ಬೆಳಗಾವಿ(ನವೆಂಬರ್. 22): ಕನ್ನಡ ಪರ ಸಂಘಟನೆಗಳ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ. ಬೆಳಗಾವಿಯಲ್ಲಿ ಇಂದು ಕರವೇ ಕಾರ್ಯಕರ್ತರು ಅಶೋಕ ವೃತ್ತದಲ್ಲಿ ಪ್ರತಿಕೃತಿ ದಹಿಸಿದರು. ಮತ್ತೊಂದು ಕಡೆ ಚೆನ್ನಮ್ಮ ವೃತ್ತದಲ್ಲಿ ಅಣಕು ಶವಯಾತ್ರೆ ನಡೆಸಲು ಯತ್ನಿಸಿದರು. ಬೆಳಗಾವಿ ಸರ್ಕಿಟ್ ಹೌಸ್ ನಿಂದ ಅಶೋಕ ವೃತ್ತದ ವರೆಗೆ ಕರವೇ ಕಾರ್ಯಕರ್ತರು ಪ್ರತಿಭಟನೆ ಮೆರವಣಿಗೆ ನಡೆಸಿದರು. ಈ ವೇಳೆಯಲ್ಲಿ ಯತ್ನಾಳ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ್ದರು. ಯತ್ನಾಳ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕರವೇ ಕಾರ್ಯಕರ್ತರು ಆಗ್ರಹಿಸಿದರು. ನಂತರ ಅಶೋಕ ವೃತ್ತದಲ್ಲಿ ಯತ್ನಾಳ್ ಅವರ ಪ್ರತಿಕೃತಿಗೆ ಬೆಂಕಿ ಹಚ್ಚಿದರು. ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ, ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ನೇತೃತ್ವದಲ್ಲಿ ಧರಣಿ ನಡೆಯಿತು.
ಚೆನ್ನಮ್ಮ ವೃತ್ತದಲ್ಲಿ ಕರವೇ ಶಿವರಾಮೇಗೌಡ ಬಣದ ಕಾರ್ಯಕರ್ತರು ಮತ್ತು ಪೊಲೀಸರ ಮಧ್ಯೆ ಜಟಾಪಟಿಯಿತು. ಸೀರೆ ತೊಡಿಸಿದ್ದ ಯತ್ನಾಳ್ ಅವರ ಪ್ರತಿಕೃತಿ ದಹನಕ್ಕೆ ಅವಕಾಶ ನೀಡಲಿಲ್ಲ. ಈ ಹಿನ್ನೆಲೆ ಹೋರಾಟಗಾರರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. ನಂತರ ಬಸನಗೌಡ ಪಾಟೀಲ್ ಯತ್ನಾಳ್ ಅವರ ಪ್ರತಿಕೃತಿಯನ್ನು ಪೊಲೀಸರು ಕಸಿದುಕೊಂಡರು. ಕರವೇ ಕಾರ್ಯಕರ್ತರು ಯತ್ನಾಳ ಭಾವಚಿತ್ರ ಹಿಡಿದು ಪ್ರತಿಭಟನೆ ಮಾಡಿದರು.
ಭಾಷೆ , ಸಮೂದಾಯದ ನಡುವಿನ ವತ್ಯಾಸ ತಿಳಿಕೊಳ್ಳಬೇಕು : ಶಾಸಕ ಬೆನಕೆ
ಮರಾಠಾ ಸಮುದಾಯ ಅಭಿವೃದ್ಧಿ ನಿಗಮ ವಿರೋಧಿಸಿ ಬಂದ್ಗೆ ಕರೆ ವಿಚಾರ ಸಂಬಂಧ ಮಾತನಾಡಿದ ಶಾಸಕ ಅನಿಲ್ ಬೆನಕೆ, ಬಂದ್ಗೆ ಕರೆ ನೀಡಿದ ಸಂಘಟನೆಗಳಲ್ಲೇ ಮರಾಠಾ ಸಮುದಾಯದವರಿದ್ದಾರೆ. ಮರಾಠಾ, ಮರಾಠಿ ಮಧ್ಯದ ವ್ಯತ್ಯಾಸ ಸಂಘಟನೆಗಳು ತಿಳಿದುಕೊಳ್ಳಬೇಕು. ಕನ್ನಡ ಮಾತನಾಡುವ ಹಲವರು ಮರಾಠಾ ಸಮುದಾಯದಲ್ಲಿ ಇದ್ದಾರೆ. ಮರಾಠಾ ಸಮುದಾಯದ ಅಭಿವೃದ್ಧಿಗಾಗಿ ನಿಗಮವನ್ನು ಸ್ಥಾಪಿಸಿದ್ದಾರೆ ಎಂದರು.
ಇದನ್ನೂ ಓದಿ : ಡಿಸಿಸಿ ಬ್ಯಾಂಕ್ ಗೆ ಐವರು ಸದಸ್ಯರ ಅವಿರೋಧ ಆಯ್ಕೆ : ಬಿಜೆಪಿ, ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ
ಕೆಲ ಕನ್ನಡಪರ ಸಂಘಟನೆಗಳಲ್ಲೂ ಮರಾಠಾ ಸಮುದಾಯ ಕಾರ್ಯಕರ್ತರಿದ್ದಾರೆ. ಮರಾಠಾ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದಕ್ಕೆ ಸಿಎಂ ಭೇಟಿ ಮಾಡಿ ಅಭಿನಂದನೆ ಸಲ್ಲಿಕೆ ಮಾಡಿದ್ದೇನೆ. ಮರಾಠಾ ಸಮುದಾಯದಲ್ಲಿರುವ ಕನ್ನಡಿಗರಿಗೆ ಅನ್ಯಾಯ ಆಗಬಾರದು. ಮರಾಠಾ ಸಮುದಾಯದೊಳಗೆ ಎಂಇಎಸ್ ಇದೆ, ಅದು ಒಂದು ಸಂಘಟನೆ ಅಷ್ಟೆ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ