news18-kannada Updated:November 23, 2020, 6:13 AM IST
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಹುಬ್ಬಳ್ಳಿ(ನವೆಂಬರ್ 23): ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಹಾಗೂ ರಾಜ್ಯ ಸರ್ಕಾರದ ಜಲಧಾರೆ ಯೋಜನೆಯಡಿ 1,100 ಕೋಟಿ ರೂಪಾಯಿ ವೆಚ್ಚದಲ್ಲಿ ಧಾರವಾಡ ಜಿಲ್ಲೆಯಾದ್ಯಂತ ಮಲಪ್ರಭಾ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ಕುಸುಗಲ್ ಗ್ರಾಮದಲ್ಲಿ ಆಯೋಜಿಸಲಾದ ಘನ ತ್ಯಾಜ್ಯ ವಿಲೇವಾರಿ ಘಟಕ, ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಭೂಮಿ ಪೂಜೆ, ಮುಕ್ತಿವನ ಸಹಾಯ ಕೇಂದ್ರ ಉದ್ಘಾಟನೆ ನೆರವೇರಿಸಿ ಹಾಗೂ ಕಸ ವಿಲೇವಾರಿ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ಹರ್ ಘರ್ ಜಲ್ ಯೋಜನೆ ಮೂಲಕ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುವುದು. 24 ಗಂಟೆಯೂ ನೀರು ಲಭ್ಯವಾಗುವಂತೆ ಮಾಡಲಾಗುವುದು. ಸ್ವಚ್ಛ ಭಾರತ್ ಸ್ವಚ್ಛ ಗ್ರಾಮ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯತಿಗೆ ಸಾಕಷ್ಟು ಅನುದಾನ ಒದಗಿಸಲಾಗುತ್ತಿದೆ ಎಂದರು.
ಪ್ರತಿ ಮನೆಯಲ್ಲೂ ಕಸ ವಿಂಗಡಣೆ ಮಾಡಬೇಕು. ಹಸಿ ಹಾಗೂ ಕಸ ಸಂಗ್ರಹಿಸಲು ಗ್ರಾಮ ಪಂಚಾಯತಿಯಿಂದಲೇ ಹಸಿರು ಮತ್ತು ನೀಲಿ ಬುಟ್ಟಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಕುಸುಗಲ್ ಗ್ರಾಮದಲ್ಲಿ 20 ಲಕ್ಷ ಅನುದಾನದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲಾಗುತ್ತಿದೆ. ಘಟಕ ನಿರ್ಮಾಣಕ್ಕೆ 5 ಲಕ್ಷ ಹಣವನ್ನು ನರೇಗಾದಡಿ ಕೊಡಲಾಗಿದೆ. ಧಾರವಾಡ ಜಿಲ್ಲೆಗೆ 60 ತ್ಯಾಜ್ಯ ವಿಲೇವಾರಿ ಘಟಕ ಮಂಜೂರು ಆಗಿವೆ. 20 ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಸ್ವಚ್ಚತೆ ಗಮನ ನೀಡದೆ ಇರುವುದರಿಂದ ಹಲವು ಖಾಯಿಲೆಗಳು ಸಾಂಕ್ರಾಮಿಕ ರೋಗಗಳು ಹರಡುತ್ತವೆ. ರೋಗ ಬಂದಾಗ ಆಸ್ಪತ್ರೆಗಳಿಗೆ ಹಣ ವ್ಯಯಿಸುವ ಬದಲು ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಇದನ್ನೂ ಓದಿ :
ಧಾರ್ಮಿಕ ಭಾವನೆಗಳಿಗೆ ಅಪಚಾರ; ಡಿಎಂಕೆ ವಿರುದ್ಧ ಗುಡುಗಿದ ಡಿಸಿಎಂ ಅಶ್ವತ್ಹನಾರಾಯಣ
ಕುಸುಗಲ್ ಗ್ರಾಮಸ್ಥರು ನೀಡಿದ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವರು ಹುಬ್ಬಳ್ಳಿ ಬೈಪಾಸ್ ರಸ್ತೆಯಿಂದ ಕುಸುಗಲ್ ಗ್ರಾಮಕ್ಕೆ ಸರ್ವೀಸ್ ರೋಡ್ ನಿರ್ಮಿಸಲು ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ಸಂಸ್ಥೆ ಅಧ್ಯಕ್ಷ ಹಾಗೂ ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಜಿ.ಪಂ.ಉಪಾಧ್ಯಕ್ಷ ಶಿವಾನಂದ ಕರಿಗಾರ, ಜಿ.ಪಂ ಸಿಇಓ ಬಿ.ಸುಶೀಲಾ, ತಾಲೂಕು ಪಂಚಾಯತಿ ಸದಸ್ಯೆ ದ್ಯಾವಲಾಬಿ ಕೋಂ ಮಿರ್ಜಾನವರ, ತಾ.ಪಂ.ಇ ಓ ಗಂಗಾಧರ ಕಂದಕೋರ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಶಿಧರ ಸೇರಿದಂತೆ ಮಾಜಿ ಗ್ರಾ. ಪಂ. ಸದಸ್ಯರು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
Published by:
G Hareeshkumar
First published:
November 23, 2020, 6:13 AM IST