ಕೋಲಾರ: ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುವ ಅಬಕಾರಿ ಸಚಿವ ನಾಗೇಶ್ ಅವರು ಉಸ್ತುವಾರಿ ಸಚಿವರೆನ್ನುವ ಜವಾಬ್ದಾರಿಯನ್ನು ಮರೆತು ಇತ್ತೀಚೆಗೆ ನಡೆದುಕೊಳ್ಳುತ್ತಿರುವ ವಿಧಾನವೇ ಪ್ರಶ್ನಾರ್ಹವಾಗಿದೆ. ನಾಗೇಶ್ ಅವರು ಮೂರು ವಾರಗಳ ಹಿಂದೆ ಸಂಡೇ ಲಾಕ್ಡೌನ್ ದಿನವೇ ಸಾಮಾಜಿಕ ಅಂತರದ ಗೊಡವೆಯೇ ಇಲ್ಲದಂತೆ ಭರ್ಜರಿ ಬಾಡೂಟ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೀಗ ತಮ್ಮ ಗನ್ಮೆನ್ ಹಾಗು ಕಾರು ಚಾಲಕರಿಗೆ ಕೊರೋನಾ ಸೋಂಕು ದೃಢವಾಗಿದ್ದರೂ ನಾಗೇಶ್ ಅವರು ಹೋಮ್ ಕ್ವಾರೆಂಟೈನ್ನಲ್ಲಿ ಇರದೆ ಗಡತ್ತಾಗಿ ಒಡಾಡಿಕೊಂಡಿದ್ದಾರೆ.
ಬುಧವಾರ ಕೋಲಾರ ಡಿಸಿ ಕಚೇರಿಯಲ್ಲಿ ಸಚಿವ ನಾಗೇಶ್ ಅವರ ನೇತೃತ್ವದಲ್ಲಿ ಕೋವಿಡ್ ನಿಯಂತ್ರಣ ಸಭೆಯನ್ನ ಆಯೋಜಿಸಲಾಗಿತ್ತು. ಮಾಜಿ ಸ್ಪೀಕರ್ ರಮೇಶ್ ಕುಮಾರ್, ಎಮ್ಮೆಲ್ಸಿ ನಾಸಿರ್ ಅಹಮದ್, ಜಿಲ್ಲಾಧಿಕಾರಿ ಸಿ ಸತ್ಯಭಾಮ, ಕೋಲಾರ ಕೆಜಿಎಫ್ನ ಎಸ್ಪಿಗಳು ಹಾಗು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದ ಈ ಸಭೆಯಲ್ಲಿ ಸಾಮಾಜಿಕ ಅಂತರವೇ ಕಣ್ಮರೆಯಾಗಿತ್ತು. ಪರಸ್ಪರ ಯಾರೊಬ್ಬರು ಅಂತರ ಕಾಯ್ದುಕೊಂಡು ಕುಳಿತದ್ದು ಕಂಡುಬಂದಿಲ್ಲ. ಇನ್ನು ಸಚಿವ ನಾಗೇಶ್ ಅವರ ತಮ್ಮ ಗನ್ಮ್ಯಾನ್ ಹಾಗು ಡ್ರೈವರ್ಗೆ ಕೊರೋನಾ ಪಾಸಿಟಿವ್ ಇದ್ದರು, ಹೋಮ್ ಕ್ವಾರೆಂಟೈನ್ ಇರದೆ ಹೊರಗೆ ಬಂದಿದ್ದು ಅಲ್ಲದೆ, ಸಭೆಯಲ್ಲೂ ಭಾಗಿಯಾಗುವ ಮೂಲಕ ನಿರ್ಲಕ್ಷ್ಯ ತೋರಿದ್ದಾರೆ ಎಂಬಂತಾಗಿದೆ.
ಇದನ್ನೂ ಓದಿ: ಸಿಎಂ ಯಡಿಯೂರಪ್ಪ, ಸಿದ್ದರಾಮಯ್ಯ ಆರೋಗ್ಯ ಸ್ಥಿರ; ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ
ಈ ಬಗ್ಗೆ ಕೋಲಾರ ಜಿಲ್ಲಾ ವೈದ್ಯಾಧಿಕಾರಿ ಡಾ ವಿಜಯ್ ಕುಮಾರ್ ಅವರನ್ನು ಪ್ರಶ್ನಿಸಿದಾಗ ಉತ್ತರಿಸಿದ ಅವರು, ಸಚಿವರ ಗನ್ ಮೆನ್ ಹಾಗು ಚಾಲಕರಿಗೆ ಪಾಸಿಟಿವ್ ಬಂದಿರುವುದು ನಿಜ. ಸಭೆಯ ನಂತರ ಸಚಿವರಿಗೆ ಹೋಮ್ ಕ್ವಾರೆಂಟೈನ್ ಇರಲು ತಿಳಿಸಿರುವುದಾಗಿ ಹೇಳಿದ್ದಾರೆ. ಇನ್ನು ಗನ್ಮೆನ್ ಹಾಗು ಚಾಲಕರಿಗೆ ಪಾಸಿಟಿವ್ ದೃಢವಾಗಿದ್ದರೂ ಸಚಿವರು ಸಭೆಗೆ ಬರುವ ಧೈರ್ಯ ಹೇಗೆ ಮಾಡಿದರೆಂದು ಇನ್ನೂ ತಿಳಿಯುತ್ತಿಲ್ಲ. ಆದರೆ ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರು ಸೆಲ್ಪ್ ಕ್ವಾರೆಂಟೈನ್ ಇರುವುದು ಬಿಟ್ಟು ಹೀಗೆ ನಿರ್ಲಕ್ಷ್ಯ ತೋರಿದರೆ ಯಾರು ಹೊಣೆ ಎಂಬುದನ್ನ ಕೋಲಾರ ಜಿಲ್ಲಾಡಳಿತ ಉತ್ತರಿಸಬೇಕಿದೆ.
ಧುಮ್ಮಿಕ್ಕುತ್ತಿರುವ ಜೋಗ ಜಲಪಾತದ ಸುಂದರ ದೃಶ್ಯಗಳನ್ನ ವೀಕ್ಷಿಸಿ....
ಪ್ರಧಾನಿ ಮೋದಿ ವಿರುದ್ದ ಕಿಡಿಕಾರಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್:
ಕೋವಿಡ್ ನಿಯಂತ್ರಣ ಸಭೆಯಲ್ಲಿ ಭಾಗಿಯಾಗಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಸಭೆ ನಂತರ ಮಾತನಾಡಿ ಮೋದಿಯವರ ವಿರುದ್ದ ಬೇಸರದ ಮಾತುಗಳನ್ನ ಹೊರ ಹಾಕಿದ್ದಾರೆ. ಬುಧವಾರ ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಭೂಮಿಪೂಜೆಯ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗಿಯಾಗಿ ಅವಿಸ್ಮರಣೀಯ ಕಾರ್ಯಕ್ರಮದಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದರು. ದೇಗುಲ ಭೂಮಿ ಪೂಜೆ ಕುರಿತು ಮಾತನಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಶ್ರೀರಾಮನೇ ನಮ್ಮನ್ನೆಲ್ಲಾ ಕಾಪಾಡಲಿ. ಈ ದೇಶವನ್ನ ಹಾಗೂ ಆ ಪ್ರಧಾನ ಮಂತ್ರಿಯನ್ನ ರಾಮನೇ ಕಾಪಾಡಲಿ ಎಂದರು.
ಇದನ್ನೂ ಓದಿ: ಗುತ್ತಿಗೆದಾರನ ಬಳಿ ಲಂಚಕ್ಕೆ ಬೇಡಿಕೆಯಿಟ್ಟ ಪುರಸಭೆ ಮುಖ್ಯಾಧಿಕಾರಿ - ಎಸಿಬಿ ಬಲೆಗೆ ಸಿಕ್ಕಿಬಿದ್ದ ಲಂಚಕೋರ
ಮೋದಿ ಅವರು ಕೊರೋನಾ ಲಾಕ್ಡೌನ್ ಘೋಷಿಸಿದಾಗ ದೇಶದಲ್ಲಿ ಪ್ರಕರಣಗಳು 514 ಇತ್ತು. 21 ದಿನದಲ್ಲಿ ವೈರಸ್ ನಿರ್ನಾಮ ಆಗುತ್ತೆ ಎಂದರು. ಈಗ 14 ಲಕ್ಷಕ್ಕೆ ಬಂದಿದೆ. ಇಂತಹ ಪರಿಸ್ತಿತಿಯಲ್ಲಿ ಅವರು ಪೂಜೆ ಮಾಡುತ್ತಿದ್ದಾರೆ. ಹಾಗಾಗಿ ಶ್ರೀ ರಾಮ ಅವರನ್ನ, ನಮ್ಮನ್ನ, ಸಾಯ್ತಾ ಇರೋರನ್ನ ಮತ್ತು ಎಲ್ಲರನ್ನ ಕಾಪಾಡಲಿ ಎಂದು ಸಚಿವ ನಾಗೇಶ್ ಅವರ ಪಕ್ಕದಲ್ಲೆ ಕುಳಿತು ರಮೇಶ್ ಕುಮಾರ್ ಕಿಡಿಕಾರಿದರು.
ವರದಿ: ರಘುರಾಜ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ