ಕಲಬುರ್ಗಿ; ಯಡಿಯೂರಪ್ಪ ವಿರುದ್ಧದ ಆಪರೇಷನ್ ಕಮಲ ಆಡಿಯೋ ಪ್ರಕರಣವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ. ಕಲಬುರ್ಗಿ ಹೈಕೋರ್ಟ್ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರನ್ನೊಳಗೊಂಡ ಪೀಠ ಪ್ರಕರಣವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ. ಜನಪ್ರತಿನಿಧಿಗಳಿಗಾಗಿಯೇ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿದೆ. ಹೀಗಾಗಿ ಪ್ರಕರಣವನ್ನು ಅಲ್ಲಿಗೆ ವರ್ಗಾಯಿಸುವುದಾಗಿ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ತಿಳಿಸಿದ್ದಾರೆ.
ಸಿಎಂ ಯಡಿಯೂರಪ್ಪ ವಿರುದ್ಧದ ಪ್ರಕರಣ ಇಂದು ಕಲಬುರ್ಗಿ ಹೈಕೋರ್ಟ್ ಪೀಠದಲ್ಲಿ ವಿಚಾರಣೆ ನಡೆಯಬೇಕಿತ್ತು. ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿರುವುದರಿಂದ ಮುಂದಿನ ವಾರ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುವ ಸಾಧ್ಯತೆಗಳಿವೆ. ತಮ್ಮ ತಂದೆಯ ಕಡೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಲು ಆಮಿಷವೊಡ್ಡಲಾಗಿತ್ತು ಎಂದು ಆರೋಪಿಸಿ ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರು ಪುತ್ರ ಶರಣಗೌಡ ಪಾಟೀಲ ಕಂದಕೂರ ರಾಯಚೂರು ಜಿಲ್ಲೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಆರಂಭಿಸಿದ ತನಿಖೆಗೆ ಕಲಬುರ್ಗಿ ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿತ್ತು. ತಡೆಯಾಜ್ಞೆ ತೆರೆವುಗೊಳಿಸುವಂತೆ ಶರಣಗೌಡ ಪಾಟೀಲ ಕಂದಕೂರರಿಂದ ಮೇಲ್ಮನವಿ ಸಲ್ಲಿಕೆಯಾಗಿತ್ತು.
ಆಪರೇಷನ್ ಕಮಲ ಆಡಿಯೋ ಪ್ರಕರಣ ದಾಖಲಾಗಿದ್ದಾಗ ಯಡಿಯೂರಪ್ಪ ವಿರೋಧ ಪಕ್ಷದ ನಾಯಕರಾಗಿದ್ದರು. ನಂತರದ ಬೆಳವಣಿಗೆಯಲ್ಲಿ ಸಿಎಂ ಆಗಿದ್ದಾರೆ. ದೇವದುರ್ಗ ಗೆಸ್ಟ್ ಹೌಸ್ ಗೆ ತನ್ನನ್ನು ಕರೆಯಿಸಿಕೊಂಡು ಚುನಾವಣಾ ಖರ್ಚಿಗಾಗಿ 10 ಕೋಟಿ ರೂಪಾಯಿ ಮತ್ತು ಸಚಿವ ಸ್ಥಾನದ ಆಮಿಷವೊಡ್ಡಿ ತಮ್ಮ ತಂದೆಯ ಕಡೆಯಿಂದ ರಾಜೀನಾಮೆ ಕೊಡಿಸುವಂತೆ ಒತ್ತಡ ಹಾಕಿದ್ದರು ಎಂದು ಶರಣಗೌಡ ಕಂದಕೂರ ಆರೋಪಿಸಿದ್ದರು.
ಇಬ್ಬರು ಪಿ.ಎಸ್.ಐ.ಗಳ ಅಮಾನತು
ಕಲಬುರ್ಗಿ ಜಿಲ್ಲೆ ಚಿಂಚೋಳಿ ಪುರಸಭೆ ಮುಖ್ಯಾಧಿಕಾರಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಪಿಎಸ್ಐ ಗಳನ್ನು ಅಮಾನತು ಮಾಡಲಾಗಿದೆ. ಪುರಸಭೆ ಮುಖ್ಯಾಧಿಕಾರಿ ಅಭಯ್ ಮೇಲೆ ಪುರಸಭೆ ಸದಸ್ಯ ಆನಂದ್ ಟೈಗರ್ ಮತ್ತು ಆತನ ಸಹಚರರು ಹಲ್ಲೆ ನಡೆಸಿದ್ದರು. ಹಲ್ಲೆಯ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದವು. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಆನಂದ್ ಟೈಗರ್ ಎಸ್ಕೇಪ್ ಆಗಿದ್ದ. ಆತನ ಬಂಧನಕ್ಕೆ ಜಾಲ ಬೀಸಿದ್ದ ಪಿ.ಎಸ್.ಐ.ಗಳು, ಹಲ್ಲೆಗೆ ಸಂಬಂಧಿಸಿದಂತೆ ಯುವಕನೋರ್ವನನ್ನ ವಿಚಾರಣೆಗೊಳಪಡಿಸಿದ್ದರು. ತನಿಖೆ ವೇಳೆ ಪೊಲೀಸರಿಂದ ಕಿರುಕುಳ ನೀಡಿದ್ದಾರೆಂದು ಯುವಕ ಆರೋಪಿಸಿದ್ದ. ಈ ಹಿನ್ನೆಲೆಯಲ್ಲಿ ಕಲಬುರ್ಗಿ ಎಸ್.ಪಿ. ಸಿಮಿ ಮರಿಯಮ್ ಜಾರ್ಜ್ ಇಬ್ಬರು ಪಿ.ಎಸ್.ಐ. ಗಳನ್ನು ಅಮಾನತುಗೊಳಿಸಿದ್ದಾರೆ. ಚಿಂಚೋಳಿ ಠಾಣೆ ಪಿಎಸ್ಐ ರಾಜಶೇಖರ ರಾಠೋಡ್ ಮತ್ತು ಸುಲೇಪೇಟ ಠಾಣೆ ಪಿಎಸ್ಐ ಚೇತನ್ ಬಿದಿರಿ ಅಮಾನತುಗೊಂಡ ಪೊಲೀಸ್ ಅಧಿಕಾರಿಗಳಾಗಿದ್ದಾರೆ.
ತನಗೆ ವಿನಾಕಾರಣ ಕಿರುಕುಳ ನೀಡಿದ್ದಾರೆಂದು ಯುವಕ ಸಂಘಟನೆಯೊಂದಕ್ಕೆ ದೂರು ನೀಡಿದ್ದ. ನಂತರ ಸಂಘಟನೆಯ ಮುಖ್ಯಸ್ಥರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿ, ಯುವಕನಿಗೆ ವಿನಾಕಾರಣ ಕಿರುಕುಳ ನೀಡಿರೋದನ್ನು ಖಂಡಿಸಿದ್ದರು. ಇದೀಗ ದೂರಿನ ಅನ್ವಯ ಇಬ್ಬರು ಪಿಎಸ್ಐಗಳ ಅಮಾನತುಗೊಳಿಸಿ ಇಲಾಖಾ ತನಿಖೆ ನಡೆಸಿರೋದಾಗಿ ಎಸ್.ಪಿ. ಸಿಮಿ ಮರಿಯಮ್ ಜಾರ್ಜ್ ಮಾಹಿತಿ ನೀಡಿದ್ದಾರೆ.
ಚಿಂಚೋಳಿ ಪುರಸಭೆ ಮುಖ್ಯಾಧಿಕಾರಿ ಅಭಯ್ ಕುಮಾರ್ ಮೇಲೆ ಸದಸ್ಯ ಆನಂದ ಟೈಗರ್ ಎಂಬಾತ ಹಲ್ಲೆ ಮಾಡಿ ಪರಾರಿಯಾಗಿದ್ದ. ನಕಲಿ ಬಿಲ್ಗಳಿಗೆ ಸಹಿ ಹಾಕುವಂತೆ ಅಧಿಕಾರಿ ಮೇಲೆ ಆನಂದ್ ಟೈಗರ್ ಒತ್ತಡ ಹಾಕಿದ್ದ. ಅಕ್ರಮಕ್ಕೆ ಸಾಥ್ ನೀಡದಿದ್ದಕ್ಕೆ ಅಧಿಕಾರಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಟೈಗರ್ ನಂತರ ತಲೆಮರೆಸಿಕೊಂಡಿದ್ದ. ಆನಂದ್ ಸುಳಿವಿಗಾಗಿ ಆತನ ಗೆಳೆಯನೋರ್ವನನ್ನು ವಶಕ್ಕೆ ಪಡೆದು ಪಿಎಸ್ಐಗಳು ವಿಚಾರಣೆ ನಡೆಸಿದ್ದರು.
ವರದಿ - ಶಿವರಾಮ ಅಸುಂಡಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ