ಧಾರವಾಡ : ಕಳೆದ ನಾಲ್ಕು ದಿನಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು, ಇದರಿಂದಾಗಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಬಹಳಷ್ಟು ಮನೆಗಳು ಮತ್ತು ಬೆಳೆ ಹಾನಿಯಾಗಿದೆ. ಸರಕಾರದಿಂದ ನಷ್ಟದ ಪರಿಹಾರ ನೀಡಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕ್ರಮಕೈಗೊಳ್ಳಲಾಗಿದೆ ಎಂದು ಬೃಹತ್, ಮಧ್ಯಮ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.
ನವಲಗುಂದ ತಾಲೂಕಿನ ಯಮನೂರ ಹತ್ತಿರದ ಬೆಣ್ಣಿ ಹಳ್ಳದಲ್ಲಿ ಎನ್.ಡಿ.ಆರ್.ಎಫ್. ತಂಡ ನಡೆಸಿದ ತುಂಬಿ ಹರಿಯುವ ಹಳ್ಳದ ನೀರಿನಲ್ಲಿ ಜೀವರಕ್ಷಣೆ ಕುರಿತು ಮಾಡಿದ ಅಣಕು ಪ್ರದರ್ಶನ ವೀಕ್ಷಣೆ ಮಾಡಿದ ನಂತರ ಮಾತನಾಡಿದ ಅವರು,
"ನವಲಗುಂದಕ್ಕೆ ವಿಶೇಷವಾಗಿ ಎನ್ ಡಿ ಆರ್ ಎಫ್ ತಂಡವನ್ನು ನಿಯೋಜನೆ ಮಾಡುವ ಮೂಲಕ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಯಾವುದೇ ಸಮಯದಲ್ಲಿ ಅತೀ ಮಳೆಯಿಂದ ಪ್ರವಾಹ, ಜನ,ಜಾನುವಾರು ಆಪತ್ತಿನಲ್ಲಿ ಸಿಲುಕಿದರೆ ಮತ್ತು ಯಾವುದೇ ರೀತಿ ಘಟನೆಗಳು ಸಂಭವಿಸಿದ್ದರೆ ತಕ್ಷಣ ಎನ್ ಡಿ ಆರ್ ಎಫ್ ತಂಡ ರಕ್ಷಣಾ ಕಾರ್ಯದಲ್ಲಿ ಪ್ರವೃತ್ತಿಯಾಗಲಿದೆ" ಎಂದರು.
"ಎನ್.ಡಿ.ಆರ್.ಎಫ್ ತಂಡದೊಂದಿಗೆ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಘ, ಯುವಕ ಮಂಡಳ, ಸಂಸ್ಥೆಗಳು ಸಾಮಾಜಿಕ ಸೇವೆಗೆ ನಮ್ಮೊಂದಿಗೆ ಕೈ ಜೋಡಿಸಿದ್ದಾರೆ. ತುರ್ತು ಪರಿಹಾರ ಕಾರ್ಯಗಳಿಗೆ ತಕ್ಷಣಕ್ಕೆ ನೇರವಾಗಲು ಈಜು, ಧೈರ್ಯ, ಕ್ರಿಯಾಶೀಲತೆ ಇರುವ ಮತ್ತು ಸ್ಥಳಿಯವಾಗಿ ಗ್ರಾಮಗಳಲ್ಲಿಯೇ ಲಭ್ಯವಿರುವ ಯುವಕರ ತಂಡಗಳನ್ನು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ವಿಶೇಷ ಮುತುವರ್ಜಿವಹಿಸಿ ಸಿದ್ಧಗೊಳಿಸಿದ್ದಾರೆ. ಇದೊಂದು ವಿಶೇಷ ಪ್ರಯತ್ನವಾಗಿದೆ.
ಇದನ್ನೂ ಓದಿ : ’ಯುವ ಜನರಿಗೆ ಉದ್ಯೋಗ ನೀಡುವ ಶಕ್ತಿ ಮೋದಿಗಿಲ್ಲ’; ಉದ್ಯೋಗ ಒದಗಿಸಿ ಅಭಿಯಾನ ಆರಂಭಿಸಿದ ರಾಹುಲ್ ಗಾಂಧಿ
ನವಲಗುಂದ ತಾಲೂಕಿಗೆ ಸಿಮೀತವಾಗಿ 85 ಯುವಕರ ತಂಡ ಹಾಗೂ ಧಾರವಾಡ ಜಿಲ್ಲೆಗೆ 200 ಯುವಕ ತಂಡ ರಚಿಸಿ, ಎನ್ ಡಿ ಆರ್ ಎಫ್ ತಂಡದೊಂದಿಗೆ ಕೈ ಜೋಡಿಸಿರುವುದು ಶ್ಲಾಘನೀಯ ಕೆಲಸ. ಪ್ರವಾಹ ಪರಿಸ್ಥಿತಿ ಎದುರಿಸಲು ಸರಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಅಧಿಕಾರಿಗಳು ಹಗಲಿರಳು ಶ್ರಮಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ