ಹಾವೇರಿ: ಮೊದಲ ಬಾರಿಗೆ ಹಾವೇರಿ ಜಿಲ್ಲೆಗೆ ಆಗಮಿಸಿದ್ದ ಕೇಂದ್ರ ಸಚಿವ ನಾರಾಯಣಸ್ವಾಮಿ ಅವರನ್ನ ಸ್ವಾಗತಿಸುವ ವೇಳೆ ಜೇಬುಗಳ್ಳರು ಕೈಚಳ ತೋರಿದ್ದಾರೆ. ಸಿಕ್ಕ ಸಿಕ್ಕವರ ಜೇಬಿಗೆ ಕತ್ತರಿ ಹಾಕಿರುವ ಖದೀಮರು, ಹಣ ಮತ್ತು ಮೊಬೈಲ್ ಗಳನ್ನ ದೋಚಿದ್ದಾರೆ. ಶಾಸಕರು ಮತ್ತು ಜಿಲ್ಲಾ ಅಧ್ಯಕ್ಷರನ್ನ ಬಿಡದ ಖದೀಮರು ಪರಾರಿಯಾಗಿದ್ದಾರೆ.
ಸಚಿವರಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ ಅವರನ್ನ ಸ್ವಾಗತಿಸುವ ವೇಳೆ ಕಳ್ಳರು ಕೈಚಳಕ ತೋರಿದ್ದಾರೆ. ಬಿಜೆಪಿ ಕಾರ್ಯಕರ್ತರ ಜೇಬಿಗೆ ಕತ್ತರಿ ಹಾಕಿದ್ದು ಹಣ ಮತ್ತು ಮೊಬೈಲ್ ಗಳನ್ನು ದೋಚಿ ಪರಾರಿಯಾಗಿದ್ದಾರೆ.
ಗುರುವಾರದಂದು ನಗರದ ಮೈಲಾರ ಮಹಾದೇವಪ್ಪ ಸಭಾಭವನದ ಬಳಿ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಅವರನ್ನ ಬಿಜೆಪಿ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು. ಜೆಸಿಬಿಗಳ ಮೂಲಕ ಹೂ ಮಳೆ ಸುರಿಸಿ ಬೃಹತ್ ಹಾರ ಹಾಕಿ ಬಿಜೆಪಿ ಕಾರ್ಯಕರ್ತರು ಬರ ಮಾಡಿಕೊಂಡರು. ಈ ವೇಳೆ ಮೂವರ ಜೇಬು ಕತ್ತರಿಸಿ ಖದೀಮರು ಪರಾರಿಯಾಗಿದ್ದಾರೆ. ಜೇಬಿನಲ್ಲಿದ್ದ ಇಪ್ಪತ್ತು ಸಾವಿರಕ್ಕೂ ಅಧಿಕ ಹಣ ಎಗರಿಸಿದ್ದರಿಂದ ಖದೀಮರ ಕೈಚಳಕದಿಂದ ಹಣ ಕಳೆದುಕೊಂಡವರು ಕಂಗಾಲಾಗಿದ್ದಾರೆ.
ಬ್ಯಾಡಗಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಜೇಬಿಗೂ ಖದೀಮರು ಕತ್ತರಿ ಹಾಕಿದ್ದು, ಬಿಜೆಪಿ ಜಿಲ್ಲಾಧ್ಯಕ್ಷ ಕಲಕೋಟಿ ಜೇಬಿನಲ್ಲಿದ್ದ ಹದಿನೈದು ಸಾವಿರ ರುಪಾಯಿ ದೋಚಿದ್ದಾರೆ. ಶಾಸಕ ಬಳ್ಳಾರಿ ಜೇಬಿನಲ್ಲಿ ಹಣ ಇಟ್ಟುಕೊಳ್ಳದೆ ಇದ್ದಿದ್ದರಿಂದ ಜೇಬಿಗೆ ಮಾತ್ರ ಕತ್ತರಿ ಹಾಕಿದ್ದಾರೆ. ಅಲ್ಲದೆ ಇದೇ ವೇಳೆ ಐದಾರು ಜನರ ಮೊಬೈಲ್ ಗಳನ್ನ ಕಳ್ಳತನ ಮಾಡಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಸಭೆಯನ್ನು ಉದ್ದೇಶಿಸಿ ಆನಂತರ ಮಾತನಾಡಿದ ಸಂಸದರು, ಕಾಂಗ್ರೆಸ್ ನವರೆ ಹೋರಾಟ ಮಾಡಿ ಸ್ವಾತಂತ್ರ್ಯ ತಂದುಕೊಟ್ಟಿದ್ದು ಅಂತಿದ್ದಾರೆ. ಪದೇ, ಪದೇ ಕಾಂಗ್ರೆಸ್ ನವರು ಸ್ವಾತಂತ್ರ್ಯ ತಂದುಕೊಟ್ಟಿರೋ ಬಗ್ಗೆ ಹೇಳ್ತಾರೆ. ಬ್ರಿಟಿಷರ ವಿರುದ್ಧ ಯಾರು, ಯಾರು ಬಂದೂಕಿಗೆ ಎದೆಕೊಟ್ಟಿದ್ದಾರೆ ಗೊತ್ತಾಗಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ ಹೇಳಿದ್ದಾರೆ.
ಕಾಂಗ್ರೆಸ್ನವರ ಹೋರಾಟದ ಬಗ್ಗೆ ಎಲ್ಲರಿಗೂ ಗೊತ್ತಾಗಬೇಕು. ಈ ಬಗ್ಗೆ ತನಿಖೆ ಆಗಬೇಕು, ದಾಖಲೆಗಳನ್ನ ತಂದು ಕೊಡಬೇಕು. ಎಲ್ಲ ವರ್ಗದ ಜನರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಾರೆ. ಪದೇ, ಪದೇ ಕಾಂಗ್ರೆಸ್ ನವರು ಹೀಗೆ ಹೇಳೋದನ್ನ ಬಿಡಬೇಕು ಎಂದರು.
ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯ ಯಾವ ವರದಿಗಳ ಬಗ್ಗೆಯೂ ಮಾತನಾಡದೆ. ಈಗ ವರದಿಗಳ ಬಗ್ಗೆ ಮಾತನಾಡ್ತಿದ್ದಾರೆ. ಸದಾಶಿವ ಆಯೋಗ ವರದಿ ಜಾರಿ ಬಗ್ಗೆ ಒತ್ತಾಯ ಮಾಡೋ ಅವಶ್ಯಕತೆ ಇಲ್ಲ. ವರದಿ ಜಾರಿ ಮಾಡುವ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಿದರು.
ಇದನ್ನೂ ಓದಿ: ಪಶ್ಚಿಮ ಬಂಗಾಳ ಚುನಾವಣೆ ವೇಳೆ ನಡೆದಿದ್ದ ಅತ್ಯಾಚಾರ, ಗಲಭೆ; ಸಿಬಿಐ ತನಿಖೆಗೆ ವಹಿಸಿದ ಕಲ್ಕತ್ತಾ ಹೈಕೋರ್ಟ್
ಇದೆ ವೇಳೆ ಪೆಟ್ರೋಲ್ ಬೆಲೆ ಏರಿಕೆ ವಿಚಾರದ ಬಗ್ಗೆ ಮಾತನಾಡಿ, ಪೆಟ್ರೋಲನ್ನೆ ತೆಗೆಯಬೇಕು ಎಂಬ ಯೋಚನೆ ಮಾಡ್ತಾ ಇದ್ದೇವೆ. ನೂರಕ್ಕೆ ಎಂಬತ್ತರಷ್ಟು ಜನರು ಎಲೆಕ್ಟ್ರಿಕಲ್ ವಾಹನಗಳನ್ನ ಬಳಕೆ ಮಾಡಬೇಕು. ಪೆಟ್ರೋಲ್ ಉಪಯೋಗ ಮಾಡೋದನ್ನೆ ಕಡಿಮೆ ಮಾಡಬೇಕು ಅನ್ನೋ ಯೋಚನೆ ಇದೆ ಎಂದರು.
ವರದಿ: ಮಂಜುನಾಥ್ ತಳವಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ