news18india Updated:March 9, 2021, 7:23 AM IST
ಮಗುವನ್ನು ಕಳೆದುಕೊಂಡವರ ಆಕ್ರಂಧನ.
ಕೊಡಗು; ಜಿಲ್ಲೆಯಲ್ಲಿ ನರಹಂತಕ ಹುಲಿಯ ಅಟ್ಟಹಾಸ ಮುಂದುವರೆಯುತ್ತಲೇ ಇದೆ. ಇಂದು ಕೂಡ ಪೊನ್ನಂಪೇಟೆ ತಾಲ್ಲೂಕಿನ ಬೆಳ್ಳೂರಿನಲ್ಲಿ ಎಂಟು ವರ್ಷದ ಬಾಲಕನನ್ನು ಕೊಂದು ಹಾಕಿರುವ ಹುಲಿ ವೃದ್ದನನ್ನು ಗಂಭೀರವಾಗಿ ಗಾಯಗೊಳಿಸಿದೆ. 8 ವರ್ಷದ ಬಾಲಕ ರಂಗಸ್ವಾಮಿ ಹುಲಿಯ ದಾಳಿಗೆ ಸ್ಥಳದಲ್ಲಿಯೇ ದಾರುಣವಾಗಿ ಮೃತಪಟ್ಟಿದ್ದಾನೆ. ಇನ್ನು ಮೃತ ಬಾಲಕನ ತಾತ ಕೆಂಚಶೆಟ್ಟಿ ಗಂಭೀರವಾಗಿ ಗಾಯಗೊಂಡಿದ್ದು, ಕೆಂಚಪ್ಪಶೆಟಿಯನ್ನು ಮೈಸೂರಿನ ಅಪೊಲೋ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಾಗಿದೆ. ಮೊಮ್ಮಗನನ್ನು ಹುಲಿ ಕೊಂದು ಹಾಕಿದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಅಜ್ಜಿ ಮತ್ತು ಚಾಮರಾಜನಗರದಿಂದ ಬಂದಿದ್ದ ಬಾಲಕ ಪೋಷಕರ ರೋಧನ ಮುಗಿಲುಮುಟ್ಟಿತ್ತು.
ಮೂಲತಃ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಗ್ರಾಮದವರಾಗಿರುವ ಇವರು ಕಳೆದ ಒಂದು ವರ್ಷದ ಹಿಂದೆ ಕೆಲಸ ಅರಸಿ ಬೆಳ್ಳೂರಿಗೆ ಬಂದಿದ್ದರು. ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಬೆಳ್ಳೂರು ಗ್ರಾಮದ ಕಾಳಯ್ಯ ಎಂಬುವರ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಬೆಳಿಗ್ಗೆ ನೀರಿನ ಮೋಟರ್ ಆಫ್ ಮಾಡಲು ಓದಾಗ ಹುಲಿ ಇದ್ದಕ್ಕಿದ್ದಂತೆ ತಾತ ಮೊಮ್ಮಗನ ಮೇಲೆ ದಾಳಿ ನಡೆಸಿದೆ. ಫೆಬ್ರವರಿ ತಿಂಗಳ ಕೊನೆಯಲ್ಲಿ ಹದಿನೈದು ದಿನಗಳಲ್ಲಿ ಮೂವರನ್ನು ಹುಲಿ ಬಲಿತೆಗೆದುಕೊಂಡಿದೆ.
ಇಂದು ಬೆಳ್ಳೂರಿನಲ್ಲಿ ಹುಲಿ ದಾಳಿ ಮಾಡಿದ್ದ ವಿಷಯ ತಿಳಿಯುತ್ತಿದ್ದಂತೆ ರಾಜ್ಯ ರೈತ ಸಂಘದ ಮುಖಂಡರು, ಸ್ಥಳೀಯರು ನೂರಾರು ಸಂಖ್ಯೆಯಲ್ಲಿ ಸ್ಥಳದಲ್ಲಿ ಜಮಾಯಿಸಿದರು. ಗೋಣಿಕೊಪ್ಪ, ಕೇರಳ ನಡುವಿನ ಅಂತರರಾಜ್ಯ ಹೆದ್ದಾರಿಯನ್ನು ಎರಡು ಗಂಟೆಗೂ ಹೆಚ್ಚು ಸಮಯ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು. ಪರಿಸ್ಥಿತಿ ಕೈಮೀರುವ ಹಂತ ತಲುಪಿದಾಗ ವಿರಾಜಪೇಟೆ ತಹಶೀಲ್ದಾರ್ ಯೋಗಾನಂದ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸಿದರು.
ಅದು ಸಾಧ್ಯವಾಗದಿದ್ದಾಗ ಹುದಿಕೇರಿ ಹೋಬಳಿ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಿದರು. ಇದಕ್ಕೂ ಜನರು ಕೇರ್ ಮಾಡದೆ ಪ್ರತಿಭಟಿಸಿ ಕಫ್ರ್ಯೂ ಜಾರಿ ಮಾಡಿರುವುದನ್ನು ಖಂಡಿಸಿದರು. ಸ್ಥಳಕ್ಕೆ ಬಂದ ಕೊಡಗು ಸಿಸಿಎಫ್ ಹೀರಾಲಾಲ್ ಅವರನ್ನು ಜನರು ತೀವ್ರ ತರಾಟೆಗೆ ತೆಗೆದುಕೊಂಡರು. ನಿಮಗೆ ಜನರ ಪ್ರಾಣಕ್ಕಿಂತ ಕಾಡು ಪ್ರಾಣಿಗಳ ನೆಮ್ಮದಿಯೇ ಮುಖ್ಯ ಎಂದು ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ: Sadananda Gowda: ಸರ್ವಾಂಗೀಣ ಅಭಿವೃದ್ಧಿಗೆ ದೂರದೃಷ್ಟಿಯ ಬಜೆಟ್: ರಾಜ್ಯ ಆಯವ್ಯಯಕ್ಕೆ ಸದಾನಂದಗೌಡ ಪ್ರಶಂಸೆ
ಬಳಿಕ ಮಾತನಾಡಿದ ಕೊಡಗು ಸಿಸಿಎಫ್ ಹೀರಾಲಾಲ್ ಸರ್ಕಾರ ಈಗಾಗಲೇ ಹುಲಿಗೆ ಗುಂಡಿಕ್ಕಲು ಆದೇಶ ನೀಡಿದೆ ಇಲಾಖೆಯ ನಮ್ಮ ಸಿಬ್ಬಂದಿಗಳು ಕೂಡ ಹಗಲು ರಾತ್ರಿ ಎನ್ನದೆ 22 ದಿನಗಳಿಂದ ಹುಲಿಯನ್ನು ಹುಡುಕಾಡುತ್ತಿದ್ದಾರೆ. ಸಿಕ್ಕಲ್ಲಿ ಸೆರೆಹಿಡಿಯಲಾಗುವುದು ಸಾಧ್ಯವಾಗಿದ್ದರೆ ಗುಂಡಿಕ್ಕಿ ಕೊಲ್ಲಲಾಗುವುದು ಎಂದು ಪ್ರತಿಭಟನಾನಿರತರನ್ನು ಸಮಾಧಾನಗೊಳಿಸಲು ಪ್ರಯತ್ನಿಸಿದರು.
ಬಳಿಕ ಕಾಡಾನೆಗಳನ್ನು ಬಳಸಿ ಕಾರ್ಯಾಚರಣೆ ಆರಂಭಿಸಲಾಗಿದ್ದು ನರಹಂತಕ ಹುಲಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. 20 ದಿನಗಳ ಅವಧಿಯಲ್ಲಿ ಮೂವರನ್ನು ಹುಲಿ ಬಲಿ ಪಡೆದಿದ್ದು, 15 ಕ್ಕೂ ಹೆಚ್ಚು ಜಾನುವಾರಗಳನ್ನು ಕೊಂದಿದೆ. ಹೀಗಾಗಿ ಹುದಿಕೇರಿ, ಶ್ರೀಮಂಗಲ ಮತ್ತು ಬೆಳ್ಳೂರು ಸುತ್ತಮುತ್ತ ಜನರು ಆತಂಕದಲ್ಲೇ ಬದುಕುವಂತಾಗಿದೆ.
Published by:
MAshok Kumar
First published:
March 9, 2021, 7:23 AM IST