ಕಲಬುರ್ಗಿ(ಸೆಪ್ಟೆಂಬರ್. 01): ಲಂಪಿಸ್ಕಿನ್ ರೋಗ ದಿನೇ ದಿನೇ ವ್ಯಾಪಕಗೊಳ್ಳಲಾರಂಭಿಸಿದೆ. ರಾಜ್ಯದಲ್ಲಿ ಜಾನುವಾರುಗಳಲ್ಲಿ ಕಾಣಿಸಿಕೊಂಡ ಹೊಸ ವೈರಾಣು ರೋಗ ಲಂಪಿಸ್ಕಿನ್ ಹತೋಟಿಗೆ ಪಶು ಸಂಗೋಪನಾ, ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಚಿವರು, ಕಲಬುರ್ಗಿ ಸೇರಿದಂತೆ ಕಲ್ಯಾಣ ಕರ್ನಾಟಕದ ಹಲವೆಡೆ ಲಂಪಿಸ್ಕಿನ್ ಕಾಣಿಸಿಕೊಂಡಿರುವ ಅಂಶ ಗೊತ್ತಿಗಿದೆ. ಪಶು ವೈದ್ಯಾಧಿಕಾರಿಗಳು ಲಂಪಿಸ್ಕಿನ್ ವೈರಲ್ ರೋಗ ನಿಯಂತ್ರಣಕ್ಕೆ ಮುಂದಾಗಬೇಕು. ಇಲ್ಲದೇ ಇದ್ದಲ್ಲಿ ಪರಿಣಾಮ ಎದುರಿಸಲು ಸಿದ್ದರಾಗಿ ಎಂದು ಪ್ರಭು ಚವ್ಹಾಣ ಎಚ್ಚರಿಕೆ ನೀಡಿದ್ದಾರೆ.
ಜಾನುವಾರುಗಳಿಂದ ಜಾನುವಾರುಗಳಿಗೆ ಹರಡುತ್ತಿರುವ ಈ ರೋಗ, ಆಂಧ್ರ ಪ್ರದೇಶ ರಾಜ್ಯದಲ್ಲಿ ಮೊದಲು ಕಾಣಿಸಿಕೊಂಡಿತ್ತು. ರಾಜ್ಯಕ್ಕೂ ಪ್ರವೇಶಿಸಿದ್ದು, ಕಲ್ಯಾಣ ಕರ್ನಾಟಕದಲ್ಲಿ ಹಲವಾರು ಹಳ್ಳಿಗಳಲ್ಲಿ ಹರಡಲಾರಂಭಿಸಿದೆ. ಚಿತ್ತಾಪುರ ತಾಲೂಕಿನ ನಾಲವಾರ, ಲಾಡ್ಲಾಪುರ, ಯಾಗಾಪುರ ಮತ್ತಿತರ ಗ್ರಾಮಗಳಲ್ಲಿ 500ಕ್ಕೂ ಹೆಚ್ಚು ಜಾನುವಾರುಗಳಲ್ಲಿ ಲಂಪಿಸ್ಕಿನ್ ಚರ್ಮ ರೋಗ ಇರುವುದು ದೃಢಪಟ್ಟಿದೆ. ಚರ್ಮದ ಮೇಲೆ ಗಂಟು ಕಟ್ಟಿ, ನಂತರ ಕೀವಾಗಿ ಹೊರ ಬಂದು ತೊಂದರೆ ಜಾನುವಾರುಗಳಿಗೆ ತೊಂದರೆ ಕೊಡಲಾರಂಭಿಸಿದೆ.
ವೈರಲ್ ಡಿಸೀಜ್ ಕಲಬುರ್ಗಿ ಜಿಲ್ಲೆಯಲ್ಲಿ ಹಳ್ಳಿಯಿಂದ ಹಳ್ಳಿಗೆ ವ್ಯಾಪಕವಾಗಿ ಹರಡಲಾರಂಭಿಸಿದೆ. ಹೊಸ ರೋಗದಿಂದ ಜಾನುವಾರುಗಲು ತತ್ತರಿಸಿದ್ದು, ರೈತ ಸಮುದಾಯವನ್ನು ಕಂಗಾಲಾಗುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಸಚಿವರು ಮಾಧ್ಯಮ ಪ್ರಕಟಣೆ ಹೊರಡಿಸಿ, ರೋಗ ಹತೋಟಿಗೆ ಪಶು ವೈದ್ಯಾಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.
ಒಂದೆಡೆ ಕೋರೊನಾ ಸಂಕಷ್ಟ, ಮತ್ತೊಂದೆಡೆ ನೆರೆಯಿಂದ ಆದಾಯವಿಲ್ಲದೆ ರೈತರು ಕಂಗೆಟ್ಟಿದ್ದಾರೆ. ಈ ಸಮಯದಲ್ಲಿ ಪಶುಸಂಗೋಪನೆ ಒಂದೇ ರೈತರಿಗೆ ಜೀವನಾಧಾರವಾಗಿದೆ. ಈಗ ಕಲ್ಯಾಣ ಕರ್ನಾಟಕ ಭಾಗದ ಕೆಲ ಜಿಲ್ಲೆಗಳಲ್ಲಿ ಲಂಪಿಸ್ಕಿನ್ ಕಾಣಿಸಿಕೊಂಡಿದೆ. ಜಾನುವಾರುಗಳಿಗೆ ಈ ವಿಚಿತ್ರ ಕಾಯಿಲೆ ಕಂಡು ಬಂದಿದ್ದು ದನ-ಕರುಗಳ ಮೈಮೇಲೆ ಗುಳ್ಳೆ ಬರುವುದು, ಜ್ವರ ಕಾಣಿಸಿಕೊಳ್ಳುವುದು, ಆಹಾರ ಸೇವನೆಯಲ್ಲಿ ಸಮಸ್ಯೆ ಕಂಡು ಬರುತ್ತಿರುವುದರಿಂದ ಪಶುಪಾಲಕರು ಆಂತಂಕಕ್ಕಿಡಾಗಿರುವುದು ನನ್ನ ಗಮನಕ್ಕೂ ಬಂದಿದೆ.
ಇದನ್ನೂ ಓದಿ : ಸೆಪ್ಟೆಂಬರ್ ಅಂತ್ಯದ ವರೆಗೆ ಬಾಗಿಲು ತೆಗೆಯಲ್ಲ ಸವದತ್ತಿ ಯಲ್ಲಮ್ಮ, ಚಿಂಚಲಿ ಮಾಯಕ್ಕ ದೇವಸ್ಥಾನ
ಕಲ್ಯಾಣ ಕರ್ನಾಟಕ ಭಾಗದ ಪಶುಸಂಗೋಪನೆ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಮತ್ತು ಪಶುವೈದ್ಯಾಧಿಕಾರಿಗಳಿಗೆ ರೋಗ ಹೆಚ್ಚು ಕಂಡುಬರುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಅಲ್ಲದೇ ಹೆಚ್ಚು ಪ್ರಕರಣಗಳಿರುವ ಗ್ರಾಮಗಳಲ್ಲಿ ಪಶು ಆರೋಗ್ಯ ಶಿಬಿರ ನಡೆಸಿ ರೋಗವನ್ನು ಹತೋಟಿಗೆ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾನುವಾರುಗಳ ಆರೋಗ್ಯದಲ್ಲಿ ಏನಾದರೂ ಏರು-ಪೇರು ಕಂಡುಬದಲ್ಲಿ ತಕ್ಷಣಕ್ಕೆ ಹತ್ತಿರದ ಪಶು ಆರೋಗ್ಯ ಕೇಂದ್ರದಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಿ ಎಂದು ಪಶುಪಾಲಕರಿಗೆ ಸಚಿವರು ಸಲಹೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ