ಬೆಂಗಳೂರು(ಅ.09): ರಾಜ್ಯದಲ್ಲಿ ಉಪ ಚುನಾವಣಾ(Karnataka Bypoll) ಕಣ ರಂಗೇರಿದೆ. ಎಲ್ಲ ರಾಜಕೀಯ ಪಕ್ಷಗಳು(Political parties) ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ. ಗೆಲುವು ತಮ್ಮದಾಗಿಸಿಕೊಳ್ಳಲು ನಾನಾ ಕಸರತ್ತು ನಡೆಸುತ್ತಿದ್ದಾರೆ. ಇದರಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್(Regional Party JDS) ಹಿಂದೆ ಬಿದ್ದಿಲ್ಲ. ಖುದ್ದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರೇ(HD Devegowda) ಈ ವಯಸ್ಸಿನಲ್ಲೂ ಸಿಂದಗಿ(Sindagi)ಯಲ್ಲಿ ಮೊಕ್ಕಾಂ ಹೂಡಲಿದ್ದಾರೆ. ಮಾತ್ರವಲ್ಲ ಅವರ ಮೊಮ್ಮಗ ಹಾಸನ ಸಂಸದ ಪ್ರಜ್ವಲ್ ರೇವಣ್ಣ(MP Prajwal Revanna) ಕೂಡ ಸಿಂದಗಿಯಲ್ಲೇ ಪ್ರಚಾರಕ್ಕಾಗಿ ವಾಸ್ತವ್ಯ ಹೂಡಲಿದ್ದಾರೆ. ಇದರ ಮೂಲಕ ತಾತ ಮೊಮ್ಮಗನ ಜೋಡಿ ಸಿಂದಗಿಯಲ್ಲಿ ಮೋಡಿ ಮಾಡ್ತಾರಾ ಎನ್ನುವ ಚರ್ಚೆ ಹುಟ್ಟಿದಂತಾಗಿದೆ.
ಹಾನಗಲ್ಗಿಂತ ಸಿಂದಗಿಯಲ್ಲೇ ಹೆಚ್ಚು ಪ್ರಚಾರ ಮಾಡಲಿರುವ ಹೆಚ್.ಡಿ.ದೇವೇಗೌಡರು, ಅಲ್ಲಿಯೇ ತಂಗಲು ನಿರ್ಧರಿಸಿದ್ದಾರೆ. ಹಳ್ಳಿ ಹಳ್ಳಿಗಳಿಗೂ ಪ್ರವಾಸ ಮಾಡುತ್ತೇನೆ ಎಂದು ಅವರೇ ಹೇಳಿಕೊಂಡಿದ್ದಾರೆ. ಇನ್ನೊಂದೆಡೆ ಪ್ರಜ್ವಲ್ ರೇವಣ್ಣ ಕೂಡ ಅಕ್ಟೋಬರ್ 15 ರಿಂದ ಸಿಂದಗಿಯಲ್ಲೇ ಉಳಿದು, ಚುನಾವಣೆ ಮುಗಿಸಿಯೇ ಬರಲು ನಿರ್ಧರಿಸಿದ್ದಾರೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಎಲ್ಲ ನಾಯಕರು ಆಗಾಗ್ಗೆ ಪ್ರಚಾರಕ್ಕೆ ಬಂದರೂ, ಹೆಚ್.ಡಿ.ದೇವೇಗೌಡ-ಪ್ರಜ್ವಲ್ ರೇವಣ್ಣ ಮೇಲೆಯೇ ಸಿಂದಗಿ ಜವಾಬ್ದಾರಿ ವಹಿಸಲಿದ್ದಾರೆ.
ತಾತ - ಮೊಮ್ಮಗನ ಕಾಂಬಿನೇಷನ್ ಸೂತ್ರವೇನು?
ಸೀನಿಯರ್ ಹಾಗೂ ಜೂನಿಯರ್ ದಳಪತಿಗಳ ಜಂಟಿ ಪ್ರಚಾರದ ಹಿಂದೆ ಅವರದ್ದೇ ಆದ ತಂತ್ರಗಾರಿಕೆ ಇದೆ. ಹೇಳಿ ಕೇಳಿ ಸಿಂದಗಿ ಕ್ಷೇತ್ರದಿಂದ ಜೆಡಿಎಸ್ನ ಎಂ.ಸಿ.ಮನಗೂಳಿ ಆಯ್ಕೆಯಾಗಿದ್ದರು. ಹೀಗಾಗಿ ಅಲ್ಲಿ ಜೆಡಿಎಸ್ ಮತಗಳಿವೆ ಎಂಬುದು ಸತ್ಯ. ಬದಲಾದ ಸನ್ನಿವೇಶದಲ್ಲಿ ಅಶೋಕ್ ಮನಗೂಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಅಶೋಕ್ ಮನಗೂಳಿ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದರೂ, ಕಾರ್ಯಕರ್ತರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವುದು ಜೆಡಿಎಸ್ಗೆ ಅನಿವಾರ್ಯವಾಗಿದೆ.
ಇದನ್ನೂ ಓದಿ:HD Devegowda: ನನ್ನನ್ನು ಕೆಣಕಲು ಬರಬೇಡಿ, ಕೆಣಕಿದರೆ ಸರಿ ಇರಲ್ಲ; ಗುಡುಗಿದ ಎಚ್ಡಿ ದೇವೇಗೌಡ
ಪಕ್ಷದ ಹಿರಿಯ ನಾಯಕರನ್ನು ಭೇಟಿಯಾಗಿ ಪಕ್ಷಕ್ಕೆ ಕರೆತರುವುದು ದೇವೇಗೌಡರ ಪ್ರಮುಖ ಉದ್ದೇಶವಾಗಿದೆ. ಹೀಗಾಗಿ ಹಿರಿಯರನ್ನು ಸೆಳೆಯಲು ತಾವೇ ಖುದ್ದು ಫೀಲ್ಡಿಗೆ ಇಳಿಯುತ್ತಿದ್ದಾರೆ. ಮನವೊಲಿಸಿ ಹಳೆಯ ಮುಖಂಡರನ್ನು ಪಕ್ಷದಲ್ಲೇ ಹಿಡಿದಿಟ್ಟುಕೊಳ್ಳುವ ತಂತ್ರಗಾರಿಕೆ ಮಾಡಿದ್ದಾರೆ.
ಜೆಡಿಎಸ್ ಪಕ್ಷಕ್ಕೆ ಯುವಕರನ್ನು ಸೆಳೆಯುವುದು ಕೂಡ ಅಷ್ಟೇ ಪ್ರಮುಖವಾಗಿದೆ. ಯುವ ದಳಪತಿ, ಜೆಡಿಎಸ್ ಮಟ್ಟಿಗೆ ಪ್ರಜ್ವಲ್ ರೇವಣ್ಣ ಅವರೇ ಯೂಥ್ ಐಕಾನ್. ಪಕ್ಷದಲ್ಲೂ ಪ್ರಜ್ವಲ್ ರೇವಣ್ಣಗೆ ಅಷ್ಟೇ ವರ್ಚಸ್ಸಿದೆ. ಯುವಕರನ್ನು ಪಕ್ಷಕ್ಕೆ ಕರೆತರಲು, ಯುವ ಪಡೆ ಕಟ್ಟಲು ಪ್ರಜ್ವಲ್ ಅವರೇ ಸೂಕ್ತ ಎಂಬುದು ದೇವೇಗೌಡರ ಅಂಬೋಣ. ಇದೇ ಕಾರಣಕ್ಕೆ ಪ್ರಜ್ವಲ್ ಅವರನ್ನು ತಮ್ಮ ಜೊತೆಗೆ ಕರೆದುಕೊಂಡು ಜಂಟಿ ಪ್ರಚಾರದ ಮೆಗಾ ಪ್ಲ್ಯಾನ್ ಮಾಡಿದ್ದಾರೆ.
ಮೊದಲಿನಿಂದಲೂ ಉತ್ತರ ಕರ್ನಾಟಕದ ಸಂಘಟನೆಗೆ ಹೆಚ್ಚು ಆಸಕ್ತರಾಗಿರುವ ಪ್ರಜ್ವಲ್ಗೂ ಇದು ಸವಾಲು. ತುಸು ಹೆಚ್ಚೇ ಹುಮ್ಮಸ್ಸಿನಿಂದ ತೊಡಗಿಸಿಕೊಳ್ಳಲು ಪ್ರಜ್ವಲ್ ಮುಂದಾಗುತ್ತಿದ್ದಾರೆ.
ಸಿಂದಗಿ ಬಗ್ಗೆ ಜೆಡಿಎಸ್ಗೆ ಯಾಕಿಷ್ಟು ವಿಶ್ವಾಸ:
ಹಾನಗಲ್ ಕ್ಷೇತ್ರಕ್ಕಿಂತ ಸಿಂದಗಿ ಕ್ಷೇತ್ರದ ಬಗ್ಗೆ ಜೆಡಿಎಸ್ ಹೆಚ್ಚು ಉತ್ಸುಕತೆಯಿಂದ ಕೆಲಸ ಮಾಡುತ್ತಿದೆ. ಇದಕ್ಕೆ ಮೂಲ ಕಾರಣ, ದೇವೇಗೌಡರು ನೀಡಿರುವ ನೀರಾವರಿ ಕೊಡುಗೆ.
ಆಲಮಟ್ಟಿ ಜಲಾಶಯ ಮಟ್ಟ ಎತ್ತರಕ್ಕೆ ಏರಿಸುವ ಮೂಲಕ ಸಿಂದಗಿ ಹಾಗೂ ಇಂಡಿ ತಾಲೂಕಿನ ಲಕ್ಷಾಂತರ ಎಕರೆಗೆ ನೀರುಣಿಸಲು ಕಾರಣೀಭೂತರಾಗಿದ್ದರು. ಎಂ.ಸಿ.ಮನಗೂಳಿಯವರು ಅದೇ ಅಭಿಮಾನದಿಂದ ದೇವೇಗೌಡರ ಪ್ರತಿಮೆ ಮಾಡಿಸಿದ್ದಾರೆ.
ನೀರಾವರಿ ಯೋಜನೆ ನೀಡಿದ್ದಕ್ಕಾಗಿ ದೇವೇಗೌಡರ ಮೇಲಿನ ಅಭಿಮಾನ ಮತಗಳಾಗಿ ಪರಿವರ್ತನೆಯಾಗಬಹುದೆಂಬ ನಿರೀಕ್ಷೆಯಲ್ಲಿದೆ. ತಾತ ಮೊಮ್ಮಗ ಅಲ್ಲೇ ವಾಸ್ತವ್ಯ ಹೂಡಿ ನಾಜಿಯಾ ಶಕೀಲ್ ಪರ ಪ್ರಚಾರ ಮಾಡಲು ತೀರ್ಮಾನಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ