ಹಾಸನ, ಚಾಮರಾಜನಗರ (ಫೆ.27): ರಾಜ್ಯದಲ್ಲಿ ಈಗ ಪಾದಯಾತ್ರೆ (Padayatre) ಸದ್ದು ಜೋರಾಗಿದೆ. ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ 2.0 ರಾಮನಗರದಿಂದ ಆರಂಭಗೊಂಡಿದೆ. ಇತ್ತ ಕಾಂಗ್ರೆಸ್ ಪಾದಯಾತ್ರೆಗೆ ಸೆಡ್ಡು ಹೊಡೆಯುವಂತೆ ಜೆಡಿಎಸ್ ಶಿವರಾತ್ರಿ ಪಾದಯಾತ್ರೆ ಕೈಗೊಂಡಿರುವಂತೆ ಕಾಣ್ತಿದೆ. ಜೆಡಿಎಸ್ ಯುವ ನಾಯಕ, ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಧರ್ಮಸ್ಥಳದ (Dharmasthala) ಮಂಜುನಾಥನ ದೇಗುಲಕ್ಕೆ ಪಾದಯಾತ್ರೆ ಹೊರಟ್ಟಿದ್ದಾರೆ. ಇತ್ತ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಕೂಡ ಚಾಮರಾಜನಗರದ ಮಲೆಮಾದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ. ಮಾರ್ಚ್ 1 ರಂದು ಶಿವರಾತ್ರಿ (Shivaratri) ಹಬ್ಬವಿದ್ದು, ಇಬ್ಬರೂ ಜೆಡಿಎಸ್ ನಾಯಕರು ಹಾಗೂ ಸಹೋದರರು ಕಾಲ್ನಡಿಗೆಯ ಮೂಲಕ ಶಿವನ ದರ್ಶನ ಮಾಡಲಿದ್ದಾರೆ. ಸಹೋದರರ ಪಾದಯಾತ್ರೆ ಪೈಪೋಟಿ ಭಾರೀ ಕುತೂಹಲ ಮೂಡಿಸಿದೆ.
ಧರ್ಮಸ್ಥಳಕ್ಕೆ ಪ್ರಜ್ವಲ್ ರೇವಣ್ಣ ಪಾದಯಾತ್ರೆ
ಹಾಸನದಿಂದ ಧರ್ಮಸ್ಥಳ 210 ಕಿಲೋಮೀಟರ್ ದೂರವಿದೆ. ಪಾದಯಾತ್ರೆಯ ಮೂಲಕ ಐದು ದಿನಗಳಲ್ಲಿ ಕ್ರಮಿಸಿ ಪ್ರಜ್ವಲ್ ರೇವಣ್ಣ ದೇವರ ದರ್ಶನ ಪಡೆಯಲ್ಲಿದ್ದಾರೆ. ಬೆಳಗ್ಗೆ 6 ಗಂಟೆಗೆ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಜ್ವಲ್ ಪಾದಯಾತ್ರೆ ಆರಂಭಿಸಿದ್ದಾರೆ. ಹರದನಹಳ್ಳಿಯ ದೇವಸ್ಥಾನ, ಮೊಸಳೆ ಹೊಸಹಳ್ಳಿಯ ಮೂಲಕ ಸಾಗಲಿರೋ ಪಾದಯಾತ್ರೆ, ಕಂದಲಿ ಕೃಷಿ ಕಾಲೇಜಿನವರೆಗೆ ಸಾಗಿ ಮೊದಲ ದಿನದ ಯಾತ್ರೆ ಮುಕ್ತಾಯಗೊಳ್ಳಲಿದೆ.
210 ಕಿಲೋ ಮೀಟರ್ ಪ್ರಜ್ವಲ್ ಪಾದಯಾತ್ರೆ!
ಇದಾದ ನಂತರ, ಬೈರಾಪುರ, ಚಿಕ್ಕನಾಯಕನ ಹಳ್ಳಿ ಮೂಲಕ ಸಕಲೇಶಪುರದ ಶ್ರೀನಿವಾಸ ಕನ್ವೆನ್ಷನ್ ಹಾಲ್ ನಲ್ಲಿ ಎರಡನೇ ದಿನದ ಯಾತ್ರೆ ಮುಕ್ತಾಯಗೊಳ್ಳಲಿದೆ. ಎರಡು ದಿನಗಳಲ್ಲಿ ಪ್ರಜ್ವಲ್ ರೇವಣ್ಣ ಅವರು ಕಾಲ್ನಡಿಗೆ ಮೂಲಕ 73 ಕಿಲೋಮೀಟರ್ ಕ್ರಮಿಸಲಿದ್ದಾರೆ. ಮೂರನೇ ದಿನದ ಪಾದಯಾತ್ರೆ ಸಕಲೇಶಪುರದ ಶಿವನ ದೇವಾಲಯದಲ್ಲಿ ಪೂಜೆ ಸಲ್ಲಿಕೆಯ ನಂತರ, ಮಂಜ್ರಾಬಾದ್ ಚೆಕ್ ಪೋಸ್ಟ್, ಮಾರನಹಳ್ಳಿ ಚೆಕ್ ಪೋಸ್ಟ್ ಮೂಲಕ ಗುಂಡ್ಯದಲ್ಲಿ ಮುಕ್ತಾಯಗೊಳ್ಳಲಿದೆ. ನಾಲ್ಕನೇ ದಿನದ ಪಾದಯಾತ್ರೆ ಗುಂಡ್ಯದಿಂದ ಆರಂಭವಾಗಿ ಧರ್ಮಸ್ಥಳದಲ್ಲಿ ಮುಕ್ತಾಯಗೊಳ್ಳಲಿದೆ.
ಇದನ್ನೂ ಓದಿ: Employees Protests: ಮಾರ್ಚ್ 4 ರಂದು ರಾಜ್ಯಾದ್ಯಂತ ಶಾಲಾ-ಕಾಲೇಜು ಬಂದ್
ಪ್ರಜ್ವಲ್ ಜೊತೆ ಒಗ್ಗೂಡಲಿದ್ದಾರೆ 2 ಸಾವಿರ ಜನ
ಈ ಪಾದಯಾತ್ರೆಗೆ ಎರಡು ಸಾವಿರಕ್ಕೂ ಅಧಿಕ ಜನರು ಸೇರಿಕೊಳ್ಳೋ ಸಾಧ್ಯತೆಯಿದೆ. ಶಿವರಾತ್ರಿಯಾದ ಎರಡು ದಿನದ ಬಳಿಕ ಪ್ರಜ್ವಲ್ ಪಾದಯಾತ್ರೆ ಧರ್ಮಸ್ಥಳ ತಲುಪಲಿದೆ. ಬಳಿಕ ಮಂಜುನಾಥನ ದರ್ಶನ ಪಡೆದು ಪ್ರಜ್ವಲ್ ವಾಪಸ್ ಆಗಲಿದ್ದಾರೆ. ಎಲ್ಲೂ ರಾಜಕೀಯ ಸಮಾವೇಶ, ಭಾಷಣಗಳು ಇರುವುದಿಲ್ಲ ಎಂದು ಜೆಡಿಎಸ್ ಮೂಲದಿಂದ ತಿಳಿದು ಬಂದಿದೆ. ಪಾದಯಾತ್ರಿಗಳು ಎಲ್ಲಿ ಬಂದು ಸೇರಬೇಕು ಎನ್ನುವ ವಿವರವನ್ನೂ ಕೂಡ ಈಗಾಗಲೇ ನೀಡಲಾಗಿದೆ.
ಮಹದೇಶ್ವರ ಬೆಟ್ಟಕ್ಕೆ ನಿಖಿಲ್ ಪಾದಯಾತ್ರೆ
ಸಂಸದ ಪ್ರಜ್ವಲ್ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡ್ರೆ ಈತ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಮಲೈ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಗೆ ಹೊರಟಿದ್ದಾರೆ. ನಾಳೆ ನಿಖಿಲ್ ಪಾದಯಾತ್ರೆ ಆರಂಭಗೊಳ್ಳಲಿದೆ. ನಾಳೆ ಹನೂರು ತಾಲೂಕು ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡಲಿದ್ದಾರೆ. ನಿಖಿಲ್ ಕುಮಾರಸ್ವಾಮಿ 21 ಕಿಲೋಮೀಟರ್ ಕಾಲ್ನಡಿಗೆ ಮೂಲಕ ಸಾಗಿ ಮಾದಪ್ಪನ ದರ್ಶನ ಪಡೆಯಲಿದ್ದಾರೆ.
ಇದನ್ನೂ ಓದಿ: Nikhil kumaraswamy: ‘ಮುಂದಿನ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಕಣಕ್ಕಿಳಿಯಲ್ಲ’, ರಾಮನಗರದಿಂದ ನಿಖಿಲ್ ಸ್ಪರ್ಧೆ ಫಿಕ್ಸ್?
ನಿಖಿಲ್, ಪ್ರಜ್ವಲ್ ಪಾದಯಾತ್ರೆ ಸೀಕ್ರೆಟ್
ರಾಜ್ಯದಲ್ಲಿ ಪಾದಯಾತ್ರೆ ಪರ್ವ ಶುರುವಾಗಿದೆ. ಇತ್ತ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಕೈಗೊಂಡಿದೆ. ಬಿಜೆಪಿ ನಾಯಕರು ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ವ್ಯಂಗ್ಯವಾಡಿದೆ. ಇತ್ತ ಜೆಡಿಎಸ್ ವರಿಷ್ಠ ಕುಮಾರಸ್ವಾಮಿ ಸಹ ಕಾಂಗ್ರೆಸ್ ಪಾದಯಾತ್ರೆ ಕುರಿತು ವ್ಯಂಗ್ಯವಾಡಿದ್ರು. ಈ ನಡುವೆ ಇಬ್ಬರು ಜೆಡಿಎಸ್ ಯುವ ನಾಯಕರು ಪಾದಯಾತ್ರೆ ಕೈಗೊಂಡಿದ್ದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಪಾದಯಾತ್ರೆ ಮೂಲಕವೇ ಪಕ್ಷ ಸಂಘಟನೆಗೆ ಇಬ್ಬರು ನಾಯಕರು ಮುಂದಾಗಿರುವಂತೆ ಕಾಣ್ತಿದೆ. ಯುವ ನಾಯಕರು ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷ ಮುನ್ನಡೆ ಜವಾಬ್ದಾರಿ ಹೊರಬೇಕಿದೆ. ಹೀಗಾಗಿ ಇಬ್ಬರು ನಾಯಕರು ಪಕ್ಷ ಸಂಘಟನೆಗೆ ಮುಂದಾದಂತೆ ಕಾಣ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ