• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಡ್ರಗ್ ಮಾಫಿಯಾ ತನಿಖಾ ತಂಡದ ಮೇಲೆ ಒತ್ತಡ ಹೇರಲಾಗುತ್ತಿದೆ; ಸಚಿವ ಸಿ.ಟಿ. ರವಿ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಕಿಡಿ

ಡ್ರಗ್ ಮಾಫಿಯಾ ತನಿಖಾ ತಂಡದ ಮೇಲೆ ಒತ್ತಡ ಹೇರಲಾಗುತ್ತಿದೆ; ಸಚಿವ ಸಿ.ಟಿ. ರವಿ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಕಿಡಿ

ಸಚಿವ ಸಿ.ಟಿ. ರವಿ

ಸಚಿವ ಸಿ.ಟಿ. ರವಿ

ಯಾರ ಒತ್ತಡ ಇದೆ, ಯಾಕೆ ಒತ್ತಡ ಇದೆ ಅಂತ ಸಿ ಟಿ ರವಿಯವ್ರೇ ಹೇಳಬೇಕು. ಇಂತಹ ದೊಡ್ಡ ಸುದ್ದಿಯಾದ್ಮೇಲೆ ಸಿ.ಟಿ. ರವಿ ತಮ್ಮ ಹೇಳಿಕೆ ಬಗ್ಗೆ ಮಾಹಿತಿ ಕೊಡಬೇಕು. ಜವಾಬ್ದಾರಿಯ ಸ್ಥಾನದಲ್ಲಿರೋರು. ಉಡಾಫೆಯ ಹೇಳಿಕೆ ಕೊಡೋರಲ್ಲ. ಇನ್ನೂ ಮಾಹಿತಿ ಗೊತ್ತಿದ್ದು ಮುಚ್ಚಿಟ್ರೆ ಅದು ಸಹ ತಪ್ಪು. ಯಾರೇ ಶಾಮೀಲಾಗಿದ್ರೂ ತನಿಖೆಯಾಗಿ ಕ್ರಮ ಆಗಲಿ. ಅವರಿವರ ಮಕ್ಕಳು, ರಾಜಕಾರಣಿಗಳ ಮಕ್ಕಳಿದ್ದಾರೆ ಅಂತೆಲ್ಲ ಕೇಳಿಬರ್ತಿದೆ. ಯಾರೇ ಇದ್ರೂ ತನಿಖಾಗಲಿ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.

ಮುಂದೆ ಓದಿ ...
  • Share this:

ಚಿಕ್ಕಮಗಳೂರು (ಸೆಪ್ಟೆಂಬರ್‌ 04): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೀಡುಬಿಟ್ಟಿರುವ ಡ್ರಗ್ಸ್‌ ಮಾಫಿಯಾ ಮತ್ತು ಅದರ ಜೊತೆಗೆ ನಂಟು ಹೊಂದಿರುವ ಸ್ಯಾಂಡಲ್‌ವುಡ್‌ ಸುದ್ದಿ ಪ್ರಸ್ತುತ ಇಡೀ ದೇಶದ ಗಮನ ಸೆಳೆಯುತ್ತಿದೆ. ಇಡೀ ಪೊಲೀಸ್‌ ವ್ಯವಸ್ಥೆ ಈ ಜಾಲವನ್ನು ಭೇದಿಸಲು ಮುಂದಾಗಿದೆ. ಈ ನಡುವೆ ಈ ಕುರಿತು ಮತ್ತೊಂದು ಆತಂಕಕಾರಿ ಮಾಹಿತಿಯನ್ನು ಹೊರಹಾಕಿರುವ ಸಚಿವ ಸಿ.ಟಿ. ರವಿ, "ಯುವ ಜನತೆಯನ್ನ ಡ್ರಗ್ ಮಾಫಿಯಾದಿಂದ ಮುಕ್ತಗೊಳಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಹಾಗಾಗಿ, ಸರ್ಕಾರ ಸ್ಯಾಂಡಲ್‌ವುಡ್‌ ಡ್ರಗ್ ಮಾಫಿಯಾವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಇದರ ನಡುವೆ ತನಿಖಾ ತಂಡದ ಮೇಲೆ ಕೆಲವರು ಒತ್ತಡ ತರುವಂತಹ ಕೆಲಸ ಮಾಡುತ್ತಿದ್ದಾರೆ. ಕೆಲವೊಮ್ಮೆ ವಿಷಯಾಂತರಗೊಳಿಸುವ ಪ್ರಯತ್ನವೂ ನಡೆಯುತ್ತಿದೆ. ಆದರೆ, ಸರ್ಕಾರ ಇದ್ಯಾವುದಕ್ಕೂ ಬಗ್ಗುವುದಿಲ್ಲ" ಎಂದು ಹೇಳಿಕೆ ನೀಡುವ ಮೂಲಕ ಈ ಪ್ರಕರಣದ ತನಿಖೆಯ ಹಾದಿಯನ್ನು ತಪ್ಪಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆಯೇ? ಎಂಬ ಅನುಮಾನ ಮೂಡಲು ಕಾರಣರಾಗಿದ್ದಾರೆ. 


ಡ್ರಗ್ಸ್‌ ಮಾಫಿಯಾ ಮತ್ತು ಅದರ ವಿರುದ್ಧದ ಕಾರ್ಯಾಚರಣೆಯ ಕುರಿತಾಗಿ ಇಂದು ಚಿಕ್ಕಮಗಳೂರಿನಲ್ಲಿ ಮಾತನಾಡಿರುವ ಸಚಿವ ಸಿ.ಟಿ. ರವಿ, "ಡ್ರಗ್ ಮಾಫಿಯಾ ಇಂದು-ನಿನ್ನೆಯದ್ದಲ್ಲ. ಆಗಾಗ ನಿಯಂತ್ರಿಸುವ ಕೆಲಸ ನಡೆಯುತ್ತಿದ್ದರೂ ಕೂಡ ಬೇರು ಸಹಿತ ಕಿತ್ತು ಹಾಕುವ ಕೆಲಸ ಸಾಧ್ಯವಾಗಿಲ್ಲ. ಈಗ ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ. 84ಕ್ಕೂ ಹೆಚ್ಚು ಜನರನ್ನ ವಿಚಾರಣೆಗೊಳಪಡಿಸಿ ಮೇಲ್ನೋಟದ ಸಾಕ್ಷ್ಯಾಧಾರಗಳ ಆಧಾರದಲ್ಲಿ ಕಸ್ಟಡಿಗೆ ತೆಗೆದುಕೊಂಡಿದೆ.


ಕೆಲವರನ್ನ ವಿಚಾರಣೆ ಬಳಿಕ ಬಿಡಲಾಗಿದೆ. ಇದರಿಂದಲೇ ಗೊತ್ತಾಗುತ್ತೆ ಸರ್ಕಾರ ರಾಜೀ ಮಾಡಿಕೊಂಡಿಲ್ಲ ಎಂದು. ಯಾವ ಒತ್ತಡಕ್ಕೂ ಸರ್ಕಾರ ಮಣಿಯುವುದಿಲ್ಲ ಎಂದು ಈಗಾಗಲೇ ಗೃಹಸಚಿವರು ಹೇಳಿದ್ದಾರೆ. ಎಷ್ಟೆ ಪ್ರಭಾವಿಗಳಿದ್ದರೂ ಗಂಭೀರವಾಗಿ ತೆಗೆದುಕೊಳ್ತೀವಿ ಮತ್ತು ಬೇರು ಸಹಿತ ಕಿತ್ತು ಹಾಕುವ ಕೆಲಸ ಮಾಡುತ್ತೇವೆ. ಆದರೆ, ಪ್ರಕರಣದ ಹಾದಿ ತಪ್ಪಿಸಲು ಕೆಲವರು ತನಿಖಾ ತಂಡದ ಮೇಲೆ ಒತ್ತಡ ಹಾಕುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.


"ಇನ್ನು ಡ್ರಗ್ ಮಾಫಿಯಾ ಕೇವಲ ಕರ್ನಾಟಕಕ್ಕಷ್ಟೆ ಸೀಮಿತವಾಗಿಲ್ಲ. ಹೊರರಾಜ್ಯ ಹಾಗೂ ವಿದೇಶಗಳ ಸಂಪರ್ಕವೂ ಇದೆ. ಇದು ಕೆಲವೆಡೆ ಭಯೋತ್ಪಾದಕರು, ರಾಜಕೀಯ ವ್ಯಕ್ತಿಗಳು, ಸಿನಿಮಾ ನಟರು ಹಾಗೂ ಸೆಲಿಬ್ರಿಟಿಗಳ ಜೊತೆ ತಳುಕು ಹಾಕಿಕೊಂಡಿದೆ. ಯಾರೇ ಇದ್ರು ಸರಿಯೇ. ಇದನ್ನ ಗಂಭೀರವಾಗಿ ತೆಗೆದುಕೊಂಡು ತನಿಖೆ ಮಾಡಿಸುತ್ತಿದ್ದೇವೆ. ರಾಜೀಯಾಗುವ ಪ್ರಶ್ನೆಯೇ ಇಲ್ಲ. ಒತ್ತಡಕ್ಕೆ ಮಣಿಯುವುದೂ ಇಲ್ಲ" ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.


ಇದನ್ನೂ ಓದಿ : Basavaraj Bommai: ‘ಡ್ರಗ್ಸ್​ ದಂಧೆಗೆ ಬ್ರೇಕ್​ ಹಾಕುವ ತನಕ ಪೊಲೀಸರ ಕಾರ್ಯಾಚರಣೆ ನಿಲ್ಲದು‘ - ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟನೆ


ಆದರೆ, ಸಚಿವ ಸಿ.ಟಿ. ರವಿ ಹೇಳಿಕೆಗೆ ಕಿಡಿಕಾರಿರುವ ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ, "ಸಿ.ಟಿ. ರವಿಯವರು ಯಾರ ಮೇಲೆ, ಯಾರಿಂದ ಒತ್ತಡ ಇದೆ? ಎಂಬುದನ್ನು ಬಹಿರಂಗಪಡಿಸಲಿ. ಅದನ್ನು ಬಿಟ್ಟು ಮೈ ಮೇಲೆ ಎಣ್ಣೆ ಹಾಕ್ಕೊಳ್ಳೋ ರೀತಿಯಲ್ಲಿ ಹೇಳಿಕೆ ಕೊಡಬಾರದು.  ಆಡಳಿತ ಪಕ್ಷದ ಮಂತ್ರಿಯಾಗಿ ಇಂತಹ ಹೇಳಿಕೆ ಕೊಟ್ಟಿದ್ದಾರೆ. ಅವರಿಗೆ ಮಾಹಿತಿ ಇದ್ರೆ ಅವ್ರು ಬಹಿರಂಗ ಪಡಿಸಲಿ. ಅಥವಾ ಸಿ ಟಿ ರವಿಯವ್ರೇ ಖಾಸಗಿಯಾಗಿ ಗೃಹ ಸಚಿವರನ್ನು ಭೇಟಿ ಮಾಡಿ ಮಾಹಿತಿ ಕೊಡಲಿ.


ಯಾರ ಒತ್ತಡ ಇದೆ, ಯಾಕೆ ಒತ್ತಡ ಇದೆ ಅಂತ ಸಿ ಟಿ ರವಿಯವ್ರೇ ಹೇಳಬೇಕು. ಇಂತಹ ದೊಡ್ಡ ಸುದ್ದಿಯಾದ್ಮೇಲೆ ಸಿ ಟಿ ರವಿ ತಮ್ಮ ಹೇಳಿಕೆ ಬಗ್ಗೆ ಮಾಹಿತಿ ಕೊಡಬೇಕು. ಜವಾಬ್ದಾರಿಯ ಸ್ಥಾನದಲ್ಲಿರೋರು. ಉಡಾಫೆಯ ಹೇಳಿಕೆ ಕೊಡೋರಲ್ಲ. ಇನ್ನೂ ಮಾಹಿತಿ ಗೊತ್ತಿದ್ದು ಮುಚ್ಚಿಟ್ರೆ ಅದು ಸಹ ತಪ್ಪು. ಯಾರೇ ಶಾಮೀಲಾಗಿದ್ರೂ ತನಿಖೆಯಾಗಿ ಕ್ರಮ ಆಗಲಿ. ಅವರಿವರ ಮಕ್ಕಳು, ರಾಜಕಾರಣಿಗಳ ಮಕ್ಕಳಿದ್ದಾರೆ ಅಂತೆಲ್ಲ ಕೇಳಿಬರ್ತಿದೆ. ಯಾರೇ ಇದ್ರೂ ತನಿಖಾಗಲಿ" ಎಂದಿದ್ದಾರೆ.

top videos
    First published: