news18-kannada Updated:June 17, 2020, 3:41 PM IST
ಪೊಲೀಸ್ ವಸತಿ ಗೃಹ
ಪುತ್ತೂರು(ಜೂ.17): ಕಳೆದ ಮೂರು ವರ್ಷಗಳಿಂದ ಪುತ್ತೂರು ನಗರ ಠಾಣೆಯ ಎಸೈಗಳಿಗಾಗಿ ನಿರ್ಮಿಸಲಾದ ಸುಂದರ ವಸತಿ ಗೃಹವೊಂದು ಯಾರಿಗೂ ಬೇಡದೇ ಅನಾಥಸ್ಥಿತಿಯಲ್ಲಿದೆ. ನಗರದ ಮಧ್ಯಭಾಗದಲ್ಲಿ ನಿರ್ಮಿಸಲಾದ ಕೋಟ್ಯಾಂತರ ಮೌಲ್ಯದ ಈ ಕಟ್ಟಡಕ್ಕೆ ಯಾರೂ ದಿಕ್ಕಿಲ್ಲ. ಎರಡು ಕುಟುಂಬಗಳು ಆರಾಮವಾಗಿ ವಾಸ್ತವ್ಯ ಹೂಡಬಹುದಾದ ಈ ಕಟ್ಟಡದಲ್ಲಿ ಎಸೈಗಳು ವಾಸ್ತವ್ಯ ಮಾಡಲು ಮುಂದಾಗಿಲ್ಲ. ಹಾಗಾಗಿ ಕಟ್ಟಡ ನಿರ್ಮಾಣವಾಗಿ 3 ವರ್ಷ ಕಳೆದರೂ ಇನ್ನೂ ಗೃಹಪ್ರವೇಶದ ಭಾಗ್ಯ ಒದಗಿಬಂದಿಲ್ಲ.
ನಗರದ ಬನ್ನೂರು ಬಲಮುರಿ ಗಣಪತಿ ದೇವಳದ ಸಮೀಪದಲ್ಲಿ 15 ಸೆಂಟ್ಸ್ ನಿವೇಶನ ಪೊಲೀಸ್ ಇಲಾಖೆಯ ಹೆಸರಲ್ಲಿದೆ. ಇದರಲ್ಲಿ ಇದೀಗ ಸ್ವಲ್ಪ ಭಾಗ ಅತಿಕ್ರಮಣವಾಗಿದ್ದು, ಉಳಿದ ಸ್ಥಳದಲ್ಲಿ ತಲಾ 850 ಚದರ ಅಡಿ ವಿಸ್ತೀರ್ಣದ ಕೆಳ ಮತ್ತು ಮೇಲಂತಸ್ತು ಹೊಂದಿರುವ ಕಟ್ಟಡ ನಿರ್ಮಾಣ ಮಾಡಲಾಗಿದೆ. ಈ ವಸತಿ ಗೃಹಕ್ಕೆ ಮೂಲಭೂತ ಸೌಕರ್ಯಗಲಾದ ನೀರು, ವಿದ್ಯುತ್, ಕೊಳವೆಬಾವಿ ಮತ್ತಿತರ ಸೌಕರ್ಯ ಒದಗಿಸಲಾಗಿದೆ. ಆದರೂ ಇಲ್ಲಿ ವಾಸ್ತವ್ಯಕ್ಕೆ ಮಾತ್ರ ಜನರಿಲ್ಲ.
ಪುತ್ತೂರು ನಗರ ಪೋಲೀಸ್ ಠಾಣೆ, ಮಹಿಳಾ ಪೋಲೀಸ್ ಠಾಣೆ ಮತ್ತು ಪುತ್ತೂರು ಟ್ರಾಫಿಕ್ ಪೋಲೀಸ್ ಠಾಣೆಯ ಎಸೈಗಳಿಗಾಗಿ ಈ ವಸತಿ ಗೃಹವನ್ನು ನಿರ್ಮಿಸಲಾಗಿದೆ. ಕಟ್ಟಡ ನಿರ್ಮಾಣಗೊಂಡ ವರ್ಷದ ಬಳಿಕ ಪುತ್ತೂರು ಪೊಲೀಸ್ ಉಪವಿಭಾಗಕ್ಕೆ 2018ರ ಸೆಪ್ಟಂಬರ್ 20ಕ್ಕೆ ಹಸ್ತಾಂತರ ಮಾಡಲಾಗಿದೆ. ಪೊಲೀಸ್ ಹೌಸಿಂಗ್ ಬೋರ್ಡ್ ನಿರ್ಮಿಸಿದ ಈ ಕಟ್ಟಡದ ಸುತ್ತ ಆವರಣಗೋಡೆ ಹೊರತು ಪಡಿಸಿದರೆ ಉಳಿದ ಎಲ್ಲಾ ವ್ಯವಸ್ಥೆಗಳನ್ನೂ ಮಾಡಲಾಗಿದೆ.
ಸದ್ಯ ಪುತ್ತೂರು ನಗರಠಾಣೆ, ಸಂಚಾರಿ ಠಾಣೆ ಮತ್ತು ಮಹಿಳಾ ಠಾಣೆಗಳಲ್ಲಿ ಪ್ರಸ್ತುತ 4 ಮಂದಿ ಎಸೈಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಸೈಗಳಿಗಾಗಿಯೇ ಈ ಬನ್ನೂರಿನ ವಸತಿಗೃಹ ನಿರ್ಮಾಣಗೊಂಡಿದೆ. ಹಾಗಿದ್ದರೂ ಇಲ್ಲಿ ಯಾವ ಪೊಲೀಸ್ ಅಧಿಕಾರಿಗಳು ವಾಸ್ತವ್ಯಕ್ಕೆ ಮುಂದಾಗದೇ ಇರಲು ಕಾರಣಗಳು ಮಾತ್ರ ನಿಗೂಢವಾಗಿದೆ. ಮೇಲ್ನೋಟಕ್ಕೆ ಕಟ್ಟಡದ ಸುತ್ತ ಆವರಣಗೋಡೆ ಇಲ್ಲದಿರುವುದೇ ಕಟ್ಟಡದ ಅನಾಥ ಸ್ಥಿತಿಗೆ ಕಾರಣ ಎನ್ನಲಾಗುತ್ತಿದೆ.
ಇದನ್ನೂ ಓದಿ: ಮಾಧ್ಯಮಗಳಲ್ಲಿನ ಸಾವಿನ ಸುದ್ದಿ ನೋಡಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆಯೇ ಹೆಚ್ಚು; ಬಯಲಾಯ್ತು ಆಘಾತಕಾರಿ ಮಾಹಿತಿ
ಈ ವಸತಿ ಗೃಹ ಪೊಲೀಸ್ ಇಲಾಖೆಗೆ ಹಸ್ತಾಂತರಗೊಂದು 2 ವರ್ಷಗಳು ಪೂರ್ಣಗೊಂಡಿವೆ. ಇಲ್ಲಿ ವಾಸ ಮಾಡಲು ಯಾವ ಎಸೈಗಳು ಮುಂದಾಗಿಲ್ಲ. ಹಾಗಾಗಿ ಕಟ್ಟಡ ಪಾಳು ಬಿದ್ದ ಸ್ಥಿತಿಯಲ್ಲಿದೆ. ಈ ಕಟ್ಟಡದ ಬಾಗಿಲಿಗೆ ಬೀಗ ಹಾಕಿಲ್ಲ. ಕಟ್ಟಡ ಒಳಭಾಗದಲ್ಲೂ ಸ್ವಚ್ಛತೆ ಇಲ್ಲ. ಕಟ್ಟಡದ ಜಗುಳಿ ಮೇಲೆ ಆಡುಗಳು , ನಾಯಿಗಳು ವಾಸ ಮಾಡುತ್ತಿವೆ. ಮೆಸ್ಕಾಂ ವತಿಯಿಂದ ವಿದ್ಯುತ್ ಬಿಲ್ ಕೂಡಾ ಬರುತ್ತಿದೆ. ಈ ಬಿಲ್ ಪಾವತಿ ಮಾಡುವುದು ಯಾರು ಎಂಬ ಪ್ರಶ್ನೆಯೂ ಕೇಳಿ ಬರುತ್ತಿದೆ.
ಈ ನಡುವೆ ಕಟ್ಟಡದ ಕೋಣೆಗಳನ್ನು ಅಕ್ರಮ ಚಟುವಟಿಕೆಗಳಿಗೆ ಬಳಕೆ ಮಾಡಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಪಾಳು ಬಿದ್ದಿರುವ ಈ ಕಟ್ಟಡವನ್ನು ರಕ್ಷಣೆ ಮಾಡದಿದ್ದರೆ ಇಲ್ಲಿ ಹಲವು ದಂಧೆಗಳು ಆರಂಭವಾಗುವುದಕ್ಕೆ ಯಾವುದೇ ಸಂದೇಹ ಇಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ರಾಜ್ಯದ ಬೇರೆ ಬೇರೆ ಕಡೆ ಪೊಲೀಸ್ ವಸತಿ ಗೃಹ ನಿರ್ಮಾಣಕ್ಕಾಗಿ ಸರ್ಕಾರದ ಸುಮಾರು ರೂ. 33 ಕೋಟಿಯ ವರ್ಕ್ ಪ್ರೊಜೆಕ್ಟ್ ಹೈದರಬಾದ್ನ ಎನ್.ಆರ್ ಕನ್ಸ್ಟ್ರಕ್ಷನ್ ಕಂಪನಿ ಗುತ್ತಿಗೆ ಪಡೆದಿದ್ದು, ಅವರ ನೇತೃತ್ವದಲ್ಲೇ ಒಟ್ಟು 178 ವಸತಿ ಗೃಹಗಳ ನಿರ್ಮಾಣದ ಕಾರ್ಯ ನಡೆದಿದೆ. ಈ ಪೈಕಿ ಪುತ್ತೂರಿನಲ್ಲಿ ಸಾಮೆತ್ತಡ್ಕ, ಸಂಪ್ಯದಲ್ಲಿ ಪೊಲೀಸ್ ಸಿಬಂದಿಗಳ ವಸತಿ ಗೃಹಗಳು ಮತ್ತು ಬನ್ನೂರಿನ ಕರ್ಮಲದಲ್ಲಿ 2 ಎಸೈಗಳ ವಸತಿ ಗೃಹ ನಿರ್ಮಾಣ ಮಾಡಲಾಗಿದೆ.
ಸಾಮೆತ್ತಡ್ಕದಲ್ಲಿ ರೂ. 12.2 ಕೋಟಿ, ಸಂಪ್ಯದಲ್ಲಿ ರೂ. 1.99 ಕೋಟಿ ವೆಚ್ಚದಲ್ಲಿ ವಸತಿ ಗೃಹ ನಿರ್ಮಾಣ ಆಗಿದ್ದು, ಬನ್ನೂರಿನ ಈ ವಸತಿ ಸಮುಚ್ಛಯಕ್ಕೂ 1.99 ಕೋಟಿ ವೆಚ್ಚವಾಗಿದೆ. ಆದರೆ ಉಳಿದ ಎಲ್ಲಾ ವಸತಿ ಗೃಹದಲ್ಲಿ ಪೊಲೀಸ್ ಸಿಬಂದಿಗಳು ವಾಸ್ತವ್ಯ ಹೂಡಿದ್ದಾರೆ. ಆದರೆ ಈ ಕಟ್ಟಡ ಮಾತ್ರ ಯಾರಿಗೂ ಬೇಡವಾಗಿದೆ.
First published:
June 17, 2020, 3:38 PM IST