ಹುಬ್ಬಳ್ಳಿ(ಆಗಸ್ಟ್. 27): ಕೋವಿಡ್ 19 ನಿಯಂತ್ರಣಕ್ಕಾಗಿ ಮೊದಲ ಹಂತದ ಸುಧೀರ್ಘ ಲಾಕ್ ಡೌನ್ ಅವಧಿಯಲ್ಲಿ ಮಾರ್ಚ್ 22 ರಿಂದ ಮೇ 18 ರವರೆಗೆ ಸಾರ್ವಜನಿಕ ಸಾರಿಗೆ ಬಸ್ಗಳ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ನಂತರದಲ್ಲಿ ಷರತ್ತಿಗೊಳಪಟ್ಟು ಸಾರ್ವಜನಿಕ ಸಾರಿಗೆ ಆರಂಭಿಸಲಾಗಿತ್ತು. ಜುಲೈ ತಿಂಗಳಲ್ಲಿ ರವಿವಾರಗಳಂದು ಸಂಪೂರ್ಣ ಲಾಕ್ ಡೌನ್ ಮತ್ತು 15 ರಿಂದ 21 ರವರೆಗೆ ಮತ್ತೆ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಇದ್ದು, ಭಾಗಶಃ ನಿರ್ಬಂಧ ಮುಂದುವರೆದಿತ್ತು.
ಲಾಕ್ ಡೌನ್ ಅವಧಿಯಲ್ಲಿ ಬಸ್ ನಿಲ್ದಾಣಗಳಲ್ಲಿ ಇರುವ ಎಲ್ಲಾ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಿರುವುದರಿಂದ ಯಾವುದೇ ವ್ಯಾಪಾರ ವಹಿವಾಟು ನಡೆಸಲು ಸಾಧ್ಯವಾಗಿರುವುದಿಲ್ಲ. ನಂತರದ ಅವಧಿಯಲ್ಲಿ ಅಂಗಡಿಗಳು ತೆರೆದಿದ್ದರೂ ಸಹ ಪ್ರಯಾಣಿಕರ ಕೊರತೆಯಿಂದಾಗಿ ವ್ಯಾಪಾರ-ವಹಿವಾಟು ಬಹುತೇಕ ಕುಸಿದಿತ್ತು. ಹೀಗಾಗಿ ಸಂಸ್ಥೆಗೆ ತುಂಬಬೇಕಾದ ಮಾಸಿಕ ಪರವಾನಿಗೆ ಶುಲ್ಕ (ತಿಂಗಳ ಬಾಡಿಗೆ ಹಣ) ಪಾವತಿಸಲು ತೊಂದರೆಯಾಗಿದ್ದು, ತಿಂಗಳ ಬಾಡಿಗೆಯಲ್ಲಿ ವಿನಾಯಿತಿ ನೀಡುವಂತೆ ಕೋರಿ ಅಂಗಡಿಗಳ ಪರವಾನಿಗೆದಾರರು ಸಂಸ್ಥಗೆ ಮನವಿ ಸಲ್ಲಿಸಿದ್ದರು.
ಅದನ್ನು ಸಹಾನುಭೂತಿಯಿಂದ ಪರಿಗಣಿಸಿ ಅವರ ಕಷ್ಟಕ್ಕೆ ಸ್ಪಂದಿಸಿ ಮಾನವೀಯತೆಯ ದೃಷ್ಟಿಯಿಂದ ಮಾರ್ಚ್ 22 ರಿಂದ ಮೇ 31ರ ವರೆಗೆ ಮತ್ತು ಜುಲೈ ತಿಂಗಳ ಅವಧಿಗೆ ಸಂಪೂರ್ಣ ಬಾಡಿಗೆ ವಿನಾಯಿತಿ ನೀಡಲಾಗಿದೆ. ಜೂನ್ ತಿಂಗಳು ಶೇಕಡಾ 90 ರಷ್ಟು ಮತ್ತು ಆಗಸ್ಟ್ ತಿಂಗಳಲ್ಲಿ ಶೇಕಡ 85 ರಷ್ಟು ಬಾಡಿಗೆ ವಿನಾಯಿತಿ ನೀಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ್ ತಿಳಿಸಿದ್ದಾರೆ.
ಇದನ್ನೂ ಓದಿ : ಜಿಟಿ ಜಿಟಿ ಮಳೆಗೆ ನೆಲ ಕಚ್ಚಿದ ಮುಂಗಾರು ಬೆಳೆ : ಸಂಕಷ್ಟಕ್ಕೆ ಸಿಲುಕಿದ ಬೀದರ್ ರೈತ
ಹುಬ್ಬಳ್ಳಿ ವಿಭಾಗದ ವ್ಯಾಪ್ತಿಯಲ್ಲಿ ಹುಬ್ಬಳ್ಳಿ ಹಳೆ ಬಸ್ ನಿಲ್ದಾಣ, ಗೋಕುಲ ರಸ್ತೆಯಲ್ಲಿರುವ ಹೊಸ ಬಸ್ ನಿಲ್ದಾಣ, ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣ, ಕುಂದಗೋಳ, ಸಂಶಿ, ತಡಸ, ಕಲಘಟಗಿ, ಹೆಬಸೂರು, ನವಲಗುಂದ ಮತ್ತು ಅಣ್ಣಿಗೇರಿ ಬಸ್ ನಿಲ್ದಾಣಗಳಲ್ಲಿ ಒಟ್ಟು 88 ವಾಣಿಜ್ಯ ಮಳಿಗೆಗಳಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ