ದಕ್ಷಿಣ ಕನ್ನಡ; ಜಿಲ್ಲೆಯ ಪುತ್ತೂರು ತಾಲೂಕಿನ ಚೇಳ್ಯಡ್ಕದಲ್ಲಿರುವ ಬ್ರಿಟೀಷ್ ಕಾಲದ ಸೇತುವೆ ಕುಸಿಯುವ ಭೀತಿಯಲ್ಲಿದೆ. ಪುತ್ತೂರಿನಿಂದ ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಈ ಸೇತುವೆ ಇದೀಗ ಕೊಚ್ಚಿ ಹೋಗುವ ಭೀತಿಯಲ್ಲಿದ್ದು, ಜನ ಭಯದಲ್ಲೇ ಪ್ರತಿನಿತ್ಯ ಓಡಾಡುವಂತಾಗಿದೆ.
ಬ್ರಿಟೀಷ್ ಕಾಲದಲ್ಲಿ ನಿರ್ಮಾಣಗೊಂಡಿರುವ ಈ ಸೇತುವೆ ಮಳೆಗಾಲದಲ್ಲಿ ಚೇಳ್ಯಡ್ಕ ಹೊಳೆಯ ನೀರಿಗೆ ಸಂಪೂರ್ಣ ಮುಳುಗಿ ಹೋಗುತ್ತದೆ. ಈ ಕಾರಣದಿಂದ ಈ ಸೇತುವೆಯನ್ನು ಮುಳುಗು ಸೇತುವೆ ಎಂದೂ ಕರೆಯಲಾಗುತ್ತದೆ. ಕಳೆದ ಬಾರಿ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಯ ಪ್ರಭಾವಕ್ಕೆ ಈ ಸೇತುವೆಯೂ ನಲುಗಿತ್ತು. ಮಳೆ ಪ್ರವಾಹದಿಂದಾಗಿ ಸೇತುವೆಯ ಎಲ್ಲಾ ಆಧಾರ ಸ್ತಂಭಗಳಲ್ಲೂ ಬಿರುಕು ಕಾಣಿಸಿಕೊಂಡಿತ್ತು.
ಆದರೆ, ಬಿರುಕು ಬಿಟ್ಟ ಸೇತುವೆಯನ್ನು ಸರಿಪಡಿಸುವ ಗೋಜಿಗೆ ಸಂಬಂಧಪಟ್ಟ ಇಲಾಖೆಯಾಗಲೀ, ಜನಪ್ರತಿನಿಧಿಗಳಾಗಲೀ ಹೋಗದ ಹಿನ್ನಲೆಯಲ್ಲಿ ಇದೀಗ ಈ ಸೇತುವೆ ಮತ್ತಷ್ಟು ಅಪಾಯಕಾರಿಯಾಗಿ ಬದಲಾಗಿದೆ. ದಿನವೊಂದಕ್ಕೆ ನೂರಾರು ವಾಹನಗಳು ಈ ಸೇತುವೆಯ ಮೂಲಕ ಹಾದು ಹೋಗುತ್ತಿದ್ದು, ಯಾವುದೇ ಸಮಯದಲ್ಲೂ ಈ ಸೇತುವೆ ಕುಸಿದು ಬೀಳುವ ಹಂತದಲ್ಲಿದೆ.
ಅತ್ಯಂತ ಗ್ರಾಮೀಣ ಭಾಗವಾಗಿರುವ ಪಾಣಾಜೆ, ಬೆಟ್ಟಂಪಾಡಿ, ಚೇಳ್ಯಡ್ಕ ಮೊದಲಾದ ಪ್ರದೇಶಗಳ ಜನ ತನ್ನ ದೈನಂದಿನ ಆಗತ್ಯಗಳಿಗಾಗಿ ಇದೇ ರಸ್ತೆಯನ್ನು ಬಳಸುತ್ತಿದ್ದಾರೆ. ಆದರೆ ಈ ಬಾರಿಯ ಮಳೆಗಾಲದಲ್ಲಿ ಈ ಸೇತುವೆ ಉಳಿಯುವುದು ಕಷ್ಟಸಾಧ್ಯವಾಗಿದ್ದು, ದುರಸ್ತಿ ನಡೆಸದ ಈ ಸೇತುವೆಯ ಮೇಲೆ ವಾಹನಗಳ ಸಂಚಾರವೂ ಅಪಾಯ ತಂದೊಡ್ಡಲಿದೆ ಎನ್ನಲಾಗಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಈ ಕುರಿತು ಸೂಕ್ತ ಕ್ರಮ ಜರುಗಿಸಬೇಕು ಎಂಬುದು ಸ್ಥಳೀಯರ ಒತ್ತಾಸೆಯಾಗಿದೆ
ಇದನ್ನೂ ಓದಿ : ಅತೀಹೆಚ್ಚು ಕೊರೋನಾ ಇರುವ ದೇಶಗಳ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಭಾರತ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ