ಶಿವಮೊಗ್ಗ(ಸೆಪ್ಟೆಂಬರ್.04): ಈ ಜಮೀನಿನಲ್ಲಿ ಕೋಟ್ಯಾಂತರ ರೂಪಾಯಿ ಬೆಳೆ ಬಾಳುವ ಶ್ರೀಗಂಧ ಬೆಳೆಯಲಾಗಿದೆ. ಏನಿಲ್ಲ ಅಂದರೂ 50 ಕೋಟಿ ರೂಪಾಯಿ ಶ್ರೀಗಂಧ ಬೆಳೆದು ನಿಂತಿದೆ. ಅದರೆ, ಕಳ್ಳರ ಕಾಟಕ್ಕೆ ಶ್ರೀಗಂಧ ಬೆಳೆದ ರೈತ ಹೈರಾಣ ಆಗಿ ಹೋಗಿದ್ದಾನೆ. ಕಳೆದ 6 ತಿಂಗಳಲ್ಲಿ ಸರಿ ಸುಮಾರು 700 ಕ್ಕೂ ಹೆಚ್ಚು ಶ್ರೀಗಂಧ ಮರಗಳನ್ನು ರೈತನ ಹೊಲದಲ್ಲಿ ಕಳವು ಮಾಡಲಾಗಿದೆ. ಬೆಳೆದು ನಿಂತಿರುವ ಶ್ರೀಗಂಧ ಮರಗಳ ರಕ್ಷಣೆ ಮಾಡಿಕೊಳ್ಳುವುದು ಇವರಿಗೆ ಸಾಹಸದ ಕೆಲಸವಾಗಿದೆ. ಶಿವಮೊಗ್ಗದ ನಿವಾಸಿಯಾದ ಲೋಕೇಶಪ್ಪ ಮತ್ತು ಅವರ ಮಗ ಹರ್ಷವರ್ಧನ ಸಮಾರು 12 ಎಕರೆ ಪ್ರದೇಶದಲ್ಲಿ ಶ್ರೀಗಂಧ ಬೆಳೆದಿದ್ದಾರೆ.
ಕಳೆದ 15 ವರ್ಷಗಳ ಹಿಂದೆ ಶ್ರೀಗಂಧ ಸಸಿಗಳನ್ನು ನೆಟ್ಟಿದ್ದರು ಈಗ ಬೆಳೆದು ದೊಡ್ಡವಾಗಿವೆ. ಇನ್ನು ಎರಡು ಮೂರು ವರ್ಷ ಬೆಳೆದರೆ ಅದರಿಂದ 50 ಕೋಟಿ ರೂಪಾಯಿ ಆದಾಯ ಬರುತ್ತೇ. ಶಿವಮೊಗ್ಗ ತಾಲೂಕಿನ ಸುತ್ತುಕೋಟೆ ಗ್ರಾಮದಲ್ಲಿ ಶ್ರೀಗಂಧ ಮರಗಳನ್ನು ಬೆಳೆದಿದ್ದಾರೆ. ಸುಮಾರು 6 ಸಾವಿರ ಶ್ರೀಗಂಧ ಮರಗಳು ಅವರ ಜಮೀನಿನಲ್ಲಿವೆ. ಕಷ್ಟ ಪಟ್ಟು ಬೆಳೆದ ಶ್ರೀಗಂಧ ಈಗ ಕಳ್ಳರ ಪಾಲಾಗುತ್ತಿದೆ.
ಎಷ್ಟೇ ಕಷ್ಟ ಪಟ್ಟರು, ಶ್ರೀಗಂಧ ಮರಗಳನ್ನು ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಶ್ರೀಗಂಧದ ಮರಗಳ ರಕ್ಷಣೆ ಮಾಡಲು ಕಾವಲುಗಾರರನ್ನು ನೇಮಕ ಮಾಡಿಕೊಂಡಿದ್ದಾರೆ. ನಾಯಿಗಳನ್ನು ಸಾಕಿದ್ದಾರೆ. ಅದರೂ, ಕಳ್ಳರು ರಾತ್ರಿ ವೇಳೆ ಬಂದು ಮರಗಳನ್ನು ಕಟಾವು ಮಾಡಿಕೊಂಡು ಹೋಗುತ್ತಿದ್ದಾರೆ.
ಇನ್ನುಇರುವಂತ 5 ಸಾವಿರಕ್ಕೂ ಹೆಚ್ಚು ಮರಗಳ ಕಟಾವು ಮಾಡಿ ಮಾರಾಟ ಮಾಡೋಣಾ ಅಂತಾ ಅನುಮತಿ ಪಡೆಯಲು ವಿವಿಧ ಇಲಾಖೆಗಳ ಕಚೇರಿಗಳಿಗೆ ಅಲೆದು ಅಲೆದು ಲೋಕೇಶಪ್ಪ ಮತ್ತು ಮಗ ಹರ್ಷವರ್ಧನ ಸುಸ್ತಾಗಿ ಹೋಗಿದ್ದಾರೆ. ಕಳೆದ ನಾಲ್ಕೈದು ದಿನಗಳಲ್ಲಿ ಪ್ರತಿ ನಿತ್ಯ 15 ರಿಂದ 20 ಮರಗಳನ್ನು ಕಳ್ಳರು ಕಟಾವು ಮಾಡಿಕೊಂಡು ಹೋಗಿದ್ದಾರೆ. ಗಂಧದ ಮರದಲ್ಲಿ ಕೆಚ್ಚು ಇದ್ದರೆ ಅದನ್ನು ತೆಗೆದುಕೊಂಡು ಹೋಗುತ್ತಾರೆ. ಕೆಚ್ಚು ಇಲ್ಲದೇ ಹೋದರೆ ಆ ಮರಗಳನ್ನು ಅಲ್ಲೇ ಬಿಟ್ಟು ಹೋಗುತ್ತಿದ್ದಾರೆ. ಕಷ್ಟ ಪಟ್ಟಿ ಬೆಳೆದ ಮರಗಳ ಮಾರಣ ಹೋಮ ನೋಡಿ ಲೋಕೇಶಪ್ಪ ಮತ್ತು ಮಗ ಹರ್ಷವರ್ಧನ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ : ಹುಬ್ಬಳ್ಳಿ ಪೊಲೀಸರ ಭರ್ಜರಿ ಕಾರ್ಯಾಚರಣೆ ; ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ
ಕೋಟಿಗಟ್ಟಲೇ ಬೆಳೆ ಬಾಳುವ ಶ್ರೀಗಂಧದ ಮರ ಜಮೀನಿನಲ್ಲಿ ಇದ್ದು, ಅದರ ರಕ್ಷಣೆ ಹೇಗೆ ಮಾಡೋದು ಎಂಬುದು ಇವರಿಗೆ ದೊಡ್ಡ ತಲೆ ಬಿಸಿಯಾಗಿದೆ. ಇನ್ನು ಉತ್ತಮ ಶ್ರೀಗಂಧದ ಮರಕ್ಕೆ ಕೆಜಿಗೆ 12 ಸಾವಿರ ರೂಪಾಯಿ ದರವಿದೆ. ಇದನ್ನು ನೋಡಿಕೊಂಡೆ ಕಳ್ಳರು ಕಟಾವು ಮಾಡಿಕೊಂಡು ಹೋಗುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ