ರಾಮನಗರ: ರಾಜ್ಯ ಸರ್ಕಾರ ಲಿಂಗಾಯತ ಸಮುದಾಯಕ್ಕೆ ನಿಗಮ ಮಾಡಿ ಅದಕ್ಕೆ ನಿರ್ದೇಶಕರನ್ನು ನೇಮಕ ಮಾಡಿದೆ. ಈ ನಿಟ್ಟಿನಲ್ಲಿ ಹಲವು ಸಮುದಾಯದ ಮುಖಂಡರು ನಮ್ಮ ಸಮುದಾಯಕ್ಕೂ ಪ್ರಾಧಿಕಾರ, ನಿಗಮ ಮಂಡಳಿ ರಚನೆ ಮಾಡಬೇಕು ಎಂದು ರಾಜ್ಯಾದ್ಯಂತ ಸುದ್ದಿಗೋಷ್ಠಿ ನಡೆಸಿ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಅದೇ ರೀತಿ ಕುಸ್ತಿ ಹಾಗೂ ಗರಡಿಮನೆ ಪೈಲ್ವಾನ್ ಗಳು ಸಹ ಇದೀಗ ತಮ್ಮ ಬೇಡಿಕೆಯನ್ನು ಹೊರ ಹಾಕಿದ್ದಾರೆ.
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕುಸ್ತಿ ಪಟುಗಳು ಮಾತನಾಡಿ, ದೇಸಿ ಕ್ರೀಡೆಯಾದ ಕುಸ್ತಿ ಹಾಗೂ ಗರಡಿ ಆಟವನ್ನು ಉಳಿಸಿಕೊಳ್ಳಬೇಕಿದೆ. ಮೈಸೂರು ಪ್ರಾಂತ್ಯದಲ್ಲಿ ಅತೀ ಹೆಚ್ಚು ಕುಸ್ತಿ ಕ್ರೀಡಾಪಟುಗಳು ಇದ್ದಾರೆ. ನಮ್ಮ ನೆಲದ ಕ್ರೀಡೆಯನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಕುಸ್ತಿ ಹಾಗೂ ಪೈಲ್ವಾನ್ಗಳಿಗೂ ಸಹ ಪ್ರಾಧಿಕಾರ ರಚನೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಇನ್ನು ಪ್ರಾಧಿಕಾರ ರಚನೆಯಾಗಿದ್ದೇ ಆದಲ್ಲಿ ಕುಸ್ತಿ ಕ್ರೀಡೆ ಮೈಸೂರು ಹಾಗೂ ನಮ್ಮ ರಾಜ್ಯ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಹ ದೇಸಿಕ್ರೀಡೆಯನ್ನು ಉಳಿಸಿಕೊಳ್ಳಬಹುದು. ಇದರಿಂದ ಸರ್ಕಾರ ಈ ಕೂಡಲೇ ನಮ್ಮ ಮನವಿಗೆ ಸ್ಪಂದಿಸಿ ಕುಸ್ತಿಪಟುಗಳಿಗೂ ಪ್ರಾಧಿಕಾರ ರಚನೆ ಮಾಡಿ ಅನುಕೂಲ ಮಾಡಿಕೊಡಬೇಕು ಎಂದು ಕುಸ್ತಿಪಟುಗಳು ಆಗ್ರಹಿಸಿದರು.
ಇದನ್ನು ಓದಿ: ಗ್ರಾಪಂ ಚುನಾವಣೆ ಬಹಿಷ್ಕರಿಸಿ ಬ್ಯಾನರ್ ಹಾಕಿದ ಗ್ರಾಮಸ್ಥರು; ನಾಮಪತ್ರ ಸಲ್ಲಿಸಿದರೆ ಮನೆ ಮುಂದೆ ಧರಣಿ ಎಚ್ಚರಿಕೆ
ಈಗಿನ ಸಂದರ್ಭದಲ್ಲಿ ಬಹುತೇಕ ಯುವಕರು ಜಿಮ್ ನಲ್ಲಿ ಕಾಲ ಕಳೆಯುತ್ತಾರೆ. ಆದರೆ ಜೀವನಪೂರ್ತಿ ನಮ್ಮ ಆರೋಗ್ಯ ಅಚ್ಚುಕಟ್ಟಾಗಿ ಇರಬೇಕೆಂದರೆ ಗರಡಿ ಮನೆಯಲ್ಲಿ ಮಾತ್ರ ಅದು ಸಾಧ್ಯ. ಜಿಮ್ ನಲ್ಲಿ ಸಾಯುವವರೆಗೆ ದೇಹ ದಂಡಿಸಿದರೂ ಸಹ ಪ್ರಯೋಜನವಾಗಲ್ಲ. ಆದರೆ ಗರಡಿ ಮನೆಯಲ್ಲಿ ಕೇವಲ 1 ವರ್ಷ ಸಾಧನೆ ಮಾಡಿದರೆ ಸಾಕು. ಅದು ನಾವು ಸಾಯುವವರೆಗೆ ನಮ್ಮ ದೇಹ ಗಟ್ಟಿಮುಟ್ಟಾಗಿ ಇರುತ್ತದೆ. ಹಾಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಗರಡಿ ಮನೆಗಳ ಉನ್ನತ್ತಿಗೊಳಿಸುವುದಕ್ಕೆ ಸಹಕಾರ ಕೊಡಬೇಕು. ದೇಸಿ ಕ್ರೀಡೆಯ ಬಗ್ಗೆ ಯುವಕರಿಗೆ ಆಸಕ್ತಿ ಬರಬೇಕಾದರೆ ಆಡಳಿತ ನಡೆಸುವ ಸರ್ಕಾರಗಳು ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕೆಂದು ಗರಡಿ ಮನೆ ಪೈಲ್ವಾನರು ಅಭಿಪ್ರಾಯಪಟ್ಟಿದ್ದಾರೆ.
ವರದಿ : ಎ.ಟಿ.ವೆಂಕಟೇಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ