಸಚಿವರು ತಾಲ್ಲೂಕಿನ ಅಜ್ಜವಾರ ಮತ್ತು ಹೊಸಹುಡ್ಯಾ ಗ್ರಾಮಗಳಲ್ಲಿ ಸೋಮವಾರ ರಾತ್ರಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಹೆಣ್ಣೂರು-ನಾಗವಾರ ಕೆರೆಗಳ ಕಲುಷಿತ ನೀರು ಶುದ್ಧೀಕರಿಸಿ ತಂದು ಈ ಭಾಗದ ಕೆರೆಗಳನ್ನು ತುಂಬಿಸುತ್ತೇನೆ ಎಂದು ಹಿಂದೆ ಹೇಳಿದಾಗ ಅನೇಕರು ಗೇಲಿ ಮಾಡಿದ್ದರು. ಉಡಾಫೆ ಮಾತು ಆಡುತ್ತಿದ್ದೇನೆ, ನೀರು ತರುವುದು ಅಸಾಧ್ಯ, ಆ ನೀರು ಬಳಕೆ ಮಾಡಿದರೆ ಕ್ಯಾನ್ಸರ್ ಬರುತ್ತದೆ. ಮತ ಪಡೆಯಲು ಸುಳ್ಳು ಹೇಳಿತ್ತಿದ್ದಾರೆ ಎಂದೆಲ್ಲಾ ಮಾತನಾಡಿದ್ದರು. ಈಗ ಆಗಿರುವುದಾದರೂ ಏನು? ಕೊಟ್ಟ ಮಾತು ಉಳಿಸಿಕೊಂಡು ಈ ಭಾಗದ ಕೆರೆಗಳನ್ನು ತುಂಬಿಸುತ್ತಿದ್ದೇನೆ. ಕ್ಯಾನ್ಸರ್ ಬಂದಿದ್ಯಾ? ಎಂದು ಪ್ರಶ್ನೆ ಮಾಡಿದರು.
ಅಪಪ್ರಚಾರ ನಡೆಸಿದ ಮಹಾನುಭಾವರು ಈಗ ಎಲ್ಲೂ ಕಾಣಿಸುತ್ತಿಲ್ಲ. ಈ ಭಾಗದ ರೈತರ ಬದುಕು ಹಸನಾಗುತ್ತಿದೆ. ಕೆರೆಗಳಲ್ಲಿ ಮೀನುಗಾರಿಕೆ ಅದ್ಭುತವಾಗಿ ನಡೆಯುತ್ತಿದೆ. ಒಂದು ವೇಳೆ ಕೆರೆಗೆ ಹರಿದಿರುವ ನೀರು ವಿಷಕಾರಿಯಾಗಿದ್ದಿದ್ದರೆ ಮೀನು ಬದುಕುತ್ತಿತ್ತೇ? ಎಂದು ಪ್ರಶ್ನಿಸಿದ ಸಚಿವರು, ಇದರಿಂದ ಈ ಭಾಗದ ಅಂತರ್ಜಲ ಮಟ್ಟ ಸುಧಾರಣೆಯಾಗಿದೆ. ಮುಂದೆ ಪರಿಸ್ಥಿತಿ ಇನ್ನಷ್ಟು ಸುಧಾರಿಸಲಿದೆ ಎಂದರು.
ಇದನ್ನು ಓದಿ: ಪರಿಷ್ಕೃತ ರೂಪದ ವಿದ್ಯಾಗಮ ಯೋಜನೆಯಡಿ ಶಾಲಾ ತರಗತಿಗಳು ಹೇಗೆ ನಡೆಯಲಿವೆ ಗೊತ್ತಾ?
ಈ ಭಾಗದಲ್ಲಿ ನೀರಿನ ಸಮಸ್ಯೆ ವ್ಯಾಪಕವಾಗಿತ್ತು. ಸಾಲ ಮಾಡಿ ಕೊಳವೆಬಾವಿ ಕೊರೆಸಿ ನೀರು ಬರದಿದ್ದಾಗ ರೈತರು ಆತ್ಮಹತ್ಯೆ ಮಾಡಿಕೊಂಡ ಅನೇಕ ನಿದರ್ಶನಗಳಿವೆ. ಒಮ್ಮೆ ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ದೆ. ಆ ಕುಟುಂಬದ ಸಣ್ಣ ಮಕ್ಕಳ ಚಿತ್ರ ಈಗಲೂ ನನ್ನ ಕಣ್ಣಿನಲ್ಲಿ ನಿಂತು ಬಿಟ್ಟಿದೆ. ಅದೇ ದಿನ ಈ ಭಾಗಕ್ಕೆ ಹೇಗಾದರೂ ನೀರು ತರಲೇಬೇಕು ಎಂದು ನಿಶ್ಚಯಿಸಿ ಹೇಳಿದಾಗ ಅನೇಕರು ಅಸಾಧ್ಯ ಎಂದು ವ್ಯಂಗ್ಯವಾಡಿದ್ದರು. ಕೊಟ್ಟ ಭರವಸೆಯನ್ನು ಈಡೇರಿಸಿರುವ ತೃಪ್ತಿ ನನಗಿದೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ