ಶಿವಮೊಗ್ಗ(ಜೂ.17): ಜಿಲ್ಲೆಯಲ್ಲಿ ಮುಂಗಾರು ಮಳೆ ಮುಗಿಯುವ ತನಕ ಮರಳು ಗಾರಿಕೆಯನ್ನು ಸ್ಥಗಿತಗೊಳಿಸಲಾಗಿದೆ. ಇದನ್ನು ಕಟ್ಟುನಿಟ್ಟಾಗಿ ಅನುಷ್ಟಾನ ಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮರಳು ಗಣಿಗಾರಿಕೆಯನ್ನು ಜೂನ್ ತಿಂಗಳಿನಿಂದ ಮಾನ್ಸೂನ್ ಮುಕ್ತಾಯವಾಗುವ ತನಕ ಸ್ಥಗಿತಗೊಳಿಸಲು ಈಗಾಗಲೇ ಸೂಚನೆ ಕೊಡಲಾಗಿದೆ.
ಸ್ಟಾಕ್ ಯಾರ್ಡ್ ಗಳಲ್ಲಿರುವ ಮರಳನ್ನು ನಿಗದಿತ ಕಾಲಮಿತಿಯ ಒಳಗಾಗಿ ಸಾಗಾಣಿಕೆ ಮಾಡಲು ಅವಕಾಶ ನೀಡಲಾಗಿದೆ. ಮಾನ್ಸೂನ್ ಅವಧಿಯಲ್ಲಿ ಮರಳುಗಾರಿಕೆಯನ್ನು ಯಾವುದೇ ಕಾರಣಕ್ಕೂ ನಡೆಸಲು ಅವಕಾಶವಿಲ್ಲ. ತಾಲೂಕು ಮಟ್ಟದ ಸಮಿತಿಯು ಇದಕ್ಕೆ ಜವಾಬ್ದಾರಿಯಾಗಿರುವುದು ಎಂದು ಜಿಲ್ಲಾಧಿಕಾರಿ ಸೂಚನೆ ಕೊಟ್ಟಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಮೇ ಅಂತ್ಯದ ವರೆಗೆ ಅಕ್ರಮ ಮರಳು ಸಾಗಾಣಿಕೆ ಸಂಬಂಧ 16 ವಾಹನಗಳನ್ನು ಜಪ್ತಿ ಮಾಡಲಾಗಿದೆ. 1.48 ಲಕ್ಷ ರೂ. ದಂಡ ವಸೂಲು ಮಾಡಲಾಗಿದೆ. ಮರಳು ಸಾಗಾಣಿಕೆಯಿಂದ 24.23ಲಕ್ಷ ರೂ. ರಾಜಧನ ಸಂಗ್ರಹಿಸಲಾಗಿದೆ. ಹೆಚ್ಚುವರಿ ನಿಯತಕಾಲಿಕ ಪಾವತಿ ಮೊತ್ತ ರೂ.2.61 ಕೋಟಿ ರೂ. ಸಂಗ್ರಹಿಸಲಾಗಿದೆ.
ಅಕ್ರಮ ಮರಳು ಗಣಿಗಾರಿಕೆಯಿಂದ 8 ಲಕ್ಷ ರೂ. ರಾಜಧನ ದಂಡ ಪಡೆಯಲಾಗಿದೆ. ಕಟ್ಟಡ ಕಲ್ಲು ಗಣಿಗಾರಿಕೆಯಿಂದ 8.78 ಲಕ್ಷ ರೂ. ರಾಜಧನ ಪಡೆಯಲಾಗಿದೆ. ಕಟ್ಟಡ ಕಲ್ಲು ಅಕ್ರಮ ಗಣಿಗಾರಿಕೆ ಮತ್ತು ಸಾಗಾಣಿಕೆಯಿಂದ 3.96 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ರಶ್ಮಿ ಮಾಹಿತಿ ನೀಡಿದ್ದಾರೆ.
ಎಂಎಲ್ಸಿ ಟಿಕೆಟ್ ಫೈನಲ್ ಮಾಡಲು ನಾಳೆ ಸಿಎಲ್ಪಿ ಸಭೆ ಕರೆದ ಮಾಜಿ ಸಿಎಂ ಸಿದ್ದರಾಮಯ್ಯ
ಅನಧಿಕೃತವಾಗಿ ಮರಳುಗಾರಿಕೆ, ಅಕ್ರಮ ಗಣಿಗಾರಿಕೆಯನ್ನು ತಡೆಯಲು ತಪಾಸಣೆಯನ್ನು ತೀವ್ರಗೊಳಿಸಲಾಗಿದೆ. ಅಲ್ಲದೇ ಸರ್ಕಾರಿ ಆಸ್ತಿ ಕಳ್ಳತನದ ಮೊಕದ್ದಮೆಯನ್ನು ದಾಖಲಿಸುವಂತೆ ಜಿಲ್ಲಾಡಳಿತ ಅಧಿಕಾರಿಗಳಿ ಸೂಚಿಸಿದೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಹಳ್ಳ-ಕೊಳ್ಳದಿಂದ ಮರಳು ತೆಗೆಯಲು ಬ್ಲಾಕ್ ಗುರುತಿಸುವ ಕುರಿತು ತಾಲೂಕು ಮಟ್ಟದ ಸಮಿತಿಯಿಂದ ಶಿಫಾರಸು ಬಂದರೆ ಜಿಲ್ಲಾ ಮಟ್ಟದ ಟಾಸ್ಕ್ಫೋರ್ಸ್ ಸಮಿತಿ ಪರಿಶೀಲಿಸಿ ಅಧಿಸೂಚನೆ ಹೊರಡಿಸಲಿದೆ.
ಒಟ್ಟಾರೆ ಮುಂಗಾರು ಮಳೆ ಮುಗಿಯುವವರೆಗೂ ಜಿಲ್ಲೆಯಲ್ಲಿ ಮರಳು ಸಾಗಣಿಕೆ ಮಾಡುವಂತಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ