ಒಲ್ಲದ ಮನಸ್ಸಿನಿಂದಲೇ ಎನ್ಇಕೆಆರ್ಟಿಸಿ ಪದಗ್ರಹಣ ; ಸಚಿವ ಸ್ಥಾನದ ಮೇಲಿನ ಆಸೆ ಬಿಡದ ತೇಲ್ಕೂರ
ಹೈಕಮಾಂಡ್ ಗೆ ತಪ್ಪು ಸಂದೇಶ ರವಾನೆಯಾಗಬಾರದು, ಸಚಿವ ಸ್ಥಾನದ ರೇಸ್ ನಲ್ಲಿ ತಾನೂ ಇರಬೇಕೆಂಬ ಉದ್ದೇಶದೊಂದಿಗೆ ತೇಲ್ಕೂರ ಅಧಿಕಾರ ಸ್ವೀಕರಿಸಿದ್ದಾರೆ. ಬಿಜೆಪಿ ಹಿರಿಯ ನಾಯಕರು, ಕಾರ್ಯಕರ್ತರು, ಅಧಿಕಾರಿಗಳು ನೂತನ ಅಧ್ಯಕ್ಷರಿಗೆ ಶುಭ ಕೋರಿದ್ದಾರೆ
ಶಾಸಕ ರಾಜಕುಮಾರ ಪಾಟೀಲ ಅವರಿಗೆ ಶುಭ ಕೋರಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ
ಕಲಬುರ್ಗಿ(ಸೆಪ್ಟೆಂಬರ್. 07): ಈಶಾನ್ಯ ವಲಯ ರಸ್ತೆ ಸಾರಿಗೆ ಸಂಸ್ಥೆ ನಿಗಮದ ಅಧ್ಯಕ್ಷರಾಗಿ ರಾಜಕುಮಾರ ಪಾಟೀಲ ತೇಲ್ಕೂರ ಇಂದು ಪದಗ್ರಹಣ ಮಾಡಿದ್ದಾರೆ. ಸೇಡಂ ಕ್ಷೇತ್ರದ ಶಾಸಕರಾಗಿರುವ ರಾಜಕುಮಾರ ಪಾಟೀಲ ತೇಲ್ಕೂರ, ಒಲ್ಲದ ಮನಸ್ಸಿನಿಂದಲೇ ಇಂದು ಪದಗ್ರಹಣ ಮಾಡಿದ್ದಾರೆ. ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ನೂತನ ಅಧ್ಯಕ್ಷರನ್ನು ಸನ್ಮಾನಿಸಿ ಶುಭ ಕೋರಿದರು. ಈ ವೇಳೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಮತ್ತಿತರರು ಉಪಸ್ಥಿತರಿದ್ದರು. ಸಚಿವ ಸ್ಥಾನಕಾಂಕ್ಷಿಯಾಗಿದ್ದ ರಾಜಕುಮಾರ ಪಾಟೀಲ ತೇಲ್ಕೂರ ಎನ್ಇಕೆಆರ್ಟಿಸಿ ಅಧ್ಯಕ್ಷ ಸ್ಥಾನ ಘೋಷಣೆಯಾಗಿ ಎರಡು ತಿಂಗಳಾಗುತ್ತಾ ಬಂದರೂ ಅಧಿಕಾರ ಸ್ವೀಕರಿಸುವ ಗೋಜಿಗೆ ಹೋಗಿರಲಿಲ್ಲ. ಈ ಸಂಬಂಧ ಮುಖ್ಯಮಂತ್ರಿಗಳನ್ನು ಭೇಟಿಯಾಗುವ ಜೊತೆಗೆ, ದೆಹಲಿಯ ಹೈಕಮಾಂಡ್ ವರೆಗೂ ಹೋಗಿ ತಮ್ಮ ಅಸಮಾಧಾನ ಹೊರಹಾಕಿದ್ದರು.
ಆದರೆ ಯಾವುದೇ ಪ್ರಯೋಜನವಾಗಿರಿಲ್ಲ. ಸಚಿವ ಸ್ಥಾನದ ಭರವಸೆಯೂ ಸಿಕ್ಕಿರಲಿಲ್ಲ. ಕೊಟ್ಟ ಅಧ್ಯಕ್ಷ ಪದವಿಯನ್ನು ತಿರಸ್ಕರಿಸಿದರೆ ಹೈಕಮಾಂಡ್ ಗೆ ಬೇರೆ ಸಂದೇಶ ರವಾನೆಯಾಗುತ್ತೆ, ಸಚಿವ ಸಂಪುಟ ವಿಸ್ತರಣೆ ವೇಳೆಯಲ್ಲಿ ಇದೇ ದೊಡ್ಡ ತೊಡಕಾಗಬಾರದೆಂದು ಕೊನೆಗೂ ಒಲ್ಲದ ಮನಸ್ಸಿನಿಂದಲೇ ಅಧಿಕಾರ ಸ್ವೀಕರಿಸಿದ್ದಾರೆ ಎಂದು ಆಪ್ತ ವಲಯ ಮಾಹಿತಿ ನೀಡಿದೆ. ಅಲ್ಲದೆ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಕಲಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಸಹ ಒಲ್ಲದ ಮನಸ್ಸಿನಿಂದಲೇ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಹೀಗಾಗಿ ರಾಜಕುಮಾರ ಪಾಟೀಲ ತೇಲ್ಕೂರ ಸಹ ದತ್ತಾತ್ರೇಯ ಪಾಟೀಲ ರೇವೂರರನ್ನೇ ಅನುಸರಿಸಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿರೋ ತೇಲ್ಕೂರ, ಎನ್ಇಕೆಆರ್ಟಿಸಿ ಸದ್ಯ ನಷ್ಟದಲ್ಲಿದೆ. ಅದರಲ್ಲಿಯೂ ಕೋವಿಡ್ ಬಂದ ನಂತರ ಅದರ ನಷ್ಟದ ಪ್ರಮಾಣದ ಮತ್ತಷ್ಟು ಹೆಚ್ಚಿದೆ.
ನಷ್ಟದಲ್ಲಿರುವ ಸಾರಿಗೆ ನಿಗಮವನ್ನು ಲಾಭದತ್ತ ಕೊಂಡೊಯ್ಯುವ ಗುರಿ ಹೊಂದಿದ್ದು, ಅದರಲ್ಲಿ ಯಶಸ್ಸು ಕಾಣುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಎನ್ಇಕೆಆರ್ಟಿಸಿ ಆರಂಭದಿಂದಲೇ ಬಾಲಗ್ರಹಪೀಡನೆಗೆ ತುತ್ತಾದಂತೆ ನಷ್ಟದ ಕೂಪದಲ್ಲಿದೆ. ಸರ್ಕಾರ ಏನೆಲ್ಲಾ ಹಣಕಾಸಿನ ನೆರವು ನೀಡಿ ಪ್ರೋತ್ಸಾಹಿಸಿದರೂ ಅದನ್ನು ನಷ್ಟದ ಹಾದಿಯಿಂದ ಹೊರತರಲಾಗಿಲ್ಲ. ಯಾರೇ ಅಧ್ಯಕ್ಷರಾಗಿ ಬಂದರೂ ಉತ್ಸವ ಮೂರ್ತಿಗಳಂತೆ ಕುರ್ಚಿಯಲ್ಲಿ ಕುಳಿತು ಹೋಗಿರುವುದು ಬಿಟ್ಟರೆ ಬೇರೇ ಏನನ್ನೂ ಮಾಡಲಾಗಿಲ್ಲ.
ಹೈಕಮಾಂಡ್ ಗೆ ತಪ್ಪು ಸಂದೇಶ ರವಾನೆಯಾಗಬಾರದು, ಸಚಿವ ಸ್ಥಾನದ ರೇಸ್ ನಲ್ಲಿ ತಾನೂ ಇರಬೇಕೆಂಬ ಉದ್ದೇಶದೊಂದಿಗೆ ತೇಲ್ಕೂರ ಅಧಿಕಾರ ಸ್ವೀಕರಿಸಿದ್ದಾರೆ. ಬಿಜೆಪಿ ಹಿರಿಯ ನಾಯಕರು, ಕಾರ್ಯಕರ್ತರು, ಅಧಿಕಾರಿಗಳು ನೂತನ ಅಧ್ಯಕ್ಷರಿಗೆ ಶುಭ ಕೋರಿದ್ದಾರೆ.
Published by:G Hareeshkumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ