ಗದಗ: ಹೋಳಿ ಹಬ್ಬ ಬಂದ್ರೆ ಸಾಕು ಯುವಕರು, ಯುವತಿಯರು, ಮಕ್ಕಳು, ಮಹಿಳೆಯರು ಸಂಭ್ರಮದಿಂದ ಹೋಳಿ ಆಡಿ ಸಂಭ್ರಮ ಪಡ್ತಾರೆ. ಹಲಗಿ ಭಾರಿಸುತ್ತಾ ಬಣ್ಣದಲ್ಲಿ ಮಿಂದೇಳುತ್ತಾರೆ. ಆದ್ರೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮುಂಡರಗಿ ಪಟ್ಟಣ, ಕೋರ್ಲಹಳ್ಳಿ, ಬೆಣ್ಣಿಹಳ್ಳಿ, ಶಿರೋಳ, ನಾಗರಹಳ್ಳಿ ಸೇರಿದಂತೆ ಏಳು ಗ್ರಾಮದಲ್ಲಿ ಹೋಳಿ ಹಬ್ಬವನ್ನು ಆಚರಣೆ ಮಾಡೋದಿಲ್ಲ. ಅದಕ್ಕೂ ಒಂದು ಬಲವಾದ ಕಾರಣವಿದೆ. ಮುಂಡರಗಿ ಪಟ್ಟಣದಲ್ಲಿ ನೆಲೆನಿಂತಿರುವ ಶ್ರೀ ಲಕ್ಷ್ಮೀ ಕನಕ ನರಸಿಂಹ ದೇವಸ್ಥಾನದ ಮಹಿಮೆ ಇದಕ್ಕೆ ಕಾರಣವಂತೆ.
ಹೋಳಿ ಹುಣ್ಣಿಮೆಯಿಂದ ಐದು ದಿನಗಳ ಕಾಲ ಶ್ರೀ ಲಕ್ಷ್ಮಿ ಕನಕ ನರಸಿಂಹ ಹಾಗೂ ಶ್ರೀ ಲಕ್ಷ್ಮಿ ದೇವಿಯ ಕಲ್ಯಾಣ ನಡೆಯುತ್ತದೆ. ಮದುವೆ ಕಾರ್ಯ ನಡೆಯುವಾಗ ಹೋಳಿ ಹಬ್ಬವನ್ನು ಆಚರಣೆ ಮಾಡಬಾರದು ಎನ್ನುವ ನಂಬಿಕೆಯಿದೆ. ಹೀಗಾಗಿ ಶತ ಶತಮಾನಗಳಿಂದ ಒಂದು ಪಟ್ಟಣ ಸೇರಿದಂತೆ ಏಳು ಗ್ರಾಮಗಳಲ್ಲಿ ಹೋಳಿ ಹಬ್ಬವನ್ನು ಆಚರಣೆ ಮಾಡೋದಿಲ್ಲಾ. ಹಿಂದಿನ ಹಿರಿಯ ಕಾಲದಿಂದಲೂ ಈ ಸಂಪ್ರದಾಯವನ್ನು ಆಚರಣೆ ಮಾಡಿಕೊಂಡು ಬರಲಾಗಿದ್ದು, ಈಗಲೂ ಮುಂದುವರೆಸಿಕೊಂಡು ಹೋಗಲಾಗುತ್ತಿದೆ ಅಂತಾರೆ ಹಿರಿಯರು.
ಇನ್ನು, ಮುಂಡರಗಿ ಪಟ್ಟಣ ಹಾಗೂ ಏಳು ಗ್ರಾಮದಲ್ಲಿ ರತಿ ಮನ್ಮಥರನ್ನು ಪ್ರತಿಷ್ಠಾನೆ ಮಾಡುವುದಿಲ್ಲ. ಕಾಮ ದಹನವನ್ನು ಕೂಡ ಮಾಡೋದಿಲ್ಲಾ. ಮಕ್ಕಳು, ಯುವಕರು ಹಲಗಿ ಭಾರಿಸೋದಿಲ್ಲ. ಇಡೀ ನಾಡಿನಾದ್ಯಂತ ಹೋಳಿ ಸಂಭ್ರಮ ಇದ್ರೆ, ಈ ಗ್ರಾಮಗಳ ಜನ್ರು ಮಾತ್ರ ಬಣ್ಣದ ಸಹವಾಸಕ್ಕೆ ಹೋಗುವುದಿಲ್ಲ. ಹಾಗೇನಾದರೂ ಹೋಳಿ ಆಚರಣೆ ಮಾಡಿದರೆ ಗ್ರಾಮಗಳಿಗೆ ಕೇಡು ಆಗುತ್ತದೆ ಎನ್ನುವ ನಂಬಿಕೆಯಿದೆ.
ಇದನ್ನೂ ಓದಿ: ಕಾಫಿತೋಟದಲ್ಲಿ ಅರಳಿದ ನಿಷ್ಕಲ್ಮಷ ಪ್ರೇಮಕಥನ; ಸ್ನಪ್ನ-ಮನು ಲವ್ ಸ್ಟೋರಿ ಎಲ್ಲರಿಗೂ ಮಾದರಿ
ಈ ಹಿಂದೆ ಹೋಳಿ ಆಚರಣೆ ಮಾಡಿದಾಗ ಪ್ಲೇಗ್ ಎನ್ನುವ ರೋಗ ಬಂದು ಗ್ರಾಮದ ಜನರು ನರಕಯಾತನೆ ಅನುಭವಿಸಿದ್ದರು ಎಂದು ಇಲ್ಲಿನ ಜನರು ಈಗಲೂ ಭಯಪಡುತ್ತಾರೆ. ಹಾಗಾಗಿ ನೂರಾರು ವರ್ಷಗಳಿಂದ ಹೋಳಿ ಹಬ್ಬವನ್ನು ಆಚರಣೆ ಮಾಡೋದನ್ನೇ ಬಿಟ್ಟಿದ್ದೇವೆ ಎನ್ನುತ್ತಾರೆ ಗ್ರಾಮಸ್ಥರು. ಮಕ್ಕಳು ಹಾಗೂ ಯುವಕರು ಬಣ್ಣದ ತಂಟೆಗೆ ಹೋಗೋದಿಲ್ಲ.
ವರದಿ: ಸಂತೋಷ ಕೊಣ್ಣೂರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ