ಉಡುಪಿ (ಡಿಸೆಂಬರ್ 01); ರಾಜ್ಯದ ವಿಖ್ಯಾತ ಉಡುಪಿ ಶ್ರೀಕೃಷ್ಣ ಮಠದ ಕನ್ನಡ ನಾಮಫಲಕ ತೆರವಿಗೆ ವ್ಯಾಪಕ ಟೀಕೆ, ಆಕ್ರೋಶಗಳು ಕೇಳಿಬಂದಿದೆ. ಏಕಾಏಕಿ ತೆರವಾದ ಕೃಷ್ಣಮಠ ಎಂಬ ಕನ್ನಡ ನಾಮಫಲಕ ಮೂರು ದಿನಗಳು ಕಳೆದರೂ ಇನ್ನೂ ಅಳವಡಿಸದಿರುವುದಕ್ಕೆ ಕನ್ನಡಾಭಿಮಾನಿಗಳು, ಕೃಷ್ಣನ ಭಕ್ತರು ಆಕ್ರೋಶ ಹೊರಹಾಕಿದ್ದಾರೆ. ಎರಡು ದಿನದ ಹಿಂದೆ ಕೃಷ್ಣಮಠದ ಮುಂಭಾಗ ಇದ್ದ ಕೃಷ್ಣ ಮಠ ಎಂಬ ಕನ್ನಡ ಹಾಗೂ ಆಂಗ್ಲಭಾಷೆಯಲ್ಲಿದ್ದ ನಾಮಫಲಕವನ್ನ ತೆರವು ಮಾಡಿರುವ ಕೃಷ್ಣಮಠದ ಪರ್ಯಾಯ ಅದಮಾರು ಮಠದ ಆಡಳಿತ ಮಂಡಳಿ, ಇದೀಗ ತುಳು ಹಾಗೂ ಸಂಸ್ಕೃತದಲ್ಲಿ ಶ್ರೀ ಕೃಷ್ಣ ಮಠ, ರಜತಪೀಠ ಪುರಂ ಎಂಬ ಬರಹವನ್ನ ಮರದಲ್ಲಿ ಕೆತ್ತನೆ ಮಾಡಿ ಮಠದ ಮುಂಬಾಗ ಅಳವಡಿಸಿದೆ. ಈ ಫಲಕ ಕಂಡ ಭಕ್ತರು ಒಂದು ಕ್ಷಣ ಗೊಂದಲಕ್ಕೆ ಒಳಗಾಗಿದ್ದಾರೆ. ಅಲ್ಲದೆ, ಈ ಕ್ರಿಯೆಗೆ ಇದೀಗ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಶ್ರೀ ಗಳ ಸೂಚನೆ ಮೇಲೆ ಆಡಳಿತ ಮಂಡಳಿ ಮಾಡಿರುವ ಬೋರ್ಡ್ ಬದಲಾವಣೆಗೆ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಕ್ರೊಷ ವ್ಯಕ್ತಪಡಿಸಿ, ಕೃಷ್ಣಮಠದ ಬೋರ್ಡ್ ಬದಲಾವಣೆ ತುಂಬಾ ಬೇಸರದ ಸಂಗತಿ. ಧಾರ್ಮಿಕ ಸಂಸ್ಥೆ ಸಮಾಜಕ್ಕೆ ಬುದ್ಧಿಹೇಳುವ ಸಂಸ್ಥೆಯಾಗಬೇಕು. ಕೃಷ್ಣಮಠದಲ್ಲಿ ಕನ್ನಡವೇ ಕಾಣೆಯಾಗಿದೆ. ಇಷ್ಟರವರೆಗೆ ಕೃಷ್ಣಮಠ ಎಂದು ಕನ್ನಡದಲ್ಲಿ ಬರೆಯಲಾಗಿತ್ತು.
ಈಗ ಆ ಫಲಕ ತೆಗೆದು ತುಳುವಿನಲ್ಲಿ ಬರೆಯಲಾಗಿದೆ. ತುಳು ನಮ್ಮ ಸೋದರ ಭಾಷೆ ಒಪ್ಪಿಕೊಳ್ಳುತ್ತೇವೆ. ಆದರೆ ನಾಮಫಲಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಇದು ಕಾನೂನಿನ ಸ್ಪಷ್ಟ ಉಲ್ಲಂಘನೆ. ಕನ್ನಡ ಸಾಹಿತ್ಯ ಪರಿಷತ್ತು ತೀವ್ರವಾಗಿ ಖಂಡಿಸುತ್ತದೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿಯನ್ನು ಸಲ್ಲಿಸುತ್ತೇವೆ. ಕನ್ನಡ ಮತ್ತು ತುಳುವಿನ ನಡುವೆ ಕಂದಕ ಏರ್ಪಡಿಸುವ ಕೆಲಸ ಮಾಡಬೇಡಿ. ಎಷ್ಟೇ ದೊಡ್ಡವರಾಗಿ ಇರಲಿ, ಕಾನೂನು ರೀತಿಯಲ್ಲಿ ಅಪರಾಧ ಮಾಡಿದ್ದಾರೆ. ಕನ್ನಡಿಗರು ಕ್ಷಮಿಸಲಾರದಂತಹ ಅಪರಾಧ ಇದು ಎಂದು ನೀಲಾವರ ಸುರೇಂದ್ರ ಅಡಿಗ ಆಕ್ರೋಶ ವ್ಯಕ್ತಪಡಿಸಿದರು.
ಈ ಆಕ್ರೋಶದ ಬೆನ್ನಲ್ಲೇ ಧಾರ್ಮಿಕ ಮುಖಂಡರಾಗಿರುವ ವಾಸುದೇವ ಭಟ್ ಕೂಡ ಆಕ್ರೋಶ ಹೊರಹಾಕಿದ್ದಾರೆ.ತುಳು ಇಲ್ಲಿನ ಆಡು ಭಾಷೆ ಎಂಬುದು ನಿಜ.ಆದರೆ ನಾಮಫಲಕದಲ್ಲಿ ಕನ್ನಡ ಕಡ್ಡಾಯ ಎಂಬುದನ್ನು ಸರಕಾರವೇ ಸ್ಪಷ್ಟಪಡಿಸಿದೆ. ಕನ್ನಡದಲ್ಲಿ ಬರೆದ ಬಳಿಕ ತುಳು ,ಸಂಸ್ಕೃತ ದಲ್ಲಿ ಬರೆಯಲಿ. ಆದರೆ ಕನ್ನಡವನ್ನೇ ಮಾಯ ಮಾಡುವುದು ಅಪರಾಧ.ಪರ್ಯಾಯ ಅದಮಾರು ಮಠಕ್ಕೆ ಯಾರು ಈ ಐಡಿಯಾ ಕೊಟ್ಟಿದ್ದಾರೋ ಗೊತ್ತಿಲ್ಲ. ಮಠಮಾನ್ಯಗಳು ಸಮಾಜಕ್ಕೆ ಮಾರ್ಗದರ್ಶನ ನೀಡಬೇಕೇ ಹೊರತು ಇಂತಹ ಬೆಳವಣಿಗೆಗಳಿಗೆ ಅವಕಾಶ ನೀಡಬಾರದು ಬೇಸರ ವ್ಯಕ್ತಪಡಿಸಿದ್ದಾರೆ.
ಇಷ್ಟಾಗುತ್ತಲ್ಲೇ ಪರ್ಯಾಯ ಅದಮಾರು ಮಠದಿಂದ ಸ್ಪಷ್ಟನೆ ಸಿಕ್ಕಿದೆ, ಕೃಷ್ಣ ಮಠದ ಪುನಶ್ಚೇತನಗೊಳಿಸುವ ಜವಾಬ್ದಾರಿ ಹೊತ್ತಿರುವ ಮಠದ ಸಲಹೆಗಾರರಾಗಿರುವ ಕಲಾವಿದ ಪುರುಷೋತ್ತಮ ಅಡ್ವೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಉಡುಪಿ ಕೃಷ್ಣ ಮಠವನ್ನು ಪುನಶ್ಚೇತನ ಗೊಳಿಸಲಾಗುತ್ತಿದೆ. ಪುನಶ್ಚೇತನದ ಸಂದರ್ಭ ಮಖ್ಯದ್ವಾರದ ಪ್ಲಾಸ್ಟಿಕ್ ಬೋರ್ಡ್ ತೆಗೆಯಲಾಗಿದೆ. ಮರದಲ್ಲಿ ತಯಾರಿಸಿ ಬೋರ್ಡ್ ಅಳವಡಿಸುವ ಯೋಜನೆ ಇದೆ.
ದ್ವಾರದ ಮೇಲ್ಬಾಗದಲ್ಲಿ ಕನ್ನಡ ಬೋರ್ಡ್ ಅಳವಡಿಸುತ್ತೇವೆ. ಕೆಳ ಭಾಗದಲ್ಲಿ ಸಂಸ್ಕೃತ, ತುಳುವಿನಲ್ಲಿ ಬೋರ್ಡ್ ಅಳವಡಿಸಲಾಗುವುದು. ಈ ಬಗ್ಗೆ ಪರ್ಯಾಯ ಅದಮಾರು ಮಠಾಧೀಶರು ಸೂಚನೆಯನ್ನು ಕೊಟ್ಟಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. ಬೋರ್ಡ್ ಕಾಮಗಾರಿ ಪೂರ್ಣಗೊಳ್ಳುವ ಮೊದಲು ಲಕ್ಷದೀಪೋತ್ಸವ ಬಂದಿದೆ. ಮಠದ ಮುಖ್ಯದ್ವಾರಕ್ಕೆ ಬೋರ್ಡ್ ಅಳವಡಿಸಬೇಕಾದ ಪ್ರಮೇಯ ಬಂತು. ಕನ್ನಡದ ಬೋರ್ಡ್ ಇನ್ನಷ್ಟೇ ತಯಾರು ಆಗಬೇಕಾಗಿದೆ.
ಇದನ್ನೂ ಓದಿ : ರೈತ ವಿರೋಧಿ ಕೇಂದ್ರ ಸರ್ಕಾರದ ವಿರುದ್ಧದ ರೈತರ ಹೋರಾಟಕ್ಕೆ ನಮ್ಮ ಬೆಂಬಲವಿದೆ; ಸಿದ್ದರಾಮಯ್ಯ
ಸಂಸ್ಕೃತ ಮತ್ತು ತುಳುವಿನ ಬೋರ್ಡ್ ಮೊದಲೇ ಸಿದ್ಧವಾಗಿರುವ ಕಾರಣ ಅದನ್ನು ಅಳವಡಿಸಲಾಗಿದೆ.ತುಳುವಿಗೆ ಮಾನ್ಯತೆ ಕೊಡುವ ಉದ್ದೇಶದಿಂದ ಈ ಬೋರ್ಡ್ ಅಳವಡಿಸಲಾಗಿದೆ. ಕನ್ನಡ ಬೋರ್ಡ್ ಸಿದ್ಧವಾದ ಕೂಡಲೇ ಅದನ್ನು ಮೇಲ್ಭಾಗದಲ್ಲಿ ಅಳವಡಿಸುತ್ತೇವೆ ಎಂದು ಸ್ಪಷ್ಟನೆ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ