ಕೆಆರ್ಎಸ್ ಬಾಗಿನಕ್ಕೆ 13 ಲಕ್ಷ ಲೆಕ್ಕ ಕೊಟ್ಟ ಜಿಲ್ಲಾಡಳಿತ; ತೋರಣ, ಬಾಳೆಕಂದಿಗೆ ಅಷ್ಟು ಹಣವೇ ಎಂದು ವಿಪಕ್ಷ ಶಾಸಕ ಕಿಡಿ
ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಕೆಆರ್ಎಸ್ಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ನಡೆಯಬೇಕಿದ್ದರೂ ಜಿಲ್ಲಾಡಳಿತ ತನ್ನಿಷ್ಟ ಬಂದಂತೆ ಕಾರ್ಯಕ್ರಮ ರೂಪಿಸಿದೆ. ಕಾರ್ಯಕ್ರಮಕ್ಕೆ 13 ಲಕ್ಷ ರೂ ಖರ್ಚಾಗಿದೆ ಎಂದು ಸುಳ್ಳು ಲೆಕ್ಕ ತೋರಿಸಿದೆ ಎಂದು ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಆರೋಪಿಸಿದ್ದಾರೆ.
ಮಂಡ್ಯ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಭ್ರಷ್ಟಾಚಾರ ಹೆಚ್ಚಾಗ್ತಿದೆ. ಕೊರೋನಾ ಅನುದಾನದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ವಿರೋಧ ಪಕ್ಷದ ನಾಯಕರು ಟೀಕಿಸಿದ್ದರು. ಇದೀಗ ಕೆಆರ್ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸುವ ವಿಚಾರದಲ್ಲೂ ಭ್ರಷ್ಟಾಚಾರ ನಡೆದಿದೆ ಎಂದು ಶಾಸಕರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಮೂರು ದಿನಗಳ ಹಿಂದೆ ನಡೆದ ಕಾರ್ಯಕ್ರಮದಲ್ಲಿ ಕೆಆರ್ಎಸ್ಗೆ ಬಾಗಿನ ಅರ್ಪಿಸಲು 13 ಲಕ್ಷ ರೂ ಖರ್ಚಾಗಿರುವ ಲೆಕ್ಕ ತೋರಿಸಿ ಭ್ರಷ್ಟಾಚಾರ ಮಾಡಿದ್ದಾರೆ. ಮಾವಿನ ತೋರಣ ಮತ್ತು ಬಾಳೆಕಂದಿಗೆ 13 ಲಕ್ಷ ಬೇಕಾ ಎಂದು ಶ್ರೀರಂಗಪಟ್ಟಣ ಕ್ಷೇತ್ರದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಪ್ರಶ್ನೆ ಮಾಡಿದ್ದಾರೆ.
ಅಲ್ಲದೆ, ನಾವು ಕೂಡ ಇಲ್ಲಿಯವರೆಗೆ ಕಾರ್ಯಕ್ರಮ ಮಾಡಿದ್ದೇವೆ, ಬಾಗೀನ ಬಿಟ್ಟಿದ್ದೇವೆ. ಇಷ್ಟು ಲೆಕ್ಕ ಕೊಟ್ಟಿಲ್ಲ ಎಂದು ಜಿಲ್ಲಾಡಳಿತದ ವಿರುದ್ದ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆ ದಿನ ಜಿಲ್ಲಾಡಳಿತ ಯಾವುದೇ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಿಲ್ಲ. ಜಿಲ್ಲಾಧಿಕಾರಿಯವರು ಒಂದು ಪಕ್ಷದ ಏಜೆಂಟರಂತೆ ವರ್ತಿಸಿ ತಮಗಿಷ್ಟ ಬಂದಹಾಗೆ ಮಾಡಿದ್ದಾರೆ. ನಾನೊಬ್ಬ ಸ್ಥಳೀಯ ಶಾಸಕನಾಗಿ ನನ್ನ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ, ನನಗೆ ಒಂದು ಮಾತು ಹೇಳದೆ ಅವರಿಷ್ಟ ಬಂದಂತೆ ಕಾರ್ಯಕ್ರಮ ರೂಪಿಸಿದ್ದಾರೆಂದು ಅವರು ಕಿಡಿ ಕಾರಿದ್ದಾರೆ.
ಬಾಗೀನ ಅರ್ಪಣೆ ದಿನ ಸಿಎಂ ಬಂದಾಗ ನನ್ನ ಕಾರನ್ನು ಒಂದು ಕಿ.ಮೀ. ಹಿಂದೆಯೇ ತಡೆದು ನಡೆಸಿ ಕಳುಹಿಸಿದ್ದಾರೆ. ನನ್ನ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಬೇಕಿದ್ದರೂ ಎಲ್ಲವನ್ನೂ ಗಾಳಿಗೆ ತೂರಿ ಸರ್ವಾಧಿಕಾರಿಯಂತೆ ವರ್ತಿಸಿದ್ದಾರೆ. ಇವರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ವಿರುದ್ದ ಬಹಿರಂಗವಾಗಿಯೇ ಎಚ್ಚರಿಕೆ ನೀಡಿದ್ದಾರೆ.
ಒಟ್ಟಾರೆ, ಇದುವರೆಗೂ ಯಾವುದೇ ತಂಟೆ ತಕರಾರಿಲ್ಲದೆ ನಡೆದು ಬರ್ತಿದ್ದ ಕಾವೇರಿ ಬಾಗೀನ ಕಾರ್ಯಕ್ರಮದಲ್ಲೀಗ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಜಿಲ್ಲಾಡಳಿ ಬಾಗೀನ ಕಾರ್ಯಕ್ರಮಕ್ಕೆ 13 ಲಕ್ಷ ರೂ ಖರ್ಚು ಮಾಡಿರೋ ಬಗ್ಗೆ ಲೆಕ್ಕ ತೋರಿಸುತ್ತಿದೆ. ಸ್ಥಳೀಯ ಶಾಸಕರು ಮಾಡಿರುವ ಈ ಗಂಭೀರ ಆರೋಪಕ್ಕೆ ಸರ್ಕಾರ ಅಥವಾ ಜಿಲ್ಲಾಡಳಿತ ಪ್ರತಿಕ್ರಿಯೆ ಏನು ಎಂದು ಕಾದುನೋಡಬೇಕು.
ವರದಿ: ರಾಘವೇಂದ್ರ ಗಂಜಾಮ್
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ