ಕೋಲಾರ; ಲಾಕ್ಡೌನ್ ನಂತರ ಮದ್ಯದ ಮೇಲೆ ಶೇಕಡಾ 21ರಷ್ಟು ಹೆಚ್ಚುವರಿ ಅಬಕಾರಿ ಸುಂಕ ಹೆಚ್ಚಿಸಲಾಗಿತ್ತು. ಇದರಿಂದ ಸರ್ಕಾರಕ್ಕೆ ನಿತ್ಯ ಕೋಟ್ಯಾಂತರ ರುಪಾಯಿ ಆದಾಯ ಹರಿದು ಬರುತ್ತಿದೆ. ಆದರೆ ಸರ್ಕಾರಕ್ಕೆ ಆದಾಯ ಬರಲು ಕಾರಣರಾದ ಮದ್ಯಪ್ರಿಯರನ್ನು ಅಬಕಾರಿ ಸಚಿವ ಎಚ್ ನಾಗೇಶ್ ತವರು ಜಿಲ್ಲೆ ಕೋಲಾರದಲ್ಲಿ ವಂಚಿಸಲಾಗುತ್ತಿದೆ. ಹೌದು ಸರ್ಕಾರ ನಿಗದಿ ಮಾಡಿರುವ ಬೆಲೆಗಿಂತ ಹೆಚ್ಚುವರಿ ಹಣವನ್ನು ಪಡೆದು ಇಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ.
ಜಿಲ್ಲೆಯಲ್ಲಿ ಕೆಲ ಎಂಆರ್ಪಿ ಮಳಿಗೆ ಹಾಗೂ ಬಾರ್ ಆ್ಯಂಡ್ ರೆಸ್ಟೋರೆಂಟ್ಗಳಿಂದ ಲಿಕ್ಕರ್ ಹೆಸರಲ್ಲಿ ಹಗಲು ದರೋಡೆ ಎಗ್ಗಿಲ್ಲದೆ ನಡೆಯುತ್ತಿದೆ. ಜಿಲ್ಲೆಯ ಕೋಲಾರ, ಶ್ರೀನಿವಾಸಪುರ ತಾಲೂಕಿನ ಬಾರ್ ಗಳಲ್ಲಿ ನ್ಯೂಸ್ 18 ಕನ್ನಡ ರಿಯಾಲಿಟಿ ಚೆಕ್ ನಡೆಸಿದ್ದು, ಮದ್ಯಪ್ರಿಯರ ಸುಲಿಗೆ ಬಯಲಿಗೆ ಬಂದಿದೆ. ಕೋಲಾರ ನಗರ ಹೊರವಲಯದ ನಂದಿನಿ ಎಂಆರ್ಪಿ ಮಳಿಗೆಯಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ಹಣಕ್ಕೆ ಮದ್ಯ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ನ್ಯೂಸ್ 18 ಕನ್ನಡ ವರದಿ ಮಾಡಿತ್ತು. ಅದರ ಪರಿಣಾಮ ಅಬಕಾರಿ ಅಧಿಕಾರಿಗಳು ಮಳಿಗೆಗೆ 25 ಸಾವಿರ ರೂಪಾಯಿ ದಂಡ ಹಾಕಿದ್ದರು. ಆದರೂ ಬುದ್ದಿ ಕಲಿಯದ ಶಾಪ್ ಮಾಲೀಕರು, ಮತ್ತದೇ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುವ ಮೂಲಕ ಲೂಟಿ ಮುಂದುವರೆಸಿದ್ದಾರೆ.
81 ರೂಪಾಯಿ ದರ ಇರುವ 90 ಮಿ.ಲೀ. ಪಾಕೆಟ್ ಗೆ, ಎಂಆರ್ಪಿ ಶಾಪ್ನಲ್ಲಿ 90 ರುಪಾಯಿಗೆ ಮಾರಾಟ ಮಾಡಿದ್ದಾರೆ. ಇದ್ಯಾಕೆ ಇಷ್ಟು ಅಂದರೆ ಇನ್ನು ಹೊಸ ರೇಟ್ ಬಂದಿಲ್ಲ ಎಂದು ಹೇಳುತ್ತಾರೆ. ಇನ್ನು ಕೋಲಾರ ತಾಲೂಕಿನ ಮಾರ್ಜೇನಹಳ್ಳಿ ಗ್ರಾಮದ ಚೌಡೇಶ್ವರಿ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ, 81 ರೂಪಾಯಿಯ 90 ಮಿ.ಲೀ, ಪಾಕೆಟ್ಗೆ 100 ರೂಪಾಯಿ ತೆಗೆದುಕೊಳ್ಳುತ್ತಿದ್ದಾರೆ. ಯಾಕೆ ಇಷ್ಟು ಹಣ ಹೆಚ್ಚಾಗಿ ತೆಗೆದುಕೊಳ್ಳುತ್ತಿರಾ ಎಂದು ಪ್ರಶ್ನೆ ಮಾಡಿದರೆ, ನಮ್ಮ ಮಾಲೀಕರು ಹೇಳಿದ್ದಾರೆ. ಅವರ ಹೇಳಿದ ಬೆಲೆಗೆ ಮಾರಾಟ ಮಾಡುತ್ತಾ ಇದ್ದೇವೆ ಎಂದು ಹೇಳುತ್ತಾರೆ. ಇದರ ಜೊತೆಗೆ ಜಿಲ್ಲೆಯ ಯಾವುದೇ ಬಾರ್ಗಳಲ್ಲೂ ಗ್ರಾಹಕರಿಗೆ ಬಿಲ್ ಕೊಡುವುದೇ ಇಲ್ಲ. ಶ್ರೀನಿವಾಸಪುರ ತಾಲೂಕಿನ ಎರಡು ಬಾರ್ಗಳಲ್ಲಿಯೂ ಹೀಗೆ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದು, ಬಿಲ್ ಕೇಳಿದ್ದಕ್ಕೆ ಬುಕ್ ಆಡಿಟಿಂಗ್ಗೆ ಕೊಟ್ಟಿದ್ದೀವಿ. ಬಿಲ್ ಇಲ್ಲಾ ಅಂತಾರೆ.
ಶ್ರೀನಿವಾಸಪುರ ತಾಲೂಕಿನ ತಾಡಿಗೋಳ್ ಕ್ರಾಸ್ ನಲ್ಲಿರೊ ಗಂಗಾ ಬಾರ್ ಆ್ಯಂಡ್ ರೆಸ್ಟೋರೆಂಟ್ನಲ್ಲಿ 66 ರೂಪಾಯಿರುವ ಮದ್ಯದ ಪಾಕೆಟ್ ಗೆ 110 ರೂಪಾಯಿ ಪಡೆದ ಕ್ಯಾಷಿಯರ್, ಬಿಲ್ ಕೇಳಿದರೆ ಇಲ್ಲ ಆಡಿಟಿಂಗ್ ಗೆ ಹೋಗಿದೆ ಎಂದು ಹೇಳುತ್ತಾರೆ. ಇನ್ನು ರೋಣೂರು ಗ್ರಾಮದ ಬಾರ್ ನಲ್ಲೂ ಇದೇ ಕಥೆ, ದರ ಯಾಕೆ ಜಾಸ್ತಿ ಅಂದ್ರೆ ಎಲ್ಲೆಡೆ ಹೀಗೆ ಮಾರೋದು ಸಾರ್ ಏನು ಮಾಡೋದು ಅಂತಾರೆ ಕ್ಯಾಷಿಯರ್. ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದರೂ ಅದನ್ನು ತಡೆಗಟ್ಟುವಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ.
ಇದನ್ನು ಓದಿ: ಬೆಂಗಳೂರಿನಲ್ಲಿ ಕೊರೋನಾ ಕೇಸ್ ಹೆಚ್ಚಾಗಲು ಕಾರಣವೇನು ಗೊತ್ತೇ? - ಇಲ್ಲಿದೆ ಆತಂಕಕಾರಿ ಮಾಹಿತಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ