ಚಾಮರಾಜನಗರ(ನವೆಂಬರ್ 13) : ಕೊರೋನಾ ಸಂಕಷ್ಟದ ನಡುವೆಯೂ ಮಲೆ ಮಹದೇಶ್ವರನ ಹುಂಡಿಗೆ ಕೋಟಿಗಟ್ಟಲೆ ಹಣ ಹರಿದು ಬಂದಿದೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ 54 ದಿನಗಳ ಬಳಿಕ ಹುಂಡಿ ಏಣಿಕೆ ನಡೆದಿದ್ದು ಒಟ್ಟು 2,21,32,439 ಕೋಟಿ ರೂಪಾಯಿ ಸಂಗ್ರಹವಾಗಿದೆ. ನಗದು ಹಣದ ಜೊತೆಗೆ 40 ಗ್ರಾಂ ಚಿನ್ನ, 1 ಕೆಜಿ 657 ಗ್ರಾಂ ಬೆಳ್ಳಿಯನ್ನು ಭಕ್ತರು ಸಮರ್ಪಿಸಿದ್ದಾರೆ. ಈ ಬಾರಿ ಹನ್ನೊಂದೂವರೆ ಲಕ್ಷ ರೂಪಾಯಿಗೂ ಹೆಚ್ಚು ಹಣ ನಾಣ್ಯಗಳ ಮೂಲಕವೇ ಸಂಗ್ರಹವಾಗಿರುವುದು ವಿಶೇಷವಾಗಿದೆ. ಮಹದೇಶ್ವರ ಬೆಟ್ಟದಲ್ಲಿ ಪ್ರತಿ ತಿಂಗಳಿಗೊಮ್ಮೆ ಹುಂಡಿ ಏಣಿಕೆ ನಡೆಯುತ್ತಿತ್ತು. ಆದರೆ ಕೋವಿಡ್-19 ಹಿನ್ನಲೆಯಲ್ಲಿ ಲಾಕ್ ಡೌನ್ ಘೋಷಣೆ ಮಾಡಿದ್ದರಿಂದ ಹುಂಡಿ ಏಣಿಕೆ ನಡೆದಿರಲಿಲ್ಲ. ನಂತರ 82 ದಿನಗಳ ಬಳಿಕ ಅಂದರೆ ಸೆಪ್ಟೆಂಬರ್ 18 ರಂದು ಹುಂಡಿ ಎಣಿಕೆ ನಡೆದು ಮಹದೇಶ್ವರನ ಆದಾಯದಲ್ಲಿ ಕುಸಿತ ಕಂಡು ಬಂದಿತ್ತು.
ಮೊದಲು ಪ್ರತಿ ತಿಂಗಳ ಸರಾಸರಿ 1.50 ಕೋಟಿ ರೂ ಸಂಗ್ರಹವಾಗುತ್ತಿತ್ತು. ಆದರೆ, 82 ದಿನಗಳಿಗೆ 1.47 ಕೋಟಿ ರೂ ಸಂಗ್ರಹವಾಗುವ ಮೂಲಕ ಕಾಣಿಕೆ ಮೊತ್ತ ಇಳಿಮುಖವಾಗಿತ್ತು. ಆದರೆ, ಇದೀಗ 54 ದಿನಗಳ ಅವಧಿಯಲ್ಲಿ 2,21,32,439 ಕೋಟಿ ರೂಪಾಯಿ ಸಂಗ್ರಹವಾಗಿದ್ದು ಮಹದೇಶ್ವರನ ಆದಾಯ ನಿಧಾನವಾಗಿ ಹೆಚ್ಚಾಗುವ ಲಕ್ಷಣಗಳು ಕಂಡುಬಂದಿವೆ.
ಜೂನ್ ನಂತರ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತಾದರೂ ದರ್ಶನ ಹೊರತುಪಡಿಸಿ ಯಾವುದೇ ರೀತಿಯ ಸೇವೆಗಳಿಗೆ ಅವಕಾಶ ಇರಲಿಲ್ಲ. ಆದರೆ ಕೆಲ ದಿನಗಳ ಹಿಂದೆ ಮುಡಿಸೇವೆ, ರಾತ್ರಿ ವಾಸ್ತವ್ಯ ಹಾಗು ವಿವಿಧ ಸೇವೆಗಳಿಗೆ ವಿಧಿಸಲಾಗಿದ್ದ ಎಲ್ಲಾ ನಿರ್ಬಂಧಗಳನ್ನು ತೆರವುಗೊಳಿಸಿದ್ದರಿಂದ ಇತ್ತೀಚೆಗೆ ಭಕ್ತರ ಸಂಖ್ಯೆಯು ಜಾಸ್ತಿಯಾಗಿದೆ.
ಇದನ್ನೂ ಓದಿ : Bangalore rain: ಸಾಧಾರಣ ಮಳೆ ಸುರಿದರು ಕೆರೆಯಂತಾದ ರಸ್ತೆ: ಹೈರಾಣಾದ ವಾಹನ ಸವಾರರು
ಅದರಲ್ಲು ನವೆಂಬರ್ 1 ರ ನಂತರ ಇಲ್ಲಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗಿದೆ ಎನ್ನುತ್ತಾರೆ ಮಲೆಮಹದೇಶ್ವರ ಬೆಟ್ಟ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ