ಹಾಸನ; ಯಾವ ಎನ್ಡಿಎನೂ ಇಲ್ಲಾ, ಯುಪಿಎನೂ ಇಲ್ಲಾ. ನಮ್ಮದು ಜೆಪಿ ಮಾತ್ರ ಜಯಪ್ರಕಾಶ್ ನಾರಾಯಣ್ ಅವರು ಹುಟ್ಟುಹಾಕಿದ ಪಕ್ಷ ಯಾವುದೇ ಪಕ್ಷದ ಜೊತೆ ಒಪ್ಪಂದ ಮಾಡಿಕೊಳ್ಳಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಸ್ಪಷ್ಟಪಡಿಸಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, ಎನ್ಡಿಎ ಜೊತೆ ಜೆಡಿಎಸ್ ಒಪ್ಪಂದ ಎನ್ನೋ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಪಕ್ಷದ ಜೊತೆ ವಿಲೀನವಾಗಲೀ, ಹೊಂದಾಣಿಕೆಯಾಗಲೀ ಇಲ್ಲಾ ಎಂದು ಹೇಳಿದರು.
ಮೋದಿಯವರೇ ಬಡವರ ಬಗ್ಗೆ ನೀವು ಮಾತಾಡ್ತೀರಲ್ಲಾ ಸ್ವಾಮೀ, ನೋಡಿ ನಿಮ್ಮ ರಾಷ್ಟ್ರೀಕೃತ ಬ್ಯಾಂಕ್ ಗಳವರು ರೈತರನ್ನು ಅಲೆಸುತ್ತಿದ್ದಾರೆ. ಸರ್ಕಾರಿ ಸ್ಕೀಮ್ ಗಳಲ್ಲಿ ಲೋನ್ ಕೊಡ್ತಿಲ್ಲಾ ಎಂದು ವಾಗ್ದಾಳಿ ನಡೆಸಿದರು. ಆರು ತಿಂಗಳು ಜನರನ್ನು ಅಲೆಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ವಿರುದ್ಧ ಎಚ್.ಡಿ.ರೇವಣ್ಣ ಕಿಡಿಕಾರಿದರು.
ಈಗಾಗಲೇ ಗ್ರಾಮ ಪಂಚಾಯಿತಿ ಚುನಾವಣೆ ಮುಗಿದಿದ್ದು, ಈಗ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲಾತಿ ವಿಚಾರವಾಗಿ ಜಿಲ್ಲಾಧಿಕಾರಿಗಳಿಗೆ ಒತ್ತಡ ಹಾಕಿರುವ ಆಡಿಯೋ ನಮ್ಮ ಬಳಿ ಇದ್ದು, ಬಿಜೆಪಿ ಕೈಗೊಂಬೆಯಾಗಿ ಚುನಾವಣೆ ಆಯೋಗ ಕೆಲಸ ಮಾಡುತ್ತಿದೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಗಂಭೀರವಾಗಿ ಆರೋಪಿಸಿದರು.
ಪಂಚಾಯತ್ ರಾಜ್ ಆಕ್ಟ್ ಪ್ರಕಾರ ಚುನಾವಣೆಗೂ ಮುನ್ನ ಅಧ್ಯಕ್ಷ- ಉಪಾಧ್ಯಕ್ಷ ಮೀಸಲಾತಿ ನಿಗದಿಪಡಿಸಬೇಕು. ಆದರೆ ಚುನಾವಣಾ ಆಯೋಗ ಬಿಜೆಪಿ ಕೈಗೊಂಬೆಯಾಗಿದೆ. ಈ ರಾಜ್ಯದಲ್ಲಿ ಚುನಾವಣೆ ಆಯೋಗ ಸತ್ತು ಹೋಗಿದ್ದು, ಗ್ರಾ.ಪಂ. ಚುನಾವಣೆ ಮುಗಿದ ಮೇಲೆ ಕೆಲ ಬಿಜೆಪಿ ಮುಖಂಡರು ಜಿಲ್ಲಾಧಿಕಾರಿ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಗೌಪ್ಯವಾಗಿ 2 ಗಂಟೆಗಳ ಕಾಲ ಸಭೆ ಮಾಡಿದ್ದಾರೆ. ಕೆಲ ಬಿಜೆಪಿ ನಾಯಕರು ತಮಗೆ ಬೇಕಾದ ಹಾಗೆ ಮೀಸಲಾತಿ ನಿಗದಿ ಮಾಡಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಇದನ್ನು ಓದಿ: ರಾಯಚೂರಿನಲ್ಲಿ ಎಸ್ಟಿ ಸಮಾವೇಶ; ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ
ಜಿಲ್ಲಾಧಿಕಾರಿಗಳ ಜೊತೆ ಕೆಲ ಬಿಜೆಪಿ ನಾಯಕರು ಫೋನ್ನಲ್ಲಿ ಮಾತನಾಡಿರೋ ಆಡಿಯೋ ಇದ್ದು, ಬೇಕಾದ ಸಮಯದಲ್ಲಿ ಬಿಡುಗಡೆ ಮಾಡುತ್ತೇನೆ. ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿಯನ್ನು ಕಾನೂನು ಬದ್ದವಾಗಿ ಪ್ರಕಟ ಮಾಡಬೇಕು. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಕೆಲವು ಪಂಚಾಯ್ತಿಗಳ ಚುನಾವಣೆ ಮಾಡಿರುವುದಿಲ್ಲ. ಒಂದು ಪಕ್ಷದ ಹಿಡಿತಕ್ಕೆ ತೆಗೆದುಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಇದನ್ನೆಲ್ಲಾ ನೋಡಿಕೊಂಡು ಸುಮ್ಮನೆ ಕೂರುವುದಿಲ್ಲ. ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಲು ಮುಂದಾಗುತ್ತೇವೆ. ಅಲ್ಲದೇ ಕೆಲವು ಅಧಿಕಾರಿಗಳ ವಿರುದ್ದ ಕೋರ್ಟ್ ಮೊರೆ ಹೋಗುತ್ತೇವೆ. ಕೆಲವು ಅಧಿಕಾರಿಗಳು ಮುಂದಿನ ದಿನಗಳಲ್ಲಿ ಜೈಲಿಗೆ ಹೋಗುತ್ತಾರೆ ಎಂದು ಎಚ್ಚರಿಸಿದರು.
ವರದಿ - ಡಿಎಂಜಿ ಹಳ್ಳಿಅಶೋಕ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ