ಹುಬ್ಬಳ್ಳಿ; ರಮೇಶ್ ಜಾರಕಿಹೊಳಿ ವಿಚಾರದಲ್ಲಿ ಕಾನೂನಿಗಿಂತ ಮುಖ್ಯವಾಗಿ ನೈತಿಕತೆ ಪ್ರಶ್ನೆಯಿದೆ ಎಂದು ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅಭಿಪ್ರಾಯಪಟ್ಟಿದ್ದಾರೆ. ಹುಬ್ಬಳ್ಳಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ರಮೇಶ ಸಿಡಿ ಪ್ರಕರಣದ ಬಗ್ಗೆ ನಾನು ಹೆಚ್ಚೇನು ಹೇಳಲ್ಲ ಎಂದರು.
ಕಾನೂನು ಇತ್ಯಾದಿಗಳಿಗಿಂತ ಹೆಚ್ಚಾಗಿ ನೈತಿಕತೆ ಪ್ರಶ್ನೆ ಬರುತ್ತೆ. ಏನೇ ಇದ್ದರೂ ಈ ವಿಚಾರದಲ್ಲಿ ರಾಜಕಾರಣಿಗಳಿಗೆ ನೈತಿಕತೆ ಮುಖ್ಯ. ಭಾರತೀಯ ರಾಜಕಾರಣಿಗಳಿಗೆ ವಿಶೇಷ ಗೌರವವಿದೆ. ನಮ್ಮನ್ನ ಅನುಕರಣೆ ಮಾಡೋ ಜನ ಇರ್ತಾರೆ. ನಾವು ಗೌರವದಿಂದ ಇರಬೇಕು. ಕಾನೂನು ವಿಚಾರಕ್ಕಿಂತ ಮಿಗಿಲಾಗಿ ನೈತಿಕತೆ ಅನ್ನೋದು ಮುಖ್ಯ ಎಂದರು. ಆರೋಗ್ಯ ಸಚಿವ ಸುಧಾಕರ್ ರವರ ಏಕಪತ್ನಿ ವ್ರತಸ್ಥ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಜೋಶಿ, ಸುಧಾಕರ್ ಹೇಳಿಕೆ ಸರಿಯಲ್ಲ. ಆ ರೀತಿ ಹೇಳಿಕೆ ಕೊಡಬಾರದಿತ್ತು. ಬೇರೆಯವರನ್ನ ನೋಡಿ ನಾವು ಅನುಸರಿಸೋದಲ್ಲ. ನಮಗೆ ನಾವು ಸರಿಯಾಗಿ ಇರಬೇಕು ಎಂದು ಹೇಳಿದರು.
ಬೆಳಗಾವಿ ಉಪಚುನಾವಣೆ ಮೇಲೆ ಸಿಡಿ ಪ್ರಕರಣ ಯಾವುದೇ ಪರಿಣಾಮ ಬೀರಲ್ಲ. ಮೋದಿ, ಸುರೇಶ ಅಂಗಡಿಯವರು ಮಾಡಿದ ಅಭಿವೃದ್ದಿ ಕೆಲಸದ ಮೇಲೆ ಚುನಾವಣೆ ನಡೆಯುತ್ತೆ. ಬಿಜೆಪಿ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ ಎಂದು ಪ್ರಹ್ಲಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ಒಬ್ಬ ಗುಳೇ ನಾಯಕ
ರಾಹುಲ್ ಗಾಂಧಿ ಒಬ್ಬ ಗುಳೇ ನಾಯಕನಾಗಿದ್ದು, ಆತನ ಕರಾಮತ್ತು ಕೇರಳದಲ್ಲಿ ನಡೆಯಲ್ಲ ಎಂದು ಪ್ರಹ್ಲಾದ್ ಜೋಶಿ ಅಭಿಪ್ರಾಯಪಟ್ಟಿದ್ದಾರೆ. ರಾಹುಲ್ ಗಾಂಧಿ ಉತ್ತರ ಭಾರತದಿಂದ ಕೇರಳಕ್ಕೆ ಗುಳೆ ಹೋಗಿದ್ದಾರೆ. ಹಿಂದೆ ಕೆಲಸಕ್ಕಾಗಿ ಕಾರ್ಮಿಕರು ಗುಳೆ ಹೋಗುವುದನ್ನು ನೋಡಿದ್ದೆವು. ಈಗ ರಾಜಕಾರಣಿಗಳು ಗುಳೇ ಹೋಗುತ್ತಿರುವುದನ್ನು ರಾಹುಲ್ ಗಾಂಧಿ ಮೂಲಕ ನೋಡುತ್ತಿದ್ದೇವೆ. ಗುಳೇ ಹೋಗಿರೋ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕತ್ವದ ಬಗ್ಗೆ ಕೇರಳ ಜನರಿಗೆ ನಂಬಿಕೆಯಿಲ್ಲ. ಹೀಗಾಗಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಯುಡಿಎಫ್ ಸಿಂಕ್ ಆಗುತ್ತಿದೆ. ಯುಡಿಎಫ್ ಕೇರಳದಲ್ಲಿ ಮೂರನೇ ಸ್ಥಾನಕ್ಕೆ ಹೋಗಲಿದೆ. ಬಿಜೆಪಿ ಕೇರಳದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲಿದೆ. ಕೇರಳದಲ್ಲಿ ಸ್ಪರ್ಧೆ ಏನಿದ್ದರೂ ಎಲ್.ಡಿ.ಎಫ್ ಮತ್ತು ಬಿಜೆಪಿ ನಡುವೆ ಮಾತ್ರ ಎಂದರು.
ಕೇರಳ ಸಿಎಂ ಪಿಣರಾಯಿ ವಿಜಯನ್ ಮೇಲಿನ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಜೋಶಿ, ವಿದೇಶಿ ಹಣ ಅಕ್ರಮ ಸಾಗಣೆ ಆರೋಪ ಅವರ ಮೇಲಿದೆ. ಈ ಸಂಬಂಧ ಒಂಬತ್ತು ಪ್ರಶ್ನೆ ಕೇಳಲಾಗಿದೆ. ಪಿಣರಾಯಿ ವಿಜಯನ್ ಒಂದಕ್ಕೂ ಉತ್ತರ ಕೊಟ್ಟಿಲ್ಲ. ಆದರೆ ಕೇಂದ್ರ ತನಿಖಾ ಸಂಸ್ಥೆಗಳಿಗೆ ಥ್ರೆಟ್ ಮಾಡುತ್ತಿದ್ದಾರೆ. ಪಿಣರಾಯಿ ವಿಜಯನ್ ವರ್ತನೆ ಅಸಂವಿಧಾನಿಕ ಎಂದು ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.
ಇದನ್ನು ಓದಿ: ಕೊನೆಗೂ ಪ್ರತ್ಯಕ್ಷರಾದ ಜಾರಕಿಹೊಳಿ ಸಿಡಿ ಯುವತಿಯ ಪೋಷಕರು; ಎಸ್ಐಟಿಯಿಂದ ವಿಚಾರಣೆ
ಸಿಡಿ ಷಡ್ಯಂತ್ರದ ತನಿಖೆಯಾಗಲಿ ಎಂದ ಶೆಟ್ಟರ್
ಸಿಡಿ ಪ್ರಕರಣ ಷಡ್ಯಂತ್ರ ನಡೆದಿದೆಯೆಂದು ಸ್ವತಃ ರಮೇಶ್ ಜಾರಕಿಹೊಳಿ ಹೇಳಿದ್ದು, ತನಿಖೆ ನಡೆಯಲಿ ಎಂದು ಮಾಜಿ ಸಿಎಂ ಹಾಗೂ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಕರಿತು ಸದ್ಯ ಎಸ್ ಐಟಿ ತನಿಖೆ ನಡೆಯುತ್ತಿದೆ. ತನಿಖೆ ಪೂರ್ಣ ಆಗಿ ಸತ್ಯಾಂಶ ಹೊರಬರಲಿ ಎಂದಿದ್ದಾರೆ.
ವರದಿ - ಶಿವರಾಮ ಅಸುಂಡಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ