ಕೋಲಾರ(ಜೂ.20): ಕೊರೋನಾ ಲಾಕ್ಡೌನ್ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿರುವ ಮಾವು ಬೆಳೆಗಾರರಿಗೆ, ರೈಲ್ವೆ ಇಲಾಖೆ ಕಿಸಾನ್ ರೈಲು ಸೇವೆ ಆರಂಭಿಸುವ ಮೂಲಕ ರೈತರ ಸಂಕಷ್ಟಕ್ಕೆ ಇಲಾಖೆ ನೆರವು ನೀಡಿದೆ. ಲಾಕ್ಡೌನ್ ಹಿನ್ನಲೆ ಕೇಂದ್ರ ಸರ್ಕಾರದ ಆದೇಶದ ಮೇರೆಗೆ ರೈತರಿಗೆ ನೆರವಾಗಲು, ರಾಜ್ಯದಲ್ಲೇ ಮೊದಲ ಬಾರಿಗೆ ಕಿಸಾನ್ ರೈಲು ಸೇವೆಗೆ ಇದೀಗ ಚಾಲನೆ ಸಿಕ್ಕಿದೆ. ದೆಹಲಿಗೆ ಮಾವು ರಫ್ತು ಮಾಡಲು ರಾಜ್ಯದ ಮೊದಲ ಕಿಸಾನ್ ರೈಲು ವ್ಯವಸ್ಥೆಯನ್ನು ಭಾರತೀಯ ರೈಲ್ವೆ ಇಲಾಖೆ ಮಾಡಿದೆ. ಕೋಲಾರ ಜಿಲ್ಲೆಯ ಗಡಿಯಲ್ಲಿನ ಚಿಂತಾಮಣಿ ತಾಲೂಕಿನ ದೊಡ್ಡನತ್ತ ಗ್ರಾಮದ ರೈಲ್ವೆ ನಿಲ್ದಾಣದಿಂದ ದೆಹಲಿಯ ಆದರ್ಶ ನಗರಕ್ಕೆ ಕಿಸಾನ್ ರೈಲು ಹೊರಟಿದೆ. ಸಂಸದ ಎಸ್.ಮುನಿಸ್ವಾಮಿ, ಚಿಂತಾಮಣಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ, ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳಾದ ಅಶೋಕ್ಕುಮಾರ್, ಕೃಷ್ಣಾರೆಡ್ಡಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಕಿಸಾನ್ ರೈಲಿಗೆ ಚಾಲನೆ ನೀಡಿದರು.
ರೈತರಿಗೆ ಸಾಗಾಣಿಕೆ ವೆಚ್ಚ ಉಳಿತಾಯ
ದೊಡ್ಡನತ್ತ ರೈಲ್ವೆ ನಿಲ್ದಾಣದಿಂದ ಹೊರಟಿರುವ ಕಿಸಾನ್ ರೈಲಿನಲ್ಲಿ 22 ಬೋಗಿಗಳು ಇದ್ದು, 250 ಟನ್ ತೂಕದ ಮಾವನ್ನ ಕಾಟನ್ ಪೆಟ್ಟಿಗೆಗಳಲ್ಲಿ ಪ್ಯಾಕ್ ಮಾಡಿ ರೈಲಿಗೆ ತುಂಬಿಸಲಾಗಿದೆ. ದೆಹಲಿಗೆ ರಫ್ತು ಮಾಡಲು ರೈಲು ಸೇವೆ ಆರಂಭ ಹಿನ್ನಲೆ, ಮಾವು ಸಾಗಾಣಿಕೆ ಮಾಡೋರಿಗೆ ಹಣ ಉಳಿತಾಯ ಜೊತೆಗೆ ಸಮಯವೂ ಉಳಿತಾಯ ಆಗಲಿದೆ, ರಸ್ತೆ ಸಂಚಾರ ಮೂಲಕ ಪ್ರತಿ ಕೆಜಿ ಮಾವು ಸಾಗಿಸಲು 5 ರಿಂದ 6 ರೂಪಾಯಿ ವೆಚ್ಚ ತಗುಲುತ್ತಿತ್ತು. ಕಿಸಾನ್ ರೈಲಿನಲ್ಲಿ 2 ರಿಂದ 3 ರೂಪಾಯಿ ವೆಚ್ಚ ಆಗಲಿದೆ.
ಇದನ್ನೂ ಓದಿ:Karnataka Politics: ಬಿಜೆಪಿ ಬಳಿಕ ಕಾಂಗ್ರೆಸಿನಲ್ಲೂ ನಾಯಕತ್ವದ ವಿವಾದ ಶುರು; ದೆಹಲಿಗೆ ದೌಡಾಯಿಸಿದ ಡಿ.ಕೆ. ಶಿವಕುಮಾರ್
ಇನ್ನು ರಸ್ತೆ ಸಾರಿಗೆ ಮೂಲಕ ದೆಹಲಿಗೆ ತಲುಪಲು 4 ದಿನ ಆಗುತ್ತಿದ್ದು, ಇದೀಗ ಕೇವಲ 40 ಗಂಟೆಗಳಲ್ಲಿ ದೆಹಲಿಗೆ ಮಾವು ತಲುಪಲಿದೆ ಎಂದು ಸಂಸದ ಎಸ್ ಮುನಿಸ್ವಾಮಿ ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಜಿಲ್ಲೆಯಲ್ಲೇ ಯಥೇಚ್ಚವಾಗಿ ಬೆಳೆಯುವ ತರಕಾರಿಗಳನ್ನು ರಫ್ತು ಮಾಡಲು ಬೇಡಿಕೆ ಮೇರೆಗೆ ರೈಲು ವ್ಯವಸ್ಥೆ ಮಾಡಲು, ರೈಲ್ವೆ ಇಲಾಖೆ ಸಿದ್ದವಿದೆ. ಆದರೆ ರೈತರು ಬೇರೆ ರಾಜ್ಯಗಳನ್ನು ತಿಳಿದುಕೊಂಡು ಬೇಡಿಕೆಯನ್ನ ಇಟ್ಟಲ್ಲಿ ಇಲಾಖೆಯು ಕಿಸಾನ್ ರೈಲು ವ್ಯವಸ್ಥೆ ಮಾಡಲಿದೆ ಎಂದು ಸಂಸದ ಮುನಿಸ್ವಾಮಿ ಅವರು ರೈತರಿಗೆ ಭರವಸೆ ನೀಡಿದ್ದಾರೆ.
ವಿಶ್ವ ಮಾವು ಹಣ್ಣಿನ ನಗರವೆಂದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಹೆಸರುವಾಸಿ ಪಡೆದಿದ್ದು, ಪ್ರಸಕ್ತ ವರ್ಷದಲ್ಲಿ ಲಾಕ್ ಡೌನ್ ಹಿನ್ನಲೆ ಮಾವಿಗೆ ಬೇಡಿಕೆ ಕುಸಿದು, ಬೆಲೆಯೂ ಇಲ್ಲದಂತಾಗಿದೆ. ಹೀಗಾಗಿ ರೈತರು ಕಡಿಮೆ ಬೆಲೆಗೆ ಬೇರೆಡೆಯ ದಳ್ಳಾಳಿಗಳಿಗೆ ಮಾರಾಟ ಮಾಡಲು ಮುಂದಾದಲ್ಲಿ, ಸಾಗಾಣಿಕೆ ವೆಚ್ಚ, ಕಾರ್ಮಿಕರ ಕೂಲಿಗೆ ಶೇಕಡಾ 90ರಷ್ಟು ಹಣ ಖರ್ಚಾಗುತ್ತಿದೆ.
ಹೀಗಾಗಿ ಸುಮಾರು ರೈತರು ಬೇಡಿಕೆ ಕಡಿಮೆಯಿರುವ ಮಾವನ್ನು ಸಿಕ್ಕ ಬೆಲೆಗೆ ಮಾರಾಟ ಮಾಡಿ ಹೋಗ್ತಿದ್ದಾರೆ. ಇದೀಗ ಕಿಸಾನ್ ರೈಲು ಸೇವೆಯನ್ನ ಸರ್ಕಾರ ಆರಂಭವಾಗಿದ್ದು, ಬೇಡಿಕೆಗೆ ಅನುಗುಣವಾಗಿ ಸೇವೆಯನ್ನ ಮುಂದುವರೆಸುವುದಾಗಿ ರೈಲ್ವೆ ಇಲಾಖೆಯು ಭರವಸೆ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ