ಮೈಸೂರು (ಏಪ್ರಿಲ್ 04): ಧೃತರಾಷ್ಟ್ರನ ಪುತ್ರ ಪ್ರೀತಿ ಅವರ ಇಡೀ ಕುಟುಂಬವನ್ನೇ ನಾಶ ಮಾಡುತ್ತೇ, ಮೊದಲು ನಿಮ್ಮ ಪುತ್ರ ವ್ಯಾಮೋಹ ಮೊದಲು ಬಿಡಿ ಯಾವ ಕುಟುಂಬದಲ್ಲು ನಿಮ್ಮ ರೀತಿ ರಾಜಕಾರಣ ಮಾಡಿಲ್ಲ. ನಿಮ್ಮದು ಧೃತರಾಷ್ಟ್ರನ ರೀತಿಯ ಸ್ಥಿತಿಯಾಗುತ್ತೆ ಅಂತ ಮೈಸೂರಿನ ಕಾಂಗ್ರೆಸ್ ಶಾಸಕರು ಸಿಎಂ ಯಡಿಯೂರಪ್ಪ ವಿರುದ್ದ ಹರಿಹಾಯ್ದಿದ್ದಾರೆ. ಮೈಸೂರಿನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಶಾಸಕರಾದ ಹೆಚ್.ಪಿ.ಮಂಜುನಾಥ್, ಯತೀಂದ್ರ ಸಿದ್ದರಾಮಯ್ಯ, ಆರ್.ಧರ್ಮಸೇನಾ ಹಾಗೂ ಕೆ.ಪಿ.ಸಿ.ಸಿ. ವಕ್ತಾರ ಲಕ್ಷ್ಮಣ್ ಮೈಸೂರು ಜಿಲ್ಲೆಯ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡದಿದ್ದಕ್ಕೆ ಯಡಿಯೂರಪ್ಪ ವಿರುದ್ದ ವಾಗ್ದಾಳಿ ಮಾಡಿದ್ದಾರೆ.
ಹುಣಸೂರಿನ ಬಗ್ಗೆ ಯಾಕೆ ನಿಮಗೆ ಈ ತಾರತಮ್ಯ ಇದೆ, ಹುಣಸೂರಿನಲ್ಲಿ ನಿಮ್ಮವರು ಯಾರು ಇಲ್ಲ ಅಂತನಾ? ಸಾಧ್ಯವಾದ್ರೆ ನಿಮ್ಮ ಒಂದೆರಡು ಕುಟುಂಬವನ್ನಾದರು ತಂದು ಬಿಡಿ ಆಗಲಾದರೂ ಹುಣಸೂರು ಕ್ಷೇತ್ರಕ್ಕೆ ನೀವು ಅನುದಾನ ಕೊಡ್ತಿರಾ ಅಂತ ನೋಡೋಣ ಎಂದು ಹುಣಸೂರು ಶಾಸಕ ಹೆಚ್.ಪಿ.ಮಂಜುನಾಥ್ ಆಕ್ರೋಶ ಹೊರಹಾಕಿದ್ದಾರೆ. ನಿಮ್ಮ ಕುಟುಂಬಕ್ಕಾಗಿ ಸರ್ಕಾರ ನಡೆಸುತ್ತಿದ್ದೀರಾ?.
ಪಿಪಿಇ ಕಿಟ್, ಕೊರೋನಾ ವಾಕ್ಸಿನ್ ಇದೆಲ್ಲ ತರುವುದರಲ್ಲಿ ನಿಮ್ಮ ಕುಟುಂಬದವರೇ ಇದ್ದಾರೆ ಅದರ ದಾಖಲೆಯು ನನ್ನ ಬಳಿ ಇದೆ. ಹೈದ್ರಾಬಾದ್ ದೆಹಲಿಯಿಂದ ಎಲ್ಲ ಬಂದಿರಬಹುದು, ಆದ್ರೆ ಅದು ಬರುವುದಕ್ಕೆ ಒಂದು ಸಂಸ್ಥೆ ಬೇಕಲ್ಲವೇ ಅದು ನಿಮ್ಮ ಕುಟುಂಬದವರೇ ವಹಿಸಿಕೊಂಡಿದ್ದಾರೆ ಎಂದು ಶಾಸಕ ಮಂಜುನಾಥ್ ಗಂಭೀರ ಆರೋಪ ಮಾಡಿದರು.
ನಿಮ್ಮವರನ್ನೇ ಯಾರದರು ಹುಣಸೂರಿಗೆ ನೇಮಕ ಮಾಡಿ ಅವರ ಮುಖಾಂತರವೇ ನಾವು ಕೆಲಸ ಮಾಡಿಸಿಕೊಳ್ತಿವಿ. ಸ್ವಪಕ್ಷದವರೇ ಸಿಎಂ ವಿರುದ್ಧ ಗಂಭೀರ ಆರೋಪ ಮಾಡ್ತಿದ್ದಾರೆ ಆದರು ಏನು ಗೊತ್ತಿಲ್ಲದಂತೆ ಸಿಎಂ ಹಾಗೂ ಬಿಜೆಪಿ ವರ್ತಿಸುತ್ತಿದೆ. ನನ್ನ ಪ್ರಕಾರ ಮೋದಿ ಅಮಿತ್ ಶಾ ಕಣ್ತಪ್ಪಿಸಿ ಸಿಎಂ ಹಣ ಮಾಡುತ್ತಿದ್ದಾರೆ. ಎಲ್ಲಾ ವಿಚಾರದಲ್ಲು ಹಣ ಹೊಡೆಯುತ್ತಿದ್ದಾರೆ ಈ ಬಗ್ಗೆ ಕೇಂದ್ರದ ನಾಯಕರಿಗೆ ಗೊತ್ತಾಗದಂತೆ ಇಡೀ ಸಿಎಂ ಕುಟುಂಬ ಸೇರಿಕೊಂಡಿದೆ ಎಂದು ಕುಟುಂಬ ರಾಜಕಾರಣದ ವಿರುದ್ದ ಕಿಡಿಕಾರಿದರು.
ಇಷ್ಟೆ ಅಲ್ಲದೆ ಸ್ವಂತ ಜಮೀನಿಗೆ ರಸ್ತೆ ದುರಸ್ತಿ ಮಾಡಿಸಿಕೊಳ್ಳಲು ಸರ್ಕಾರದ ಅನುದಾನ ಕೊಟ್ಟಿದ್ದಾರೆ. ಹುಣಸೂರಿನ ಧರ್ಮಪುರದ ಬಳಿಯ ದೈತ್ಯನ ಕೆರೆ ಬಳಿ ಜಮೀನಿದೆ ಇದು ಮುಖ್ಯಮಂತ್ರಿ ಬಿಎಸ್ ವೈ ತಂಗಿ ಮಗನ ಅಶೋಕ್ ಎಂಬುವವರ ತೋಟ. ಇಲ್ಲಿ ಅವರ ತೋಟಕ್ಕೆ ಅನುಕೂಲವಾಗಲಿ ಅಂತ ದೈತ್ಯನಕೆರೆಗೆ ಕಟ್ಟೆ ಕಟ್ಟಲು 3 ಕೋಟಿ ಅನುದಾನ ಕೊಟ್ಟಿದ್ದಾರೆ. ಇದಕ್ಕಿಂತ ದೊಡ್ಡ ಕೆರೆ ನೂರಾರು ಜನರಿಗೆ ಅನುಕೂಲವಾಗುವ ಕೆರೆಗೆ ಅನುದಾನ ಕೊಟ್ಟಿಲ್ಲ ಈ ಬಗ್ಗೆ ಸಾಕಷ್ಟು ಮನವಿ ಮಾಡಲಾಗಿದೆ.
ಕಟ್ಟೆಮಳಲವಾಡಿ ಕೆರೆ ದುರಸ್ತಿಗೆ ಅನುದಾನ ಕೇಳಿದ್ದೆ ಆ ಕೆರೆ ದುಸ್ತಿತಿಯಲ್ಲಿದ್ದು, ಅಲ್ಲು ನೀರು ನಿಲ್ಲದ ಸ್ಥಿತಿಯಲ್ಲಿದೆ. ಅನುದಾನವನ್ನು ಜನಪ್ರತಿನಿಧಿಗಳಿಗೆ ಕೊಡುತ್ತಿಲ್ಲ. ಕುಟುಂಬದವರಿಗೆ ಮಾತ್ರ ಕೊಡುತ್ತಿದ್ದಾರೆ ಇದು ಸ್ವಂತ ಜಮೀನಿಗೆ ದುರಸ್ತಿ ಮಾಡಿಸಿಕೊಳ್ಳಲು ಸರ್ಕಾರದ ಅನುದಾನ ನೀಡಿದ್ದಂತಾಗಿದೆ ಎಂದು ಹುಣಸೂರಿನ ಕಾಂಗ್ರೆಸ್ ಶಾಸಕ ಹೆಚ್.ಪಿ.ಮಂಜುನಾಥ್ ಆರೋಪಿಸಿದರು.
ಮುಂದುವರೆದು ಮಾತನಾಡಿದ ವರುಣಾ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ ಕುಟುಂಬದವರು ಅನುದಾನ ಕೇಳಿದ್ರೆ ಅನುದಾನ ಸಿಗುತ್ತೆ.ಆದರೆ ಜನಪ್ರತಿನಿಧಿಗಳು ಕೇಳಿದ್ರೆ ಅನುದಾನ ಕೊಡುತ್ತಿಲ್ಲ ಈ ಸರ್ಕಾರ ಬಂದಾಗಿನಿಂದ ಯಾವುದೇ ಅನುದಾನ ಸಿಗುತ್ತಿಲ್ಲ. ಮುಖ್ಯಮಂತ್ರಿ ಕಚೇರಿಯೆ ವಿಜಯೇಂದ್ರ ಅವರದ್ದಾಗಿದೆ.
ಇದನ್ನೂ ಓದಿ: CoronaVirus: ಕಳೆದ ವರ್ಷ ಲಾಕ್ಡೌನ್ನಿಂದ ನೆಲಕಚ್ಚಿ ಹೋಗಿದ್ದ ಕರಾವಳಿ ಪ್ರವಾಸೋದ್ಯಮಕ್ಕೆ ಮತ್ತೆ ಶಾಕ್!
ನಾವು ಕೇಳಿದ ಅಭಿವೃದ್ದಿಗೆ ಅನುದಾನ ಬಿಡುಗಡೆಯಾಗಿಲ್ಲ, ಅವರ ಕಡೆಯವರು ಬೇಕು ಎಂದರೆ ಬೇಡದ ಕೆಲಸಕ್ಕು ಅನುದಾನ ಬಿಡುಗಡೆ ಮಾಡಿದ್ದಾರೆ. ಅದು ಸಹ ಅಭಿವೃದ್ಧಿ ವಿಚಾರಕ್ಕೆ ಅನುದಾನ ಸಿಕ್ಕಿಲ್ಲ ಅಂತ ಯತೀಂದ್ರ ಸಿದ್ದರಾಮಯ್ಯ ಕೂಡ ಆರೋಪಿಸಿದರು.
ಒಟ್ಟಾರೆ ಇಂದು ಮೈಸೂರಿನ ಕೈ ಶಾಸಕರು ಒಗ್ಗಟ್ಟು ಪ್ರದರ್ಶಿಸಿ ಸಿಎಂ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಕುಟುಂಬ ರಾಜಕಾರಣದ ಆರೋಪ ಮಾಡಿರುವ ಕಾಂಗ್ರೆಸ್ ಶಾಸಕರು ಇನ್ನಾದರೂ ಅನುದಾನ ಬಿಡುಗಡೆ ಮಾಡ್ತಾರಾ ಕಾದು ನೋಡೋಣ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ