ಗದಗ(ಜು.12): ಅಂತರ್ಜಾತಿ ವಿವಾಹಕ್ಕೆ ಬಹಳ ಹಿಂದಿನಿಂದಲೂ ವಿರೋಧವಿದೆ. ಈಗಲೂ ಸಹ ತಮ್ಮ ಮಕ್ಕಳು ಬೇರೆ ಜಾತಿಯ ಹುಡುಗ-ಹುಡುಗಿಯನ್ನು ಮದುವೆಯಾಗುವುದಕ್ಕೆ ಪೋಷಕರು ಬಿಡುವುದಿಲ್ಲ. ಒಂದು ವೇಳೆ ತಂದೆ-ತಾಯಿಯ ಇಷ್ಟಕ್ಕೆ ವಿರುದ್ಧವಾಗಿ ಮದುವೆ ನಡೆದರೆ ಅಲ್ಲಿ ಹಲ್ಲೆ, ಕೊಲೆ, ಜಗಳಗಳೇ ಸಂಭವಿಸುತ್ತವೆ. ಇನ್ನು ಕೆಲವು ಸಲ ಮರ್ಯಾದಾ ಹತ್ಯೆಗಳೇ ನಡೆದು ಹೋಗುತ್ತವೆ. ಈ ರೀತಿಯ ಘಟನೆಗೆ ಗದಗದ ದಂಪತಿ ಸಾಕ್ಷಿಯಾಗಿದ್ದಾರೆ. ಅಂತರ್ಜಾತಿ ವಿವಾಹವಾಗಿ ಸುಮಾರು 28 ವರ್ಷಗಳು ಕಳೆದ ಬಳಿಕ, ಗಂಡನ ಸಂಬಂಧಿಕರು ದಂಪತಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸುವುದಲ್ಲದೇ, ಅವರ ಮೇಲೆ ಮೂತ್ರ ವಿಸರ್ಜಿಸಿದ್ದಾರೆ. ಜೊತೆಗೆ ಮಹಿಳೆಯ ಸೀರೆ ಎಳೆದು ಅಪಮಾನ ಮಾಡಿದ್ದಾರೆ.
ಗಂಡ ಮೇಲ್ಜಾತಿಗೆ ಸೇರಿದವನಾಗಿದ್ದರೆ, ಹೆಂಡತಿ ಪರಿಶಿಷ್ಟ ಪಂಗಡವಾದ ವಾಲ್ಮೀಕಿ ಸಮುದಾಯಕ್ಕೆ ಸೇರಿದವಳಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂತಹ ಹೀನ ಕೃತ್ಯ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.
ಈ ಘಟನೆ ಜುಲೈ 8ರಂದು ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ ನಡೆದಿದೆ. ದಂಪತಿ ಮದುವೆಯಾಗಿ 28 ವರ್ಷಗಳಾದ ಬಳಿಕ, ಗಂಡನ ಸಂಬಂಧಿಕರು ಜಗಳ ಶುರು ಮಾಡಿದ್ದಾರೆ. ಗಂಡ-ಹೆಂಡತಿ ಮೇಲೆ ಹಲ್ಲೆ ನಡೆಸಿ, ಅವರ ಮೇಲೆ ಮೂತ್ರವನ್ನು ವಿಸರ್ಜಿಸಿದ್ದಾರೆ. ಜುಲೈ 9ರಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ(ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ:Sumalatha v/s HDK: ಸಂಸದೆ ಸುಮಲತಾ ಬಳಿಕ ಅಕ್ರಮ ಕ್ವಾರೆಗಳ ಮೇಲೆ ಅಧಿಕಾರಿಗಳ ದಾಳಿ; 12 ಅಕ್ರಮ ಕ್ರಷರ್ಗಳಿಗೆ ಬೀಗ
ಈ ಘಟನೆಯು ರಾಜ್ಯದ ತಳಸಮುದಾಯಗಳ ವಿರುದ್ಧದ ದೌರ್ಜನ್ಯದ ತೀವ್ರ ಏರಿಕೆಯನ್ನು ಎತ್ತಿ ತೋರಿಸಿದೆ. 2020 ರ ಏಪ್ರಿಲ್ 1 ರಿಂದ 2021 ರ ಮಾರ್ಚ್ 31 ರವರೆಗೆ ಕರ್ನಾಟಕದಲ್ಲಿ ಎಸ್ಸಿ / ಎಸ್ಟಿ ಸಮುದಾಯದವರ ವಿರುದ್ಧ 2,327 ಕೊಲೆ, ಶೋಷಣೆ ಮತ್ತು ಇತರ ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯ ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.
ಇದು ಹಿಂದಿನ ವರ್ಷಕ್ಕಿಂತ ಶೇ.54 ಕ್ಕಿಂತ ಹೆಚ್ಚಾಗಿದೆ. ಇದರಲ್ಲಿ ಒಟ್ಟು 1,504 ಪ್ರಕರಣಗಳು ದಾಖಲಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಅಂಕಿ ಅಂಶಗಳು ತಿಳಿಸಿವೆ. ಈ ಪ್ರಕರಣಗಳಲ್ಲಿ ಸಮುದಾಯದ ಜನರ ವಿರುದ್ಧ ಕೊಲೆ, ಶೋಷಣೆ, ಸುಟ್ಟಗಾಯಗಳು ಮತ್ತು ಇತರ ಅಪರಾಧಗಳು ಸೇರಿವೆ.
ಕಳೆದ ತಿಂಗಳಲ್ಲಿ, ಕರ್ನಾಟಕದಲ್ಲಿ ಮೂರು ‘ಮರ್ಯಾದಾ ಹತ್ಯೆ‘ ಪ್ರಕರಣಗಳು ಸಂಭವಿಸಿವೆ. ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲ್ಲೂಕಿನ ಸಾಲದಹಳ್ಳಿ ಗ್ರಾಮದಲ್ಲಿ ಅಂತರ್ಜಾತಿ ವಿವಾಹವಾಗಿದ್ದ ದಲಿತ ಹುಡುಗ ಮತ್ತು ಮುಸ್ಲಿಂ ಹುಡುಗಿಯನ್ನು ಜೂನ್ 24ರಂದು ಯುವತಿಯ ಕುಟುಂಬದವರೇ ಹತ್ಯೆ ಮಾಡಿದ್ದಾರೆ. ಕಲ್ಲುಗಳಿಂದ ತಲೆಗೆ ಹೊಡೆದು ಸಾಯಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಇದನ್ನೂ ಓದಿ:Gold Price Today: ಚಿನ್ನ ಕೊಳ್ಳುವವರಿಗೆ ಸಿಹಿ ಸುದ್ದಿ; ಇಂದು ಬೆಲೆ ಏರಿಕೆಯಾಗಿಲ್ಲ ನೋಡಿ..!
ಮತ್ತೊಂದು ಪ್ರಕರಣದಲ್ಲಿ, ಕೊಪ್ಪಳ ಜಿಲ್ಲೆಯ ಬರಗೂರು ಗ್ರಾಮದಲ್ಲಿ ಮಾದಿಗ ಸಮುದಾಯಕ್ಕೆ ಸೇರಿದ ಯುವಕನನ್ನು ಕುರುಬ ಸಮುದಾಯಕ್ಕೆ ಸೇರಿದ ಯುವತಿಯ ಕುಟುಂಬದವರು ಕೊಲೆ ಮಾಡಿದ್ದಾರೆ. ಇಬ್ಬರೂ ಸಹ ಪ್ರೀತಿ ಮಾಡುತ್ತಿದ್ದ ವಿಷಯ ತಿಳಿದ ಯುವತಿಯ ಪೋಷಕರು ಈ ಕೃತ್ಯ ಎಸಗಿದ್ದಾರೆ. ಈ ಸಂಬಂಧ ದಲಿತರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಜುಲೈ 19ರಂದು ಕೊಪ್ಪಳ ಜಿಲ್ಲೆಯಲ್ಲಿ ಕಾರ್ಯಕರ್ತರು ರ್ಯಾಲಿ ನಡೆಸಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ