ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಶೇಜವಾಡದ ಸದಾನಂದ ಪ್ಯಾಲೇಸ್ ನಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಪೊಲೀಸರು ಹಾಗೂ ಅಧಿಕಾರಿಗಳು ದಾಳಿ ನಡೆಸಿ, ಬಂದಿದ್ದವರನ್ನೆಲ್ಲ ಸಭಾಂಗಣದಿಂದ ಹೊರ ಕಳುಹಿಸಿದ ಘಟನೆ ನಡೆದಿದೆ.
ಕೋವಿಡ್ ಮಾರ್ಗಸೂಚಿ ಪ್ರಕಟಗೊಳ್ಳುವುದಕ್ಕಿಂತಲೂ ಮೊದಲೇ ನಿಗದಿಯಾಗಿದ್ದ ಮದುವೆಯನ್ನು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವಿಕೆ, ಸ್ಯಾನಿಟೈಸರ್ ಬಳಸುವಿಕೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ನಡೆಸಲಾಗುತ್ತಿತ್ತು. ಮಾಂಗಲ್ಯ ಧಾರಣೆಯೂ ನಡೆದು, ಆರತಕ್ಷತೆ ನಡೆಯುತ್ತಿದ್ದ ವೇಳೆ ಸಭಾಂಗಣಕ್ಕೆ ಪೊಲೀಸರೊಂದಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಸಂದರ್ಭ 50ಕ್ಕಿಂತ ಹೆಚ್ಚು ಜನರು ಸೇರಿದ್ದ ಕಾರಣ, ನಿಗದಿತ ಜನರನ್ನು ಹೊರತುಪಡಿಸಿ ಉಳಿದವರೆಲ್ಲ ಹೊರ ಹೋಗುವಂತೆ ಮೈಕ್ ನಲ್ಲಿ ಸೂಚಿಸಿದ್ದಾರೆ. ಇದರಿಂದಾಗಿ ಕಕ್ಕಾಬಿಕ್ಕಿಯಾದ ಮದುವೆಗೆ ಆಗಮಿಸಿದ್ದವರಲ್ಲಿ ಕೆಲವರು ಉಡುಗೊರೆಯೂ ನೀಡದೇ, ಊಟವನ್ನೂ ಮಾಡದೆ ಭಯದಿಂದ ಸಭಾಂಗಣದಿಂದ ಹೊರ ಹೋಗಿದ್ದಾರೆ. ಕೆಲ ಸಮಯದ ಬಳಿಕ ಸಾಮಾಜಿಕ ಅಂತರ ಕಾಯ್ದುಕೊಂಡು ಉಡುಗೊರೆ ನೀಡಲು ಹಾಗೂ ಊಟಕ್ಕೆ ಅವಕಾಶ ನೀಡಲಾಯಿತು. ಬಳಿಕ ಸರದಿ ಸಾಲಿನಲ್ಲಿ ಉಡುಗೊರೆ ನೀಡಿ, ಕೆಲವರು ಊಟ ಮಾಡಿ ತೆರಳಿದರು.
ಇದನ್ನು ಓದಿ: ಕೋವಿಡ್ ನಿರ್ವಹಣೆ ಕುರಿತಂತೆ ಸಿಎಂ ಬಿಎಸ್ವೈ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಮುಖ್ಯಾಂಶಗಳು
ಮೊದಲೇ ನಿಗದಿಯಾಗಿದ್ದ ಕಾರ್ಯಕ್ರಮ ಇದಾಗಿದ್ದು, ಮಾರ್ಗಸೂಚಿ ಪ್ರಕಟವಾಗುವ ಮುನ್ನವೇ ಆಮಂತ್ರಣ ಪತ್ರಿಕೆಯೆಲ್ಲ ಹಂಚಿಯಾಗಿತ್ತು. ಮದುವೆಗೆ ಬಂದವರಿಗೂ ಹೊರ ಹೋಗುವಂತೆ ಹೇಳಲು ಆಗದ ಕಾರಣ ಸಾಮಾಜಿಕ ಅಂತರ ಪಾಲಿಸಿ, ಮಾಸ್ಕ್ ಧರಿಸುವಿಕೆ ಹಾಗೂ ಸ್ಯಾನಿಟೈಸರ್ ಬಳಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ಆದರೆ ದಿಢೀರ್ ಎಂದು ಅಧಿಕಾರಿಗಳು ದಾಳಿ ನಡೆಸಿದ್ದು ಬೇಸರವೆನಿಸಿತು ಎಂದು ಕುಟುಂಬಸ್ಥರು ಹೇಳಿದರು.
ಮದುವೆ ಜೀವನದಲ್ಲಿ ಒಮ್ಮೆ ನಡೆಯುವುದು. ತಂದೆ- ತಾಯಿಗೆ ಒಬ್ಬರೇ ಮಕ್ಕಳಿದ್ದರಂತೂ ಮದುವೆ ಬಗ್ಗೆ ನೂರಾರು ಕನಸು ಇಟ್ಟುಕೊಂಡಿರುತ್ತಾರೆ. ಆದರೆ ಈ ರೀತಿ ಕೋವಿಡ್ ಹೆಸರಲ್ಲಿ ಸಂಭ್ರಮದ ಕಾರ್ಯಕ್ರಮದಲ್ಲಿ ಆತಂಕ ಉಂಟು ಮಾಡುವ ಕಾರ್ಯವಾಗಬಾರದು. ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಸೂಚಿಸಿ ಇಂಥ ಕಾರ್ಯಕ್ರಮಗಳ ಆಚರಣೆಗೆ ಅವಕಾಶ ನೀಡಬೇಕು ಎಂದಿದ್ದಾರೆ.
ಮದುವೆ ಆರತಕ್ಷತೆ ಸಂದರ್ಭದಲ್ಲಿ ವಧು- ವರರ ಕಡೆಯವರು ಸಂಭ್ರಮದಿಂದ ಮದುವೆ ಮಾಡುತ್ತಿರುವ ಸಂದರ್ಭದಲ್ಲಿ ಏಕಾಏಕಿ ದಾಳಿ ನಡೆಸಿದ ಅಧಿಕಾರಿಗಳನ್ನು ನೋಡಿ ವಿಚಲಿತಗೊಂಡರು. ಮದುವೆ ನಡೆಯುತ್ತಾ ಅಥವಾ ಇಲ್ಲಿಗೆ ಸ್ಥಗಿತ ಮಾಡ್ತಾರಾ ಅಂತ ಸಂಬಂಧಿಕರು ಭಯಬೀತರಾದರು. ಆತಂಕದ ನಡುವೆ ಮದುವೆ ಕಾರ್ಯ ನಡೆಯಿತು. ಆದರೆ ಅಧಿಕಾರಿಗಳ ದಾಳಿಯಿಂದ ಇನ್ನಷ್ಟು ಭಯ ಮರುಗಟ್ಟಿತು. ಮದುವೆ ಮನೆ ಅಂದ ಮೇಲೆ ಸಂಭ್ರಮ ಇದ್ದೆ ಇರುತ್ತೆ. ಹೀಗೆ ಸಂಭ್ರಮದಿಂದ ಮದುವೆ ನಡೆಯುತ್ತಿರುವ ಸಂದರ್ಭದಲ್ಲಿ ಅಧಿಕಾರಿಗಳು ದಾಳಿ ನಡೆಸಿ ಕೋವಿಡ್ ನಿಯಮಾವಳಿಗಳನ್ನು ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ಕಂಗಾಲಾದ ಮದುವೆ ಮನೆಯವರು ಅಯ್ಯೋ ಇದೇನಿದು ಅಂತಾ ಕಂಗಾಲು ಬಿದ್ದಿದ್ದಾರೆ. ಇನ್ನೇನು ಆರತಕ್ಷತೆ ಮುಗಿಯುವ ಹಂತದಲ್ಲಿ ಅಧಿಕಾರಿಗಳ ದಾಳಿಯಿಂದ ಮದುವೆ ಮನೆಯವರು ವಿಚಲಿತಗೊಂಡರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ