ವಿಜಯಪುರ (ಜ. 23); ಒಂದು ದೇಶ, ಒಂದು ತುರ್ತು ಸೇವೆ ಕರೆ ಸಂಖ್ಯೆ ಇ ಆರ್ ಎಸ್ ಎಸ್ ನಿಮ್ಮ ಮಿತ್ರ ಇ ಆರ್ ಎಸ್ ಎಸ್ 112 ಸೇವೆ ಈಗ ವಿಜಯಪುರದಲ್ಲಿಯೂ ಆರಂಭವಾಗಿದೆ. ಕಳೆದ ಜ. 16 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂಥ 150 ವಾಹನಗಳನ್ನು ಮತ್ತು ಅವುಗಳ ಸೇವೆಯನ್ನು ಬೆಂಗಳೂರಿನಲ್ಲಿ ಆರಂಭಿಸಿದ್ದರು. ಇದೀಗ ಈ ವಾಹನಗಳು ಬಸವ ನಾಡು ವಿಜಯಪುರಕ್ಕೂ ಆಗಮಿಸಿದ್ದು, ಅವುಗಳ ಸೇವೆಗೆ ವಿಜಯಪುರ ಎಸ್ಪಿ ಅನುಪಮ ಅಗ್ರವಾಲ ಇತ್ತೀಚೆಗಷ್ಟೆ ಬೆಂಗಳೂರಿನಲ್ಲಿ ಕೇಂದ್ರ ಚಾಲನೆ ನೀಡಿದರು. ವಿಜಯಪುರ ನಗರದ ಗಾಂಧಿಚೌಕ್ನಲ್ಲಿ ಈ ವಾಹನಗಳಿಗೆ ಹಸಿರು ಧ್ವಜ ತೋರಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಈ ವಾಹನಗಳು ಮೊದಲಿಗೆ ವಿಜಯಪುರ ನಗರಾದ್ಯಂತ ಸಂಚರಿಸಿ ಜನರಲ್ಲಿ ಯೋಜನೆಯ ಬಗ್ಗೆ ಜಾಗೃತಿ ಮೂಡಿಸಿದರು.
ಬಳಿಕ ಮಾತನಾಡಿದ ವಿಜಯಪುರ ಎಸ್ಪಿ ಅನುಪಮ ಅಗ್ರವಾಲ, ಒಂದು ದೇಶ ಒಂದು ತುರ್ತು ಕರೆ ಸಂಖ್ಯೆ ಪ್ರಧಾನಿ ನರೇಂದ್ರ ಮೋದಿ ಅವರ ಕನಸಾಗಿದೆ. ಅದರಂತೆ ರಾಜ್ಯದಲ್ಲಿ ಈಗ ಎಮರ್ಜನ್ಸಿ ರಿಸ್ಪಾನ್ಸ್ ಸಪೋರ್ಟ್ ಸಿಸ್ಟಮ್(ಇಆರ್ಎಸ್ಎಸ್)- 112 ಆರಂಭವಾಗಿದೆ. ತುರ್ತು ಸಂದರ್ಭದಲ್ಲಿ ಸಾರ್ವಜನಿಕರು ಈ ನಂಬರಿಗೆ ಕರೆ ಮಾಡಿದರೆ, ಬೆಂಗಳೂರಿನಲ್ಲಿ ಇರುವ ಮುಖ್ಯ ಕಚೇರಿಗೆ ಮೊದಲು ಈ ಕರೆ ಹೋಗುತ್ತದೆ. ಅದಾದ 15 ಸೆಕೆಂಡ್ನಲ್ಲಿ ಅಲ್ಲಿನ ಸಿಬ್ಬಂದಿ ಈ ಮೊದಲೇ ಕಂಪ್ಯೂಟರಿನಲ್ಲಿ ಸೇರಿಸಲಾಗಿರುವ ಜಿಪಿಎಸ್ ಮೂಲಕ ಸಂಬಂಧಿತ ಜಿಲ್ಲೆಗೆ ಮತ್ತು ಆ ಜಿಲ್ಲೆಯಲ್ಲಿ ಕರೆ ಬಂದಿರುವ ಸ್ಥಳಕ್ಕೆ ಸಮೀಪದಲ್ಲಿರುವ 112 ವಾಹನಕ್ಕೆ ಮಾಹಿತಿ ರವಾನೆಯಾಗುತ್ತದೆ. ಆಗ ಈ ವಾಹನ ಘಟನಾ ಸ್ಥಳಕ್ಕೆ ತೆರಳಿ ಸಮಸ್ಯೆ ಸ್ಪಂದಿಸುತ್ತದೆ ಎಂದು ತಿಳಿಸಿದರು.
ಇದನ್ನು ಓದಿ: ಜಾಮೀನು ಸಿಕ್ಕಿ ಮೂರು ದಿನ ಕಳೆದರೂ ನಟಿ ರಾಗಿಣಿಗಿಲ್ಲ ಬಿಡುಗಡೆ ಭಾಗ್ಯ; ಇನ್ನು 2 ದಿನ ಜೈಲೇ ಗತಿ
ಸದ್ಯಕ್ಕೆ ವಿಜಯಪುರ ಜಿಲ್ಲೆಗೆ 14 ವಾಹನಗಳು ಬಂದಿವೆ. ಬಸವನ ಬಾಗೇವಾಡಿ ಉಪವಿಭಾಗಕ್ಕೆ ಮತ್ತು ಇಂಡಿ ಉಪವಿಭಾಗಕ್ಕೆ ತಲಾ 5 ಹಾಗೂ ವಿಜಯಪುರ ಉಪವಿಭಾಗಕ್ಕೆ 4 ವಾಹನಗಳನ್ನು ನೀಡಲಾಗಿದೆ. ಇದು ಜನರ ಮನೆ ಬಾಗಿಲಿಗೆ ಪೊಲೀಸ್ ಸೇವೆ ಒದಗಿಸುವ ವ್ಯವಸ್ಥೆಯಾಗಿದೆ. ಪ್ರತಿಯೊಂದು ವಾಹನದಲ್ಲಿ ತಲಾ ಓರ್ವ ಎಎಸ್ಐ, ಓರ್ವ ಮುಖ್ಯ ಪೇದೆ ಇಲ್ಲವೇ ಪೇದೆ, ಓರ್ವ ಚಾಲಕ ಇರುತ್ತಾರೆ. ಪ್ರತಿದಿನ ಮೂರು ಶಿಫ್ಟ್ ಗಳಲ್ಲಿ ಈ ವಾಹನ ಸೇವೆ ನೀಡುತ್ತದೆ. ಇದರಿಂದಾಗಿ ಜನ ದೂರು ನೀಡಲು ಪೊಲೀಸ್ ಠಾಣೆಗೆ ಬರುವುದು ಶೇ. 30 ರಿಂದ ಶೇ. 40 ರಷ್ಟು ಕಡಿಮೆಯಾಗಲಿದೆ. ಈ ವಾಹನದಲ್ಲಿ ಬರುವ ಎಎಸ್ಐ ಕೂಡಲೇ ದೂರು ದಾಖಲಿಸಿಕೊಳ್ಳುವುದರಿಂದ ದೂರು ಪಡೆಯಲು ತಗಲುವ ಸಮಯ ಉಳಿತಾಯವಾಗಲಿದ್ದು, ವಿಳಂಬ ಎಂಬ ಆರೋಪವೂ ಕಡಿಮೆಯಾಗಲಿವೆ. ಈ ಸೇವೆಗಾಗಿ ಹೆಚ್ಚುವರಿ ಸಿಬ್ಬಂದಿಯನ್ನು ಕೊಟ್ಟಿಲ್ಲ. ಆದರೆ, ಇರುವ ಸಿಬ್ಬಂದಿಯಲ್ಲಿಯೇ ಈ ಯೋಜನೆಗೆ ಅವಕಾಶ ಕಲ್ಪಿಸಲಾಗಿದೆ. ಇದೊಂದು ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಪೊಲೀಸರು ಜನಸಾಮಾನ್ಯರೊಂದಿಗೆ ಮತ್ತಷ್ಟು ಹತ್ತಿರವಾಗಲು ನೆರವಾಗಲಿದೆ ಎಂದು ಅನುಪಮ ಅಗ್ರವಾಲ ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ