ಕೊಡಗು : ಇವನಿಗೆ ಮದುವೆ ಆಗೋದೆ ಒಂದು ಕಯಾಲಿ ಎನಿಸುತ್ತೆ. ಅದಕ್ಕೆ ಮದುವೆ ಆಗೋದು, ಒಂದೆರಡು ವರ್ಷ ಅವರೊಂದಿಗೆ ಸಂಸಾರ ಮಾಡೋದು, ಬಳಿಕ ಅವರನ್ನು ಬಿಟ್ಟು ಬೇರೆ ಮದುವೆ ಆಗೋದು. ಹೌದು ಇಂತಹ ಕೆಲಸ ಮಾಡುತ್ತಿರುವ ಭೂಪ ಇರೋದು ಬೇರೆಲ್ಲೂ ಅಲ್ಲ, ಕೊಡಗಿನಲ್ಲಿ. ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮ ಪಂಚಾಯತಿಯ ದಬ್ಬಡ್ಕದ ಪ್ರದೀಪ್ ಎಂಬಾತನೇ ಈ ಅಸಾಮಿ. ಮಡಿಕೇರಿ ತಾಲ್ಲೂಕಿನ ಪೆರಾಜೆ ಗ್ರಾಮದ ಚಂದ್ರಶೇಖರ್ ಅವರ ಮಗಳು ಪವಿತ್ರ ಅವರನ್ನು 2017 ರ ಆಗಸ್ಟ್ ನಲ್ಲಿ ಮದುವೆ ಆಗಿದ್ದಾನೆ. ಒಂದು ಹೆಣ್ಣು ಮಗುವಾಗುತ್ತಲೇ ಇನ್ನಿಲ್ಲದ ಚಿತ್ರಹಿಂಸೆ ಕೊಡಲು ಆರಂಭಿಸಿದ್ದ ಪ್ರದೀಪ್, ನೀನು ತೋಟದಲ್ಲಿ ಕೂಲಿ ಕೆಲಸ ಮಾಡು ಇಲ್ಲವೇ ನಿನ್ನನ್ನು ಸಾಕೋದಕ್ಕೆ ನನ್ನಿಂದ ಆಗಲ್ಲ. ಇಲ್ಲದಿದ್ದರೆ ನೀನು ಮನೆ ಖಾಲಿ ಮಾಡು. ಇಲ್ಲ ನಾನೇ ನಿನ್ನನ್ನು ಮತ್ತು ಮಗುವನ್ನು ಕತ್ತರಿಸಿ ಹೊಳೆಗೆ ಹಾಕಿಬಿಡ್ತೀನಿ ಅಂತ ಕೊಲೆ ಬೆದರಿಕೆ ಹಾಕ್ತಿದ್ನಂತೆ.
ಮದುವೆ ಆಗೋದೇ ಖಯಾಲಿಯಂತೆ..!
ಇಂತಹದ್ದೇ ಚಿತ್ರಹಿಂಸೆಯಿಂದ ರೋಸಿಹೋಗಿದ್ದ ಪವಿತ್ರನನ್ನು ಅವರ ತಂದೆ ತಾಯಿ ತವರು ಮನೆಗೆ ಕಳೆದ ಐದಾರು ತಿಂಗಳ ತಿಂಗಳ ಹಿಂದೆ ಕರೆದು ತಂದಿದ್ದಾರೆ.
ಪವಿತ್ರ ತನ್ನ ಚಿಕ್ಕ ಮಗುವಿನೊಂದಿಗೆ ತವರು ಮನೆ ಸೇರುತ್ತಲೇ ಅತ್ತ ಪ್ರದೀಪ್ ಮತ್ತೊಂದು ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾನಂತೆ. ಅಷ್ಟಕ್ಕೂ ಈತ ಆಗಿರೋದು ಇದೊಂದೆ ಮದುವೆ ಅಲ್ವಂತೆ. ಪವಿತ್ರನನ್ನು ಮದುವೆ ಆಗುವುದಕ್ಕೂ ಮೊದಲೇ ಒಂದು ಮದುವೆಯಾಗಿ, ಆಕೆಗೂ ಡಿವೋರ್ಸ್ ಕೊಟ್ಟಿದ್ನಂತೆ. ಬಳಿಕ ಪವಿತ್ರನನ್ನು ಮದುವೆಯಾಗಿ ಬೆಂಗಳೂರಿನಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ ಕೋಲಾರದ ಹುಡುಗಿಯನ್ನು ಮದುವೆಯಾಗಿದ್ದಾನೆ ಎನ್ನೋದು ಪವಿತ್ರ ಅವರ ಆರೋಪ. ಪ್ರದೀಪನಿಂದ ನೊಂದಿರುವ ಪವಿತ್ರ ನನಗೆ ಆತನಿಂದ ಮುಕ್ತಿಬೇಕು. ಡಿವೋರ್ಸ್ ಬೇಕು ಅಂತ ಕೋರ್ಟ್ ಮೆಟ್ಟಿಲೇರಿದ್ದಾರೆ.
4ನೇ ಮದುವೆಗೆ ಸಿದ್ಧತೆ..!
ಡಿವೋರ್ಸ್ ಆಗುವ ಮುನ್ನವೇ ಇದೀಗ ಕಡಬದಲ್ಲಿ ಮತ್ತೊಂದು ಮದುವೆ ಆಗುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾನಂತೆ. ಇದರ ನಡುವೆ ಅಂಗನವಾಡಿ ಶಿಕ್ಷಕಿಯೊಬ್ಬರೊಂದಿಗೂ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ ಅನ್ನೋದು ಪವಿತ್ರಾ ಅವರ ಆರೋಪ. ಅದಕ್ಕೆ ಪೂರಕವಾಗಿ ಪ್ರದೀಪ್ ಅಂಗನವಾಡಿ ಶಿಕ್ಷಕಿಯೊಂದಿಗೆ ಸೆಲ್ಫಿ ತೆಗೆದುಕೊಂಡಿರುವ ಫೋಟೋಗಳನ್ನು ಪವಿತ್ರ ಅವರು ಮಾಧ್ಯಮಗಳಿಗೆ ನೀಡಿದ್ದಾರೆ.
ಹೆತ್ತವರಿಗೆ ಎಂದು ನಾಟಕವಾಡಿ ಮೋಸ..!
ಮೊದಲ ಹೆಂಡತಿ ಡೈವೋರ್ಸ್ ಆಗಿದೆ. ನನಗೆ ಅಪ್ಪ, ಅಮ್ಮ ಇಲ್ಲ ಅಂತ ನಾಟಕವಾಡಿ ಏನು ಅರಿಯದ ನನ್ನ ಮಗಳನ್ನು ಒತ್ತಾಯ ಪೂರ್ವಕವಾಗಿ ಮದುವೆಯಾದ. ಅವಳ ಬಾಳನ್ನು ಹಾಳು ಮಾಡಿದ. ಕೇಳಿದರೆ ಪವಿತ್ರಗೆ ಇರುವ ಮಗುವಿನ ಡಿಎನ್ಎ ಟೆಸ್ಟ್ ಮಾಡಬೇಕು. ನಿನ್ನ ಮತ್ತು ಮಗುವಿನ ಮೇಲೆ ನಂಬಿಕೆ ಇಲ್ಲ ಎನ್ನುತ್ತಿದ್ದಾನಂತೆ.
ಇದನ್ನೂ ಓದಿ: Wife Murder Mystery: ಹೆಂಡತಿ ಮೇಲೆ ಅನುಮಾನ..ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ಐಡಿಯಾ.. ಕೊನೆಗೆ ಗಂಡ ಮಾಡಿದ್ದು ಭೀಕರ!
ಇದೀಗ ಕಡಬದಲ್ಲಿ ಮತ್ತೊಂದು ಹುಡುಗಿಯನ್ನು ಮದುವೆ ಆಗುವುದಕ್ಕೆ ಪ್ರಯತ್ನಿಸುತ್ತಿದ್ದಾನೆ. ದಯವಿಟ್ಟು ಯಾರು ಮೋಸ ಹೋಗ್ಬೇಡಿ ಅಂತ ಪ್ರದೀಪನಿಂದ ನೊಂದಿರುವ ಪವಿತ್ರ ಮತ್ತು ಆಕೆ ತಾಯಿ ವಾರಿಜಾ ಬೇಡಿಕೊಂಡಿದ್ದಾರೆ. ಒಟ್ಟಿನಲ್ಲಿ ಇದುವರೆಗೆ ಅಧಿಕೃತವಾಗಿಯೇ 2 ಮದುವೆಯಾಗಿರುವ ಪ್ರದೀಪನಿಗೆ ಅದ್ಯಾಕೆ ಇಂತಹ ಕೆಟ್ಟತನ ಬಂದಿದೆಯೋ ಗೊತ್ತಿಲ್ಲ. ಆದರೆ ನನಗೆ ಮತ್ತು ನನ್ನ ಮಗುವಿಗೆ ಜೀವನಾಂಶ ನೀಡಬೇಕು ಎನ್ನೋದು ಪವಿತ್ರಾ ಅವರ ಒತ್ತಾಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ