news18 Updated:June 2, 2020, 10:17 AM IST
ಕಾರವಾರದಲ್ಲಿ ಕಿಟ್ ಪಡೆಯಲು ಮುಗಿಬಿದ್ದಿರುವ ಜನರು
- News18
- Last Updated:
June 2, 2020, 10:17 AM IST
ಕಾರವಾರ: ಸರಕಾರದಿಂದ ಅಸಂಘಟಿತ ಕಾರ್ಮಿಕ ವರ್ಗಕ್ಕೆ ಕಿಟ್ ನೀಡುವಲ್ಲಿ ಗೊಂದಲ ಉಂಟಾಗಿ ಊರು ಕೇರಿ ಜನ ಎಲ್ಲ ಕಿಟ್ ತೆಗೆದುಕೊಳ್ಳಲು ಆಗಮಿಸಿ ಸಾಮಾಜಿಕ ಅಂತರ ಮಾಯವಾದ ಘಟನೆ ಕಾರವಾರದಲ್ಲಿ ನಡೆದಿದೆ. ಫಲಾನುಭವಿಗಳಲ್ಲದವರೂ ಕಿಟ್ ಪಡೆಯಲು ಮುಂದಾಗಿ ಅಧಿಕಾರಿಗಳಿಗೆ ಇರಿಸುಮುರುಸು ಉಂಟಾಯಿತು. ಮುಗಿಬಿದ್ದ ಜನರನ್ನು ಚದುರಿಸಲು ಪೊಲೀಸರು ಹರಸಾಹಸ ನಡೆಸಬೇಕಾಯಿತು.
ಸರಕಾರದಿಂದ ಕಾರವಾರದ ಅಸಂಘಟಿತ ಕಾರ್ಮಿಕರ ವರ್ಗಕ್ಕೆ ಕಿಟ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಿಟ್ ವಿತರಣೆ ಬಗ್ಗೆ ಅಸಂಘಟಿತ ಕಾರ್ಮಿಕರ ಮುಖಂಡರಿಗೆ ಮಾಹಿತಿ ನೀಡಲಾಗಿತ್ತು. ಮಾಹಿತಿಯಂತೆ ಅಸಂಘಟಿತ ಕಾರ್ಮಿಕರು ಮತ್ತವರ ಮುಖಂಡರು ಕಿಟ್ ಪಡೆಯಲು ಇವತ್ತು ಮುಂಜಾನೆ ನಿರ್ಧರಿಸಿದ್ದ ಜಾಗಕ್ಕೆ ಆಗಮಿಸಿದ್ದರು. ಕಿಟ್ ವಿತರಿಸುತ್ತಿದ್ದವರು ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ್ ಅವರ ಆಪ್ತರು ಆಗಿದ್ದರು. ಕಿಟ್ ಪಡೆಯಲು ಬಂದಿದ್ದ ಕಾರ್ಮಿಕರು ಹಾಗೂ ಸ್ಥಳೀಯ ಶಾಸಕಿಯ ಬೆಂಬಲಿಗರನ್ನು ಕಂಡ ಅಕ್ಕಪಕ್ಕದ ಬಡಾವಣೆಗಳ ನಿವಾಸಿಗಳೂ ಕೂಡ ತಮಗೂ ಕಿಟ್ ಕೊಡುತ್ತಾರೆಂದು ತಿಳಿದು ಮುಗಿಬಿದ್ದರು. ಈ ಗೊಂದಲದಲ್ಲಿ ಸಾಮಾಜಿಕ ಅಂತರ ಮಾಯವಾಗಿತ್ತು. ಎಷ್ಟೇ ತಿಳಿ ಹೇಳಿದರೂ ಕೂಡ ತಾವು ಕಿಟ್ ಪಡೆದುಕೊಂಡೇ ಹೋಗುತ್ತೇವೆಂದು ಎಂದು ಹಟ ಹಿಡಿದು ಸರದಿಸಾಲಿನಲ್ಲಿ ನಿಂತರು. ಈ ಸಂದರ್ಭದಲ್ಲಿ ಕರ್ತವ್ಯದಲ್ಲಿ ಇದ್ದ ಪೋಲಿಸರು ಜನರನ್ನ ಚದುರಿಸಲು ಹರಸಾಹಸಪಟ್ಟರು. ಸರದಿ ಸಾಲಿನಲ್ಲಿ ನಿಂತು ತಮಗೂ ಕಿಟ್ ಕೊಡಿ ಎಂದು ನೂಕುನುಗ್ಗಲು ಮಾಡುತ್ತಿದ್ದವರಲ್ಲಿ ಮಹಿಳೆಯರೇ ಹೆಚ್ಚಾಗಿದ್ದರು.
ಇದನ್ನೂ ಓದಿ: ಮೇವಿಲ್ಲದೆ ನರಳುತ್ತಿದ್ದ ದೇವರ ಎತ್ತುಗಳಿಗೆ ಮೇವು ಪೂರೈಸಿದ ಸಚಿವ ಶ್ರೀರಾಮುಲು
ಈ ಗೊಂದಲದಲ್ಲಿ ಫಲಾನುಭವಿಗಳಲ್ಲದ ಕೆಲ ಸ್ಥಳೀಯರು ಹಾಗೂ ಹೀಗೂ ಮಾಡಿ ಕಿಟ್ ದಕ್ಕಿಸಿಕೊಂಡರು. ಇದನ್ನ ಕಂಡ ಇತರ ಸ್ಥಳೀಯರೂ ಕೂಡ ಎಲ್ಲರಿಗೂ ಕಿಟ್ ಹಂಚಿ ಎಂದು ಹಠಕ್ಕೆ ಬಿದ್ದರು. ಈ ಕಿರಿಕಿರಿ ತಪ್ಪಿಸಲು ಆಯೋಜಕರು ಕಿಟ್ ವಿತರಣೆ ಕಾರ್ಯಕ್ರಮವನ್ನೇ ರದ್ದು ಮಾಡಿ ಬಾಗಿಲು ಮುಚ್ಚಬೇಕಾಯಿತು.
ವರದಿ: ದರ್ಶನ್ ನಾಯ್ಕ್
First published:
June 2, 2020, 10:17 AM IST