ಹುಬ್ಬಳ್ಳಿ(ಆಗಸ್ಟ್ .06): ಮಾಜಿ ಸಚಿವ ಜನಾರ್ಧನ ರೆಡ್ಡಿ ಮೊಮ್ಮಗಳ ನಾಮಕರಣಕ್ಕೆ ಕಲಘಟಗಿಯ ವಿಶೇಷ ಬಣ್ಣದ ತೊಟ್ಟಿಲು ಸಿದ್ಧವಾಗಿದೆ. ಕಲಾವಿದ ಮಾರುತಿ ಬಡಿಗೇರ ಸುಪ್ರಸಿದ್ಧ ಕಲಘಟಗಿಯ ಬಣ್ಣದ ತೊಟ್ಟಿಲನ್ನು ತಯಾರಿಸಿದ್ದಾರೆ. ಜನಾರ್ಧನ ರೆಡ್ಡಿ ಪುತ್ರಿ ಬ್ರಹ್ಮಿಣಿಯ ಮಗುವಿನ ನಾಮಕರಣಕ್ಕೆ ಇದನ್ನು ಗಿಫ್ಟ್ ಕೊಡಲಾಗುತ್ತಿದೆ.
ಹಾವೇರಿ ಮೂಲದ ವನಿತಾ ಗುತ್ತಲ್ ಅವರು ಈ ತೊಟ್ಟಿಲನ್ನು ಹೇಳಿ ಮಾಡಿಸಿದ್ದಾರೆ. ಶ್ರಿಕೃಷ್ಣನ ಬಾಲ ಲೀಲೆಗಳ ಚಿತ್ರವಿರುವ ಬಣ್ಣದ ತೊಟ್ಟಿಲು ಇದಾಗಿದ್ದು ಇನ್ನೆರಡು ದಿನಗಳಲ್ಲಿ ಜನಾರ್ಧನ ರೆಡ್ಡಿ ಮೊಮ್ಮಗಳಿಗೆ ತಲುಪಲಿದೆ. ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಮಗುವಿಗೆ ಈ ಹಿಂದೆ ರೆಬಲ್ಸ್ಟಾರ್ ಅಂಬರೀಷ್ ಅವರು ತೊಟ್ಟಿಲು ಗಿಫ್ಟ್ ಮಾಡಿದ್ದರು.
ವರನಟ ಡಾ. ರಾಜ್ಕುಮಾರ್ ಕುಟುಂಬ ಕೂಡ ಇತ್ತೀಚೆಗೆ ಕಲಘಟಗಿ ತೊಟ್ಟಿಲು ಖರೀದಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣ ಸಾಂಪ್ರದಾಯಿಕ ಬಣ್ಣದ ತೊಟ್ಟಿಲುಗಳಿಗೆ ಹೆಸರುವಾಸಿಯಾಗಿದೆ.
ಸಾಗುವಾನಿ ಕಟ್ಟಿಗೆ ಬಳಸಿ ತೊಟ್ಟಿಲು ಸಿದ್ದಪಡಿಸಲಾಗಿದೆ : ಪಶ್ಚಿಮ ಘಟ್ಟದಲ್ಲಿ ಸಿಗುವ ವಿಶೇಷ ಸಾಗವಾಣಿ ಕಟ್ಟಿಗೆಗಳನ್ನು ಬಳಸಿ ಈ ತೊಟ್ಟಿಲುಗಳನ್ನು ಸಿದ್ಧಪಡಿಸಲಾಗುತ್ತೆ. ಮನೆಯಲ್ಲಿಯೇ ಸಿದ್ಧಪಡಿಸಿದ ಪರಿಸರ ಸ್ನೇಹಿ ಬಣ್ಣವನ್ನು ತೊಟ್ಟಿಲುಗಳಿಗೆ ಬಳಸಲಾಗುತ್ತೆ. ಈ ಬಣ್ಣದ ತೊಟ್ಟಿಲುಗಳ ಆಯುಷ್ಯ ನೂರು ವರ್ಷಕ್ಕೂ ಹೆಚ್ಚು. ಅಪ್ಪ, ಮಗ, ಮೊಮ್ಮಗ ಒಂದೇ ತೊಟ್ಟಿಲನಲ್ಲಿ ಆಡಿ ಬೆಳೆಯುವಷ್ಟು ಆಯುಷ್ಯ ಈ ತೊಟ್ಟಿಲುಗಳಿಗಿದೆ.
ಶತಮಾನಗಳ ಇತಿಹಾಸ ಹೊಂದಿರುವ ಈ ತೊಟ್ಟಿಲುಗಳನ್ನು ಜನರು ತಿಂಗಳುಗಳ ಮೊದಲೇ ಹೇಳಿ ಮಾಡಿಸುತ್ತಾರೆ. ಸುಮಾರು ಇಪ್ಪತ್ತಕ್ಕೂ ಹೆಚ್ಚು ವಿಧದ ತೊಟ್ಟಿಲುಗಳನ್ನು ಮಾರುತಿ ಬಡಿಗೇರ್ ಸಿದ್ಧಪಡಿಸುತ್ತಾರೆ. ಇದೇ ರೀತಿ ಹಲವು ಕುಟುಂಬಗಳು ಕಲಘಟಗಿ ಪಟ್ಟಣದಲ್ಲಿ ಬಣ್ಣದ ತೊಟ್ಟಿಲುಗಳನ್ನು ಸಿದ್ಧಪಡಿಸುತ್ತವೆ. ತೊಟ್ಟಿಲುಗಳ ಮೇಲಿನ ಸುಂದರ ಕಲಾಕೃತಿಗಳು ಗಮನ ಸೆಳೆಯುತ್ತವೆ. ಜನರ ಅಭಿರುಚಿಗೆ ತಕ್ಕಂತೆ ತೊಟ್ಟಿಲುಗಳನ್ನು ಸಿದ್ಧಪಡಿಸಿ ಕೊಡಲಾಗುತ್ತದೆ.
ಕಟ್ಟಿಗೆಯ ಈ ತೊಟ್ಟಿಲುಗಳನ್ನು ಸಿದ್ಧಪಡಿಸಲು ಸಾಕಷ್ಟು ಶೃದ್ಧೆ ಮತ್ತು ತಾಳ್ಮೆ ಬೇಕು. ಒಂದು ತೊಟ್ಟಿಲು ಸಿದ್ಧಪಡಿಸಲು ಕನಿಷ್ಠಪಕ್ಷ ಒಂದು ತಿಂಗಳು ಹಿಡಿಯುತ್ತೆ. ತೊಟ್ಟಿಲುಗಳ ನಿರ್ಮಾಣ ಹೆಚ್ಚಿನ ಲಾಭದಾಯಕವಲ್ಲ. ಆದರೂ ಹಿರಿಯರು ಪಾರಂಪರಿಕವಾಗಿ ನಡೆಸಿಕೊಂಡು ಬಂದಿರುವ ಕುಸುರಿ ಕೆಲಸವನ್ನು ಬಡಿಗೇರ್ ಕುಟುಂಬಸ್ಥರು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.
ಇದನ್ನೂ ಓದಿ :
ಕರಾವಳಿಯಲ್ಲಿ ಮುಂದುವರಿದ ಭಾರಿ ಮಳೆ : ಕಡಲಿನ ಅಬ್ಬರ ಹೆಚ್ಚಳ, ಆತಂಕದಲ್ಲಿ ಜನ
ಈಗ ಮಾರುಕಟ್ಟೆಗಳಲ್ಲಿ ಕಬ್ಬಿಣ ಮತ್ತು ಪ್ಲಾಸ್ಟಿಕ್ ತೊಟ್ಟಿಲುಗಳ ಹಾವಳಿ ಹೆಚ್ಚಾಗಿದೆ. ಇದರ ನಡುವೆಯೂ ಕಟ್ಟಿಗೆಯಿಂದ ತಯಾರಿಸುವ ಈ ಕಲಾತ್ಮಕ ತೊಟ್ಟಿಲುಗಳಿಗೆ ಬೇಡಿಕೆ ಕುಗ್ಗಿಲ್ಲ.
ದೂರದ ಊರುಗಳಿಂದ ಬರುವ ಜನರು ರಾಮ, ಕೃಷ್ಣ, ಜೀಸಸ್, ಮೆಕ್ಕಾ ಚಿತ್ರಗಳಿರುವ ತೊಟ್ಟಿಲುಗಳನ್ನು ಮಾಡಿಸುತ್ತಾರೆ. ಇಲ್ಲಿ ತಯಾರಾಗುವ ತೊಟ್ಟಿಲುಗಳನ್ನು ಕರ್ನಾಟಕ ಮಾತ್ರವಲ್ಲ ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೂ ಪೂರೈಕೆ ಮಾಡಲಾಗುತ್ತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ