ಮಂಗಳೂರು(ಜುಲೈ. 17): ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾದ ಮಹಿಳೆಗೆ ಕೊರೋನಾ ಪಾಸಿಟಿವ್ ದೃಢಪಟ್ಟ ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಯ ಗೇಟು ಮುರಿದು ಮಹಿಳೆಯ ಗಂಡ, ಮಗು ಹಾಗೂ ಮಹಿಳೆಯನ್ನು ಮನೆಗೆ ಕರೆದೊಯ್ದ ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಪೋಲೀಸರು ಬಾಣಂತಿ ಮಹಿಳೆ ಮತ್ತು ಮಗುವನ್ನು ಮಹಿಳೆಯ ಗಂಡನ ಮನೆಯಲ್ಲಿ ಪತ್ತೆ ಹಚ್ಚಿದ್ದಾರೆ.
ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಬೆಳ್ತಂಗಡಿಯ ನಾವೂರು ಗ್ರಾಮದ ಮಹಿಳೆ ಜುಲೈ 15 ರಂದು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾದ ಬಳಿಕ ಅವರ ಗಂಟಲು ದ್ರವವನ್ನು ಪರೀಕ್ಷೆಗೆ ತೆಗೆದುಕೊಳ್ಳಲಾಗಿತ್ತು. ಬುಧವಾರ ರಾತ್ರಿಯೇ ಮಹಿಳೆಗೆ ಹೆರಿಗೆಯಾಗಿದ್ದು, ಗುರುವಾರ ಸಂಜೆ ವೇಳೆಗೆ ಅವರ ಗಂಟಲು ದ್ರವದ ವರದಿ ಬಂದಿದೆ. ವರದಿಯಲ್ಲಿ ಮಹಿಳೆಯಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಈ ವಿಷಯವನ್ನು ಮಹಿಳೆ ತನ್ನಗಂಡನಿಗೆ ತಿಳಿಸಿದ್ದು, ಆತ ರಾತ್ರಿ ವೇಳೆ ಆಸ್ಪತ್ರೆಯ ಗೇಟನ್ನು ಮುರಿದು ಮಹಿಳೆ ಹಾಗೂ ಮಗುವನ್ನು ತನ್ನ ಕಾರಿನಲ್ಲಿ ಕರೆದೊಯ್ದಿದ್ದಾನೆ.
ಮಗು ಮತ್ತು ಮಹಿಳೆಯನ್ನು ಆತ ಎಲ್ಲಿಗೆ ಕರೆದೊಯ್ದಿದ್ದಾನೆ ಎನ್ನುವ ಸಂಶಯದ ಹಿನ್ನಲೆಯಲ್ಲಿ ಘಟನಗೆ ಸಂಬಂಧಿಸಿದಂತೆ ಬೆಳ್ತಂಗಡಿ ಪೋಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಪೋಲೀಸರು ಬಾಣಂತಿ ಮಹಿಳೆಯ ಗಂಡನನ್ನು ಪತ್ತೆಹಚ್ಚಿದ್ದು, ಮಗು ಮತ್ತು ಬಾಣಂತಿ ಮಹಿಳೆ ಆತನ ಮನೆಯಲ್ಲೇ ಇರುವುದನ್ನು ದೃಢಪಡಿಸಿದ್ದಾರೆ.
ಬಾಣಂತಿ ಮಹಿಳೆ ಹಾಗು ಮಗುವನ್ನು ಮಂಗಳೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಡುವೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ಆಗಮಿಸಿದ ಒಟ್ಟು ನಾಲ್ಕು ಮಂದಿ ಮಹಿಳೆಯರಲ್ಲೂ ಕೊರೋನಾ ಪಾಸಿಟಿವ್ ಪತ್ತೆಯಾಗಿತ್ತು. ಇದೀಗ ಆಸ್ಪತ್ರೆಯ ವೈದ್ಯಾಧಿಕಾರಿಗೂ ಕೊರೋನಾ ಪಾಸಿಟಿವ್ ದೃಢವಾಗಿದೆ. ಈ ಹಿನ್ನಲೆಯಲ್ಲಿ ಇದೀಗ ಆಸ್ಪತ್ರೆಯ ಹೆರಿಗೆ ವಿಭಾಗವನ್ನು ಸೀಲ್ ಡೌನ್ ಮಾಡಲಾಗಿದೆ.
ಇದನ್ನೂ ಓದಿ : ಪೌಷ್ಟಿಕ ಆಹಾರ ಕಾಳಸಂತೆಯಲ್ಲಿ ಮಾರಾಟ ; ಪ್ರಶ್ನಿಸಿದವರಿಗೆ ಬೆದರಿಕೆ ಹಾಕಿದ ಅಂಗನವಾಡಿ ಕಾರ್ಯಕರ್ತೆ
ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ಕೊರೋನಾ ಪಾಸಿಟಿವ್ ಸಂಖ್ಯೆ ಎರಡುವರೆ ಸಾವಿರದ ಗಡಿ ದಾಟಿದ್ದು, ಕೊರೋನಾದಿಂದಾಗಿ ಒಟ್ಟು 63 ಜನ ಸಾವನ್ನಪ್ಪಿದ್ದಾರೆ. ನಗರ ಭಾಗದಲ್ಲಿ ಸೀಮಿತಗೊಂಡಿದ್ದ ಕೊರೋನಾ ಇದೀಗ ಗ್ರಾಮೀಣ ಭಾಗಕ್ಕೂ ಪಸರಿಸುತ್ತಿರುವುದು ಆತಂಕಕ್ಕೂ ಕಾರಣವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ