ಗದಗ: ಭಾರತ ರತ್ನ ಪಂಡಿತ ಭೀಮಸೇನ ಜೋಶಿ ಅಂದ್ರೆ ತಟ್ಟನೆ ನೆನಪಾಗೋದು ಕರುನಾಡು. ಅದರಲ್ಲೂ ಮುದ್ರಣ ಕಾಶಿ ಗದಗ ಜಿಲ್ಲೆ. ಗದಗ ಜಿಲ್ಲೆಯಲ್ಲಿ ಹುಟ್ಟಿ ಇಡೀ ದೇಶಾದ್ಯಂತ ಹಿಂದುಸ್ತಾನಿ ಸಂಗೀತ ರಸದೌತಣ ನೀಡಿದವರು ಹಾಗೂ ಭಾರತ ರತ್ನ ಪಡೆದ ಮೊದಲ ಸಂಗೀತಜ್ಞರು ದಿವಂಗತ ಪಂಡಿತ ಭೀಮಸೇನ ಜೋಶಿ. ಈಗ ಅವರ ಜನ್ಮಶತಾಬ್ದಿ ಇರುವ ಹಿನ್ನೆಲೆಯಲ್ಲಿ ಇಡೀ ದೇಶಾದ್ಯಂತ ಹಿಂದೂಸ್ತಾನಿ ಸಂಗೀತದ ಮೂಲಕ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗುತ್ತಿದೆ.
ಪುಣೆಯ ಕಾಣೆಬೂವಾ ಪ್ರತಿಷ್ಠಾನ ವತಿಯಿಂದ ಒಂದು ವರ್ಷಗಳ ಕಾಲ ನಿರಂತರವಾಗಿ ರಾಷ್ಟ್ರೀಯ ಸಂಗೀತಾ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಅವರ ಹುಟ್ಟೂರು ಗದಗ ಜಿಲ್ಲೆಯಲ್ಲಿ ಮೊದಲ ರಾಷ್ಟ್ರೀಯ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಗದಗನ ಪ್ರಖ್ಯಾತ ವೀರ ನಾರಾಯಣ ದೇವಸ್ಥಾನ ಆವರಣದಲ್ಲಿ ಜನ್ಮಶತಾಬ್ದಿ ಅಂಗವಾಗಿ ರಾಷ್ಟ್ರೀಯ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ ನಡೆಯಿತು. ಗದಗ ಜಿಲ್ಲೆಯಲ್ಲಿ ಆರಂಭವಾಗಿ ಇಡೀ ದೇಶಾದ್ಯಂತ ಪಂಡಿತ ಭೀಮಸೇನ ಜೋಶಿ ಅವರ ಜನ್ಮಶತಾಬ್ದಿ ಅಂಗವಾಗಿ ಸಂಗೀತ ಕಾರ್ಯಕ್ರಮ ನಡೆಸಿ, 2022 ರ ಪೆಬ್ರವರಿ 04 ರಂದು ಗದಗನಲ್ಲಿಯೇ ಮುಕ್ತಾಯವಾಗಲಿದೆ.
ಗದಗನಲ್ಲಿ ನಡೆದ ಮೊದಲ ಸಂಗೀತ ಕಾರ್ಯಕ್ರಮವನ್ನು ಹಿಂದೂಸ್ತಾನಿ ಸಂಗೀತಾ ಗಾಯಕ ಪದ್ಮಶ್ರೀ ಪಂಡಿತ ವೆಂಕಟೇಶ ಕುಮಾರ, ಅವರು ಚಾಲನೆ ನೀಡಿದರು. ಈ ವೇಳೆ ಭೀಮಸೇನ ಜೋಶಿ ಅವರ ಕುಟುಂಬಸ್ಥರಾದ ಸುಶಲೇಂದ್ರ ಜೋಶಿ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಇದನ್ನೂ ಓದಿ: ಪಾಕ್ ಧ್ವಜ ಹಿಡಿದ ರಿಹಾನ್ನಾ; ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಈ ಫೋಟೋದ ಅಸಲಿಯತ್ತೇನು..?
ಇನ್ನು, ದೇಶದ ಹೆಸರಾಂತ ಕಲಾವಿದರಾದ ವಿದುಷಿ ಮಂಜುಷಾ ಪಾಟೀಲ್, ತಬಲಾ ಮಾಂತ್ರಿಕ ಪದ್ಮಶ್ರೀ ಪಂಡಿತ ವಿಜಯ ಘಾಟೆ, ಯುವ ಪ್ರತಿಭಾವಂತ ಐಶ್ವರ್ಯ ದೇಸಾಯಿ, ಖ್ಯಾತ ತಬಲಾ ವಾದಕ ಕೇಶವ ಜೋಶಿ, ಖ್ಯಾತ ಹಾರ್ಮೋನಿಯಂ ವಾದನಾದದಲ್ಲಿಗುರು ಪ್ರಸಾದ ಹೆಗಡೆ ಅಂತಹ ಘಟಾನುಘಟಿ ಸಂಗೀತ ದಿಗ್ಗಜರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಹಿಂದೂಸ್ತಾನಿ ಸಂಗೀತ ತವರೂರಿನಲ್ಲಿ ಭಾರತ ರತ್ನ ಭೀಮಸೇನ ಜೋಶಿ ಅವರ ಶಿಷ್ಯರು ಸಂಗೀತ ರಸದೌತನ ನೀಡಿದರು. ಈ ಅಪರೂಪದ ಕಾರ್ಯಕ್ರಮ ವೀಕ್ಷಿಸಲು ಸಂಗೀತ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹಿಂದೂಸ್ತಾನಿ ಸಂಗೀತದ ರಸದೌತನ ಸವಿದರು.
ಗದಗನ ಪಂಡಿತ ಭೀಮಸೇನ ಜೋಶಿ ಅವರ ಜನ್ಮಶತಾಬ್ದಿ ಅಂಗವಾಗಿ ಇಡೀ ವರ್ಷ ಅದ್ದೂರಿಯಾಗಿ ದೇಶಾದ್ಯಂತ ಸಂಗೀತ ಕಾರ್ಯಕ್ರಮ ನಡೆಯಲಿವೆ. ಆದ್ರೆ ನಮ್ಮ ರಾಜ್ಯ ಸರ್ಕಾರ ಹಾಗೂ ಸ್ಥಳೀಯರು ಜೋಷಿ ಅವರ ಜನ್ಮಶತಾಬ್ದಿ ಮರೆತಿರುವುದು ಸಂಗೀತ ಪ್ರಿಯರಿಗೆ ಬೇಸರವನ್ನು ತರಿಸಿದೆ. ಅದೇನೇ ಇರಲಿ, ಭಾರತ ರತ್ನ ಭೀಮಸೇನ ಜೋಶಿ ನಮ್ಮ ನಾಡಿನವರು ಎನ್ನುವುದು ನಮಗೆ ಹೆಮ್ಮೆ.
ವರದಿ: ಸಂತೋಷ ಕೊಣ್ಣೂರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ