ಜಿಎಸ್ಟಿ ಪರಿಹಾರದ ಪಾಲಿನ ಬದಲಿಗೆ ಆರ್ಬಿನಿಂದ ಸಾಲ - ಕೇಂದ್ರ ಸರ್ಕಾರ ಸಲಹೆಗೆ ಪ್ರಿಯಾಂಕ್ ಖರ್ಗೆ ಆಕ್ರೋಶ
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಆರ್ಥಿಕ ಕುಸಿತ ಶುರುವಾಗಿದ್ದು, ಈಗ ಕೊರೋನಾದ ನೆಪ ಇಟ್ಟುಕೊಂಡು ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ
ಕಲಬುರ್ಗಿ(ಸೆಪ್ಟೆಂಬರ್. 03): ಜಿಎಸ್ಟಿಯ ರಾಜ್ಯದ ಪಾಲು ಮತ್ತು ಪರಿಹಾರ ಪಾವತಿ ಬದಲಿಗೆ ಆರ್ಬಿಐನಿಂದ ಸಾಲ ಪಡೆಯಲು ಕೇಂದ್ರ ಸರ್ಕಾರ ನೀಡಿರುವ ಸಲಹೆಯನ್ನು ತಿರಸ್ಕರಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಿಂದ 25 ಬಿಜೆಪಿ ಸಂಸದರನ್ನು ಆರಿಸಿ ಕಳಿಸಿದ್ದಕ್ಕಾಗಿ ರಾಜ್ಯದ ಜನಕ್ಕೆ ಕೇಂದ್ರ ಈ ರೀತಿಯ ಶಿಕ್ಷೆ ನೀಡುತ್ತಿದೆಯಾ ಎಂದು ಪ್ರಶ್ನಿಸಿದ್ದಾರೆ.
ಜಿಎಸ್ಟಿ ಪಾಲಿನ ವಿಷಯದಲ್ಲಿ ಕೇಂದ್ರ ನೀಡಿರುವ ಸಲಹೆಯನ್ನು ಯಾವುದೇ ಕಾರಣಕ್ಕೂ ಒಪ್ಪಬಾರದು. ಜಿಎಸ್ಟಿ ತೆರಿಗೆ ವಸೂಲಿಯಲ್ಲಿ ಉಂಟಾಗುವ ನಷ್ಟವನ್ನು 2020ರವರೆಗೆ ಕಟ್ಟಿಕೊಡುವ ಬದ್ಧತೆಯನ್ಜು ಕೇಂದ್ರ 2017ರ ಜಿಎಸ್ಟಿ ಕಾಯ್ದೆಯಲ್ಲಿ ವ್ಯಕ್ತಪಡಿಸಿದೆ. ಈಗ ಕೇಂದ್ರ ಅದರಂತೆ ನಡೆದುಕೊಳ್ಳಬೇಕಿದೆ ಎಂದಿದ್ದಾರೆ.
ವ್ಯಾಟ್ ಜಾರಿಯಲ್ಲಿದ್ದಾಗ ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು ಸಿಗುತ್ತಿತ್ತು. ಯುಪಿಎ ಸರ್ಕಾರ ರೂಪಿಸಿದ್ದ ಉತ್ತಮ ಜಿಎಸ್ಟಿ ಕಾಯ್ದೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಅವೈಜ್ಞಾನಿಕವಾಗಿ ಬದಲಾವಣೆ ಮಾಡಿ ಜಾರಿಗೆ ತಂದಿದೆ. ಇದರಿಂದ ಆರ್ಥಿಕ ವ್ಯವಸ್ಥೆಗೆ ಹಾನಿಯಾಗಲಿದೆ ಎಂದು ಕಾಂಗ್ರೆಸ್ ಮೊದಲಿನಿಂದಲೂ ಹೇಳುತ್ತಾ ಬಂದಿದೆ. ಪ್ರತಿಪಕ್ಷಗಳ ಮಾತನ್ನು ಕೇಳಿಸಿಕೊಳ್ಳದೆ ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆಯ ತೋರಿಸಿತು. ತಾನು ಮಾಡಿದ ತಪ್ಪಿಗೆ ದೇಶದ ಜನ ದಂಡ ಕಟ್ಟಬೇಕೆಂದು ಬಯಸುತ್ತಿರುವುದು ಅಸಹನೀಯ ಸಂಗತಿ ಎಂದು ಕಿಡಿಕಾರಿದ್ದಾರೆ.
GSTಯಲ್ಲಿನ ರಾಜ್ಯದ ಪಾಲು & ಪರಿಹಾರ ಪಾವತಿಸುವ ಬದಲಿಗೆ RBIನಿಂದ ಸಾಲ ಪಡೆಯುವಂತೆ ಕೇಂದ್ರ ಸರ್ಕಾರ ನೀಡಿರುವ ಸಲಹೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು.
GST ತೆರಿಗೆ ವಸೂಲಿಯಲ್ಲಿ ಉಂಟಾಗುವ ನಷ್ಟವನ್ನು 2020ರವರೆಗೆ ಕಟ್ಟಿಕೊಡುವ ಬದ್ಧತೆಯನ್ಜು ಕೇಂದ್ರ 2017ರ GST ಕಾಯ್ದೆಯಲ್ಲಿ ವ್ಯಕ್ತಪಡಿಸಿದೆ. ಅದರಂತೆ ನಡೆದುಕೊಳ್ಳಬೇಕಿದೆ. (1/n)
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) September 3, 2020
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಆರ್ಥಿಕ ಕುಸಿತ ಶುರುವಾಗಿದ್ದು, ಈಗ ಕೊರೋನಾದ ನೆಪ ಇಟ್ಟುಕೊಂಡು ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಭಾವನಾತ್ಮಕ ವಿಷಯಗಳನ್ನ ಕೇಂದ್ರಿಕರಿಸಿ ದ್ವೇಷ ರಾಜಕೀಯದಿಂದ ಅಭಿವೃದ್ಧಿಯನ್ನು ಹಳ್ಳ ಹಿಡಿಸಿದ ಬಿಜೆಪಿ, ತಾನು ಮಾಡಿದ ತಪ್ಪಿಗೆ ಜನ ದಂಡ ಕಟ್ಟಬೇಕೆಂದು ಬಯಸುತ್ತಿರುವುದು ಹಿಟ್ಲರ್ ಧೋರಣೆ. ಮುಖ್ಯಮಂತ್ರಿ ಯಡಿಯೂರಪ್ಪ ಪಕ್ಷದ ಮುಲಾಜಿಗೆ ಒಳಗಾಗಬಾರದು. ರಾಜ್ಯದ ಹಿತದೃಷ್ಟಿಯಿಂದ ಕೇಂದ್ರ ಸಚಿವರ ಸಲಹೆಯನ್ನು ಸಾರಾಸಗಟಾಗಿ ತಳ್ಳಿಹಾಕಬೇಕೆಂದು ಆಗ್ರಹಿಸಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಲಹೆ ಒಪ್ಪಿಕೊಂಡು ಸಾಲ ಪಡೆದಿದ್ದೆ ಆದರೆ ಅದರ ಬಡ್ಡಿ ಹೊರೆಯನ್ನು ರಾಜ್ಯದ ಜನರು ಹೊರಬೇಕಾಗುತ್ತದೆ. ನಮ್ಮ ತೆರಿಗೆಯನ್ನು ಕೊಟ್ಟು, ಅದರ ಹಿಡಗಂಟಿನ ಮೇಲೆ ಸಾಲ ಪಡೆದು, ಅದಕ್ಕೆ ಮತ್ತೆ ನಾವೇ ಬಡ್ಡಿ ಕಟ್ಟುವುದು ಎಂತಹ ಶಿಕ್ಷೆ. 25 ಜನ ಸಂಸದರನ್ನು ಆರಿಸಿ ಕಳುಹಿಸಿದ್ದಕ್ಕಾಗಿ ಕನ್ನಡಿಗರಿಗೆ ಈ ಶಿಕ್ಷೆಯೇ ಎಂದು ಪ್ರಿಯಾಂಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯದ ಬೊಕ್ಕಸಕ್ಕೆ ಸಾಲದ ಹೊರೆ ಹೊರಿಸಿದರೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಅತಿವೃಷ್ಠಿ, ಅನಾವೃಷ್ಠಿಗಳಿಗೆ ಪರಿಹಾರ ಜೊತೆ ತೆರಿಗೆ ಪಾಲನ್ನೂ ನಿರಾಕರಿಸಿರುವುದು ದೊಡ್ಡ ಆಘಾತಕಾರಿ. ಮೋದಿ ಕಾರಣದಿಂದಾಗಿ ಕನ್ನಡಿಗರಿಗೆ ಜಿಎಸ್ಟಿ ಜೊತೆಗೆ ಆರ್ಬಿಐ ಸಾಲ ಹಾಗೂ ಬಿಜೆಪಿಯ ಪಡ್ಡಿಯನ್ನೂ ಪಾವತಿಸುವ ಕರ್ಮ ರಾಜ್ಯದ ಜನತೆಗೆ ಬಂದೊದಗಿಗೆ ಎಂದು ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.
Published by:G Hareeshkumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ