ಗದಗ: ಅಮೃತ ಎಂಬ ಯುವಕ ಹುಟ್ಟಿನಿಂದಲೇ ವಿಶೇಷಚೇತನ. ಎರಡೂ ಕೈಗಳಲ್ಲಿ ಬೆರಳುಗಳಿಲ್ಲ. ಎರಡೂ ಕಾಲುಗಳಿಗೂ ಸರಿಯಾಗಿ ಬೆರಳಿಲ್ಲ. ಹಿಗಾಗಿಯೇ ತನ್ನ ಜೀವನಕ್ಕೆ ಸಹಾಯ ಆಗುತ್ತೆ ಅಂತ ಅಂಗವಿಕಲತೆ ಮಾಸಾಶನ ಪಡೆದುಕೊಳ್ಳುತ್ತಿದ್ದ. ಆದರೆ ಒಂದೂವರೆ ವರ್ಷ ದಿಂದ ಆಧಾರ್ ಕಾರ್ಡ್ ಲಿಂಕ್ ಆಗದೆ ಮಾಸಾಶನ ಬಂದಿಲ್ಲ. ಹೀಗಾಗಿ ಮಾಸಾಶನ ಪಡೆಯೋಕೆ ಸಂಬಂಧ ಪಟ್ಟ ಇಲಾಖೆಗೆ ಅಲೇದು ಅಲೇದು ಸುಸ್ತಾಗಿದ್ದಾನೆ.
ಹೌದು ಗದಗ ನಗರದ ಗಂಗಾಪೂರ ಪೇಟೆಯ 23 ವರ್ಷದ ಅಮೃತ್ ಹುಟ್ಟಿನಿಂದಲೇ ತನ್ನ ಕೈ ಹಾಗೂ ಕಾಲುಗಳ ಬೆರಳುಗಳಿಲ್ಲದೇ ಬೆಳೆದಿದ್ದಾನೆ. ಸರ್ಕಾರದ ಅಂಗವಿಕಲತೆ ಮಾಸಾಶನ ಪಡೆಯುತ್ತಾ ಕಿರಾಣಿ ಶಾಪ್ ಒಂದರಲ್ಲಿ ದಿನಗೂಲಿ ಕೆಲಸ ಮಾಡ್ತಿದ್ದಾನೆ. ಆದರೆ ಈತನಿಗೆ ಕಳೆದ 18 ತಿಂಗಳಿನಿಂದ ಮಾಸಾಶನ ನಿಂತು ಹೋಗಿದೆ. ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಆಗದಿದ್ದಕ್ಕೆ ಮಾಸಾಶನ ಬಂದ್ ಆಗಿದ್ದು ಆಧಾರ್ ಕಾರ್ಡನಲ್ಲಿ ತಿದ್ದುಪಡಿ. ಆಗಬೇಕಾಗಿದೆ. ಹೀಗಾಗಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಲು ಸೇವಾ ಕೇಂದ್ರಕ್ಕೆ ಹೋದರೆ ಹೆಬ್ಬೆಟ್ಟಿನ ಗುರುತು ಕೇಳ್ತಿದ್ದಾರೆ. ಆದರೆ ಬೆರೆಳುಗಳೇ ಇಲ್ಲದ ವಿಕಲಚೇತನ ಅಮೃತ ಹೆಬ್ಬೆಟ್ಟಿನ ಗುರುತು ಎಲ್ಲಿಂದ ತರೋದು ಅಂತ ಪೋಷಕರ ನೋವಿನ ಮಾತಾಗಿದೆ. ಇನ್ನು ಈ ಬಗ್ಗೆ ಆಧಾರ್ ಸೇವಾ ಕೇಂದ್ರದ ಸಿಬ್ಬಂದಿ ಬಳಿಯೂ ಯಾವುದೇ ಉತ್ತರವಿಲ್ಲ. ಅಲ್ಲದೇ ಸಂಬಂಧಿಸಿದ ಕಚೇರಿಗಳಿಗೂ ಅಲೆದಾಡಿ, ವಿಕಲಚೇತನ ಅಮೃತ್ ತನ್ನ ಸಮಸ್ಯೆ ಹೇಗಪ್ಪಾ ಬಗೆಹರಿಸಿಕೊಳ್ಳೋದು ಅಂತಾ ಸಂಕಟ ಪಡುತ್ತಿದ್ದಾನೆ.
ಈ ಮೊದಲು ಅಮೃತ ಖೋಡೆಗೆ ಮಾಸಾಶನ ಬರೋದಕ್ಕೆ ಯಾವುದೇ ತೊಂದರೆ ಇರಲಿಲ್ಲ. 2019 ರಲ್ಲಿ ಸರ್ಕಾರ ನೇರವಾಗಿ ಫಲಾನುಭವಿ ಖಾತೆಗೆ ಹಣ ಜಮೆ ಮಾಡಲು ಆರಂಭಿಸಿತು. ಅಲ್ಲಿಂದ ಅಮೃತ ಖೋಡೆಗೆ ಮಾಸಾಶನ ಬಂದ್ ಆಗಿದೆ. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳನ್ನ ಸಂಪರ್ಕಿಸಿದಾಗ ಆಧಾರ್ ಕಾರ್ಡನಲ್ಲಿ ಮೊಬೈಲ್ ನಂಬರ್ ಇಲ್ಲ. ಇದರಿಂದ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಆಧಾರ್ ಮಾಡಿಸೋಣ ಅಂತ ಸೇವಾ ಕೇಂದ್ರಕ್ಕೆ ಹೋದ್ರೆ ಆಧಾರ್ ತಿದ್ದುಪಡಿಗೆ ಹೆಬ್ಬೆಟ್ಟು ಗುರುತು ಬೇಕು ಎಂದಿದ್ದಾರೆ. ಬೆರೆಳೆ ಇಲ್ಲದೇ ಹೆಬ್ಬೆಟ್ಟು ಗುರುತು ಹೇಗೆ ಕೊಡೋದು ಅಂತ ಈ ಸಮಸ್ಯೆಯನ್ನು ಸಂಬಂಧಿಸಿದ ಇಲಾಖೆಗೆ ಹೇಳೋಕೆ ಹೋದ್ರೆ ಅವರೂ ಸಹ ಸಮಸ್ಯೆ ಕೇಳುವ ಮೊದಲೇ ತಹಸೀಲ್ದಾರ ಕಚೇರಿಗೆ ಸಾಗುಹಾಕುತ್ತಾರೆ. ಅಲ್ಲಿಯೂ ಸಹ ಹೆಬ್ಬೆಟ್ಟು ಗುರತು ಬೇಕು ಅಂತಾರೆ. ಹೀಗಾಗಿ ನಮ್ಮ ಸಮಸ್ಯೆ ಯಾರ ಬಳಿ ಹೇಳೋದು ಅಂತಿದ್ದಾರೆ ಅಮೃತ ಪೋಷಕರು.
ಇದನ್ನು ಓದಿ: Delta Plus| ಕೊರೋನಾ ಒಂದು ಡೋಸ್ ಲಸಿಕೆ ಪಡೆದವರು ಡೆಲ್ಟಾ ಪ್ಲಸ್ ವೈರಸ್ನಿಂದ ಸುರಕ್ಷಿತ; ಐಸಿಎಂಆರ್
ಮನುಷ್ಯನ ಎಲ್ಲ ಅಂಗಾಂಗಗಳು ಸರಿ ಇದ್ದೂ ಸರ್ಕಾರದ ಸೌಲಭ್ಯ ಪಡೆಯೋಕೆ ಹರಸಾಹಸ ಪಡ್ತಾಯಿರ್ತಾರೆ. ಆದ್ರೆ ಸರ್ಕಾರವೇ ಈ ಯುವಕನಿಗೆ ವಿಶೇಷ ಚೇತನ ಅನ್ನೋ ಸರ್ಟಿಫಿಕೇಟ್ ನೀಡಿ, ಅದಕ್ಕೆ ಮಾಸಾಶನವನ್ನೂ ನೀಡಿ ಇದೀಗ ಅಂಗಾಂಗ ಕೇಳಿದ್ರೆ ಪಾಪ ಆತ ಎಲ್ಲಿಂದ ತರೋದು..? ಏನು ಮಾಡೋಕೆ ಸಾಧ್ಯ? ಇನ್ನಾದ್ರೂ ಸಂಬಂಧಿಸಿದ ಅಧಿಕಾರಿ ವರ್ಗ ಅಮೃತ ಖೋಡೆಗೆ ಮಾಸಾಶನ ಬರುವಂತೆ ಮಾಡ್ತಾರಾ ಅಂತ ಕಾದು ನೋಡಬೇಕು.
ವರದಿ: ಸಂತೋಷ ಕೊಣ್ಣೂರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ