news18-kannada Updated:January 20, 2021, 2:42 PM IST
ಆನಂದ್ ಸಿಂಗ್ ವಿರುದ್ಧ ರೈತರ ಹೋರಾಟ.
ಕೋಲಾರ: ಜಿಲ್ಲೆಯ ಗಡಿಯಲ್ಲಿ ಆನೆ ಹಾವಳಿ ಮಿತಿ ಮೀರಿದ್ದು ಕೂಡಲೇ ಶಾಶ್ವತವಾದ ಪರಿಹಾರ ಒದಗಿಸುವಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಸಂಘಟನೆ ಕಾರ್ಯಕರ್ತರು ಬೊಂಬೆ ಆನೆಗಳನ್ನಿಟ್ಟು ವಿನೂತನವಾಗಿ ಇಂದು ಪ್ರತಿಭಟನೆ ನಡೆಸಿದ್ದಾರೆ. ಕೋಲಾರ ನಗರ ಹೊರವಲಯದ ಬಂಗಾರಪೇಟೆ ರಸ್ತೆಯಲ್ಲಿರುವ ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿಗಳ ಕಚೇರಿ ಎದುರಿನ ರಸ್ತೆಯಲ್ಲಿ ಕುಳಿತು, ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಕೋಲಾರ ಜಿಲ್ಲಾಡಳಿತ ಮತ್ತು ಅರಣ್ಯ ಸಚಿವ ಆನಂದ್ ಸಿಂಗ್ ವಿರುದ್ದ ಘೋಷಣೆಗಳನ್ನ ಹಾಕಿದರು. ರೈತ ಮುಖಂಡ ನಾರಾಯಣಗೌಡ ನೇತೃತ್ವದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ, ಸಚಿವ ಆನಂದ್ ಸಿಂಗ್ ಭಾವಚಿತ್ರಗಳನ್ನ ಹಿಡಿದುಕೊಂಡು ಸಚಿವರು ಕಾಣೆಯಾಗಿದ್ದಾರೆ. ಹುಡುಕಿ ಕೊಟ್ಟವರಿಗೆ 25 ಲಕ್ಷ ಹಣ, 5 ಎಕರೆಯ ಕೃಷಿ ಜಮೀನು ಬಹುಮಾನವಾಗಿ ನೀಡುವುದಾಗಿ ಫಲಕಗಳನ್ನ ಪ್ರದರ್ಶಿಸಿದರು. ಇದೇ ವೇಳೆ ಮಾತನಾಡಿದ ಹೋರಾಟಗಾರರು ಸಚಿವರು ಶಾಶ್ವತವಾಗಿ ಆನೆ ಹಾವಳಿ ತಡೆಗಟ್ಟದೆ ಹೊದಲ್ಲಿ, ವಿಧಾನಸೌಧ ಮುತ್ತಿಗೆ ಹಾಕುವ ಎಚ್ಚರಿಕೆಯನ್ನು ನೀಡಿದರು.
ಕೋಲಾರ ಜಿಲ್ಲೆಯ ಬಂಗಾರಪೇಟೆ, ಕೆಜಿಎಪ್, ಮಾಲೂರು ತಾಲೂಕಿನ ಗಡಿಯಲ್ಲಿ, ಪ್ರತಿವರ್ಷವೂ ವರ್ಷಾಂತ್ಯದಲ್ಲಿ ಕಾಡಾನೆಗಳು ಲಗ್ಗೆಯಿಟ್ಟು ಭಾರೀ ಅವಾಂತರಗಳು ಸೃಷ್ಟಿಸುತ್ತಿದ್ದು, ಗಡಿಯಲ್ಲಿನ ರೈತರ ಅಪಾರ ಪ್ರಮಾಣದ ಬೆಳೆಗಳು ನಷ್ಟವಾಗುತ್ತಿದೆ. 2019-20 ರಲ್ಲಿ ಸುಮಾರು 10 ಕ್ಕೂ ಹೆಚ್ಚು ರೈತರ ಮೇಲೆ ಆನೆಗಳು ದಾಳಿ ನಡಸಿದ್ದು, 4 ಮಂದಿ ರೈತರು ಆನೆ ದಾಳಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಕಳೆದ ಎರಡು ವರ್ಷದಲ್ಲಿ ಆನೆ ದಾಳಿಯಿಂದ ಕೋಟ್ಯಾಂತರ ರೂಪಾಯ ಬೆಳೆ ನಷ್ಟವಾಗಿದ್ದು, ಸರ್ಕಾರದಿಂದ ಮೃತಪಟ್ಟ ಪ್ರತಿ ಮನೆಯವರಿಗೆ 7.50 ಲಕ್ಷ ಹಾಗೂ ಬೆಳೆ ನಾಶವಾದ ಒಟ್ಟು ರೈತೆರಿಗೆ 91 ಲಕ್ಷ ಪರಿಹಾರವಾಗಿ ಹಣ ನೀಡಿದ್ದಾರೆ.
ಇನ್ನೂ ತೆಂಗು ನೇರಳೆ ಮರಗಳು ಹಾನಿಯಾದರು ಇಷ್ಟು ದಿನ ರೈತರಿಗೆ ಪರಿಹಾರ ನೀಡಲು ತಾಂತ್ರಿಕ ಸಮಸ್ಯೆಯಿತ್ತು, ಆದರೀಗ ಸರ್ಕಾರಕ್ಕೆ ಮನವಿ ಸಲ್ಲಿಸಿದ ನಂತರ ತೆಂಗು ಮತ್ತು ನೇರಳೆ ಮರಗಳಿಗು ಪರಿಹಾರ ನೀಡುವುದಾಗಿ ಅರಣ್ಯ ಇಲಾಖೆ ತಿಳಿಸಿದೆ.
ಆನೆ ಕಾರಿಡಾರ್ ನಿರ್ಮಿಸಲು 79 ಕೋಟಿ ಅನುದಾನ ಬೇಕಿದೆ:
ರೈತಸಂಘಟನೆ ಪ್ರತಿಭಟನೆ ಸ್ತಳಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಜಿಲ್ಲಾ ಅರಣ್ಯಾಧಿಕಾರಿ ಶಿವಶಂಕರ್, "ಕೋಲಾರ ಜಿಲ್ಲೆಯ ಬಂಗಾರಪೇಟೆಯ ಆಂಧ್ರ ಗಡಿಯಲ್ಲಿ ಆನೆಗಳ ಹಾವಳಿ ಹೆಚ್ಚಿದ್ದು, ಶಾಶ್ವತವಾಗಿ ಆನೆ ಕಾಟ ತಪ್ಪಿಸಲು ಈಗಾಗಲೇ 79 ಕೋಟಿ ರೂಪಾಯಿ ವೆಚ್ಚದಲ್ಲಿ ರೈಲ್ವೆ ಕಂಬಿಗಳನ್ನು ಬಳಿಸಿಕೊಂಡು ಆನೆ ಕಾರಿ ಕಾರಿಡಾರ್ ನಿರ್ಮಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಆರ್ಥಿಕ ಸಂಕಷ್ಟ ಹಿನ್ನಲೆ ಸದ್ಯಕ್ಕೆ ಸಮ್ಮತಿ ಸಿಗುವ ಸಾಧ್ಯತೆಯಿಲ್ಲ" ಎಂದು ಶಿವಶಂಕರ್ ತಿಳಿಸಿದ್ದಾರೆ.
ಇದನ್ನೂ ಓದಿ: ವಿನಾಃಕಾರಣ ಕಾಂಗ್ರೆಸ್ ಕೃಷಿ ಕಾಯ್ದೆಯನ್ನು ವಿರೋಧಿಸುತ್ತಿದೆ, ಸುಳ್ಳು ಹೇಳುತ್ತಿದೆ; ಕೈ ಜಾಥಾ ವಿರುದ್ಧ ರಾಮುಲು ಕಿಡಿ
ಇನ್ನು ತ್ವರಿತವಾಗಿ ಆನೆ ಹಾವಳಿಯನ್ನ ತಪ್ಪಿಸಲು 2 ಕೋಟಿ ರೂಪಾಯಿ ವೆಚ್ಚದಲ್ಲಿ ಸೋಲಾರ್ ಫೆನ್ಸಿಂಗ್ ಯೋಜನೆ ಡಿಪಿಆರ್ ಸಿದ್ದ ಪಡಿಸಿ ಸರ್ಕಾರಕ್ಕೆ ಮನನಿ ಸಲ್ಲಿಸಿದ್ದು, ಸರ್ಕಾರ ಸಮ್ಮತಿ ನೀಡದರೆ, ಹಾಲಿ ವರ್ಷದಲ್ಲಿ ಕಾಮಗಾರಿಯನ್ನ ಕೈಗೆ ಎತ್ತಿಕೊಕೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಈಡೇರದ ಅರಣ್ಯ ಸಚಿವ ಆನಂದ್ ಸಿಂಗ್ ಭರವಸೆ
ಕಳೆದ ವರ್ಷ ಕೋಲಾರದ ಗಡಿಯಲ್ಲಿ ಆನೆ ಹಾವಳಿಯಿಂದ ಅರಣ್ಯ ಇಲಾಖೆಯ ಕಾವಲುಗಾರ ಹಾಗು ಓರ್ವ ರೈತ ಸಾವನ್ನಪ್ಪಿದರು, ಕೂಡಲೇ ಕೋಲಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಸಚಿನ ಅನಂದ್ ಸಿಂಗ್, ಮುಂದಿನ ಆರ್ಥಿಕ ವರ್ಷದಲ್ಲಿ ಆನೆ ಕಾರಿಡಾರ್ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗು ಸಚಿವರು ನೀಡಿದ ಆಶ್ವಾಸನೆ ಇನ್ನು ಹಾಗೆಯೆ ಉಳಿದಿದೆ, ಹೀಗಾಗಿ ರೈತಸಂಘಟನೆ ಕಾರ್ಯಕರ್ತರು, ಸಚಿವರು ಕಾಣೆಯಾಗಿದ್ದಾರೆಂದು ಪ್ರತಿಭಟನೆಯ ಮೂಲಕ ಸರ್ಕಾರದ ಗಮನ ಸೆಳೆಯಲು ಯತ್ನಿಸಿದರು.
Published by:
MAshok Kumar
First published:
January 20, 2021, 2:42 PM IST