ಧಾರವಾಡ: ಪಿಎಫ್ಐ ಎಂಬುದೇ ಒಂದು ದೇಶದ್ರೋಹಿ ಸಂಘಟನೆ. ಆ ಸಂಘಟನೆ ಬಗ್ಗೆ ಹೆಚ್ಚಿಗೆ ಮಾತನಾಡುವ ಅಗತ್ಯವಿಲ್ಲ. ಆದರೆ ಸುಪ್ರೀಂಕೋರ್ಟ್ ನಲ್ಲಿ ಇತ್ಯರ್ಥವಾದ ನಂತರ ಒಂದು ಟ್ರಸ್ಟ್ ಮಾಡಿ ಅದರ ಮಾರ್ಗಸೂಚಿಯಂತೆ ರಾಮಮಂದಿರ ನಿರ್ಮಾಣ ಮಾಡಲಾಗುತ್ತಿದೆ. ಶ್ರೀರಾಮನು ಕೇವಲ ಒಂದು ಸಮಾಜಕ್ಕೆ ಸೇರಿದವನಲ್ಲ. ಇಡೀ ದೇಶಕ್ಕೆ ಎಲ್ಲ ಸಮುದಾಯಕ್ಕೆ ಸೇರಿದವನು. ಇಡೀ ಜಗತ್ತೇ ಶ್ರೀರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಕರೆಯುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಧಾರವಾಡದಲ್ಲಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ್ಯಾವ ದೇಶದಲ್ಲಿ ನೂರಕ್ಕೆ ನೂರರಷ್ಟು ಇಸ್ಲಾಂ ಜನರೇ ಇದ್ದಾರೋ ಅಲ್ಲಿಯೂ ಕೂಡ ಅವರು ಶಾಂತಿಯಿಂದ ಇಲ್ಲ. ಇಂಡೋನೇಷ್ಯಾ ಹೊರತುಪಡಿಸಿದರೆ ಅತೀ ಹೆಚ್ಚು ಮುಸಲ್ಮಾನರಿರುವ ದೇಶ ಭಾರತ. ಆದರೂ ಇಲ್ಲಿ ಶಾಂತಿ, ಸಹಬಾಳ್ವೆ ಹಾಗೂ ಸಹಧರ್ಮದಿಂದ ನಾವೆಲ್ಲ ಬದುಕುತ್ತಿದ್ದೇವೆ. ಹೀಗಾಗಿ ಆರ್ ಎಸ್ಎಸ್ ಬಗ್ಗೆ ಪಿಎಫ್ಐ ಸಂಘಟನೆಯವರು ಪಾಠ ಹೇಳುವ ಅಗತ್ಯ ಇಲ್ಲ ಎಂದರು.
ಇಂದು ಇಡೀ ದೇಶ ಶಿವಾಜಿ ಮಹಾರಾಜರ 394 ನೇ ಜಯಂತ್ಯುತ್ಸವವನ್ನು ಆಚರಿಸುತ್ತಿದೆ. ಅಂದು ಹಿಂದೂ ಸಮಾಜ ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದಾಗ ಹಿಂದೂ ಸಮಾಜದವರಿಗೆ ಆತ್ಮಸ್ಥೈರ್ಯ ತುಂಬಿ ಮೊಘಲರ ಹುಟ್ಟಡಗಿಸಿ ಹಿಂದವಿ ಸಾಮ್ರಾಜ್ಯ ನಿರ್ಮಿಸಿ ಶಿವಾಜಿ ಮಹಾರಾಜರು ಹಿಂದೂಗಳ ಮನದಲ್ಲಿ ನೆಲೆಸಿದರು. ಗೆರಿಲ್ಲಾ ಯುದ್ಧ, ಯುದ್ಧಕಲೆ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳ ಬಗ್ಗೆ ಶಿವಾಜಿ ಮಹಾರಾಜರು ಆಳವಾದ ಪಾಂಡಿತ್ಯ ಹೊಂದಿದ್ದರು. ಗಡಿ ಸಂರಕ್ಷಣೆ ಬಗ್ಗೆ ಅವರಿಗಿದ್ದ ಕಲ್ಪನೆ ಅತ್ಯದ್ಭುತವಾದಂತಹದ್ದು ಎಂದು ಕೇಂದ್ರ ಸಚಿವರು ಹೆಮ್ಮೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸಂಕಷ್ಟದಲ್ಲಿ ಕರ್ನಾಟಕದ ಡೆಕನ್ ಅರ್ಬನ್ ಬ್ಯಾಂಕ್: ಗ್ರಾಹಕರಿಗೆ ಹಣ ಹಿಂಪಡೆಯಲು ಮಿತಿ ಹಾಕಿದ ಆರ್ಬಿಐ
ಪಿಎಫ್ಐನವರನ್ನ ರಾಕ್ಷಸರಿಗೆ ಹೋಲಿಸಿದ ಮುತಾಲಿಕ:
ಶ್ರೀರಾಮ ಮಂದಿರ ಅಲ್ಲ ಅಂತಾ ಪಿಎಫ್ಐ ಹೇಳಿದೆ, ಅಲ್ಲದೇ ಆರ್.ಎಸ್.ಎಸ್. ದೇಶದಲ್ಲಿ ಅಶಾಂತಿ ಉಂಟು ಮಾಡಿದೆ, ಗಲಭೆ ಉಂಟು ಮಾಡಿದೆ ಅಂತಾ ಹೇಳಿದೆ. ಇದು ರಾಕ್ಷಸರ ಬಾಯಲ್ಲಿ ಭಗವದ್ಗೀತೆ ಬಂದಂತಿದೆ. ಪಿ.ಎಫ್.ಐ. ದವರು ರಾಕ್ಷಸರು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ತಾನು ಬಿಡುಗಡೆ ಮಾಡಿದ ವಿಡಿಯೋವೊಂದರಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್.ಎಸ್.ಎಸ್. ಮಂದಿರವಾದ ಶ್ರೀರಾಮ ಮಂದಿರಕ್ಕೆ ದೇಣಿಗೆ ನೀಡಬೇಡಿ ಅನ್ನೋ ಪಿ.ಎಫ್.ಐ. ಸಂಘಟನೆಯ ಹೇಳಿಕೆಯನ್ನು ವಿರೋಧಿಸಿದ ಮುತಾಲಿಕ, ಪಿ.ಎಫ್.ಐ ಈ ಬಗ್ಗೆ ಮಾತನಾಡಲು ಯಾವ ಹಕ್ಕಿದೆ ಎಂದು ಪ್ರಶ್ನಿಸಿದರು. ನೀವು ಬಾಬರ್ ನ ವಂಶಸ್ಥರು, ನೀವು ಬಾಬರ್ ಪರ ನಿಂತವರು. ಆಕ್ರಮಣಕಾರಿ ಬಾಬರ್ ಪರ ನಿಂತವರು. ರಾಮನ ಬಗ್ಗೆ ಮಾತನಾಡಲು ನಿಮಗೆ ಒಂಚೂರೂ ಹಕ್ಕಿಲ್ಲ ಎಂದು ಕಿಡಿ ಕಾರಿದರು.
ಇದನ್ನೂ ಓದಿ: ಪ್ರಧಾನಿ ಬಗ್ಗೆ ಏಕವಚನದಲ್ಲಿ ಸಿದ್ದರಾಮಯ್ಯ ಮಾತನಾಡುವಾಗ ನಾನೇಕೆ ಆತನ ಬಗ್ಗೆ ಮಾತನಾಡಬಾರದು; ಈಶ್ವರಪ್ಪ
ಶ್ರೀರಾಮ ಮಂದಿರ ನಿರ್ಮಾಣದ ಬಗ್ಗೆ ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಟ್ರಸ್ಟ್ ರಚಿಸಿ, ಮಂದಿರ ನಿರ್ಮಿಸುವಂತೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನ ಕಟ್ಟಲಾಗುತ್ತಿದೆ. ಆದರೆ ನಿಮ್ಮ ಹೇಳಿಕೆ ಮೂರ್ಖತನದ್ದಾಗಿದೆ. ನಿಮ್ಮ ಹೇಳಿಕೆಯನ್ನು ಮರಳಿ ಪಡೆದುಕೊಳ್ಳಿ ಎಂದು ಮುತಾಲಿಕ ಆಗ್ರಹ ಮಾಡಿದ್ದಾರೆ.
ಇದುವರೆಗೂ 22 ಕೊಲೆಗಳನ್ನು ಮಾಡಿದ್ದು ನೀವು. ನೀವೇ ಅಶಾಂತಿ ಹುಟ್ಟಸುತ್ತಿದ್ದೀರಿ. ನೀವು ಹಲ್ಲೆಕೋರರು, ನಾಲಾಯಕ್. ನಿಮಗೆ ಆರ್.ಎಸ್.ಎಸ್. ಬಗ್ಗೆ ಮಾತಾಡಲು ಹಕ್ಕಿಲ್ಲ ಎಂದು ಪೀಪಲ್ಸ್ ಫ್ರಂಟ್ ಆಫ್ ಇಂಡಿಯಾ ವಿರುದ್ಧ ಮುತಾಲಿಕ್ ಹರಿಹಾಯ್ದಿದ್ದಾರೆ.
ವರದಿ: ಮಂಜುನಾಥ ಯಡಳ್ಳಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ