ಚಿತ್ರದುರ್ಗ: ಕಳೆದ ಒಂದೂವರೆ ವರ್ಷದಿಂದ ಇಡೀ ದೇಶವನ್ನೇ ತಲ್ಲಣಗೊಳಿಸಿರುವ ಕೊರೋನಾ ಸೋಂಕು (Coronavirus) ತಗ್ಗಿದ ಬೆನ್ನಲ್ಲೆ ಚಿತ್ರದುರ್ಗ ಜಿಲ್ಲೆಯಲ್ಲಿ (Chitradurga District) ಸಾಂಕ್ರಾಮಿಕ ರೋಗ (Pandemic) ದಾಳಿ ಇಡುವ ಲಕ್ಷಣ ದಟ್ಟವಾಗಿ ಗೋಚರಿಸುತ್ತಿದೆ. ಇದ್ದಕ್ಕಿದ್ದಂತೆ ಜಿಲ್ಲೆಯ ಮಕ್ಕಳಲ್ಲಿ ಕೆಮ್ಮು, ನೆಗಡಿ, ಶೀತ, ಉಸಿರಾಟದ ತೊಂದರೆಯಂತಹ ಹಲವು ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ. ಅಷ್ಟೆ ಅಲ್ಲದೇ ಚಿಕಿತ್ಸೆಗಾಗಿ ಆಸ್ಪತ್ರೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆಯೂ ಹೆಚ್ಚುತ್ತಿದ್ದು ಸಾರ್ವಜನಿಕರು ಹಾಗೂ ಪೋಷಕರಲ್ಲಿ ಆತಂಕದ ವಾತಾವರಣ ಉಂಟಾಗಿದೆ.
ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಕೊರೋನಾ ರಣಕೇಕೆ ಜಿಲ್ಲೆಯ ಜನರ ಜೀವನದುದ್ದಕ್ಕೂ ಮರೆಯದಂತಹ ಕಹಿ ನೆನಪುಗಳ ನೀಡಿ ನೂರಾರು ಕುಟುಂಬಗಳು ಕಷ್ಟದ ಕಣ್ಣೀರಲ್ಲಿಯೇ ಕೈ ತೊಳೆಯುವಂತೆ ಮಾಡಿದೆ. ಅಂತಹ ಮಹಾಮಾರಿ ಕೊರೋನಾ ಸೋಂಕು ತಗ್ಗುತ್ತಿರುವ ಬೆನ್ನಲ್ಲಿ ಚಿತ್ರದುರ್ಗ ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿದ್ದು, ಹಲವು ಲಕ್ಷಣಗಳುಳ್ಳ ಸಾಂಕ್ರಾಮಿಕ ರೋಗ ಕಂಡು ಬಂದಿದೆ. ಇದರಿಂದ ಚಿತ್ರದುರ್ಗ ಜಿಲ್ಲಾಸ್ಪತ್ರೆ ಮಕ್ಕಳ ವಾರ್ಡ್ ಭರ್ತಿಯಾಗಿದ್ದು, ಆಸ್ಪತ್ರೆ ವಾರ್ಡ್ಗಳಲ್ಲಿ ಬೆಡ್ಗಳ ಕೊರತೆ ಎದುರಾಗಿದೆ. ಇದರಿಂದ ಆಸ್ಪತ್ರೆಗೆ ಮಕ್ಕಳಿಗೆ ನೆಲದ ಮೇಲೆಯೇ ಬೆಡ್ಗಳ ವ್ಯವಸ್ಥೆ ಕಲ್ಪಿಸಿ ಪೋಷಕರ ಸಮ್ಮುಖದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ ಬೆಡ್ಗಳ ಕೊರತೆ ನೀಗಿಸಿ ಪರ್ಯಾಯ ವಾರ್ಡ್ ವ್ಯವಸ್ಥೆ ಕಲ್ಪಿಸದೆ ಆಸ್ಪತ್ರೆ ಆಡಳಿತ ಹಾಗೂ ಸಿಬ್ಬಂದಿ ನಿರ್ಲಕ್ಷ ವಹಿದ್ದಾರೆ. ಇದರಿಂದ ಜಿಲ್ಲಾ ಆರೋಗ್ಯ ಇಲಾಖೆ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಕಳೆದ ಕೋವಿಡ್ ಸಂದರ್ಭದಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ವೇದಾಂತ ಮೈನಿಂಗ್ ಕಂಪನಿಯವರು ನಿರ್ಮಿಸಿರುವ ತಾತ್ಕಾಲಿಕ ಕೋವಿಡ್ ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಬಹುದಿತ್ತು. ಆದರೆ ಅದು ಖಾಲಿ ಇದ್ದರೂ ಆರೋಗ್ಯ ಇಲಾಖೆ ಅಧಿಕಾರಿಗಳು ಕಂಡು ಕಾಣದಂತೆ ಇದ್ದಾರೆ ಅನ್ನೋ ಆರೋಪ ಮಾಡಿದ್ದಾರೆ.
ಇನ್ನೂ ಜಿಲ್ಲೆಯ ಮಕ್ಕಳಲ್ಲಿ ಹೆಚ್ಚುತ್ತಿರುವ ಸಾಂಕ್ರಾಮಿಕ ರೋಗ, ಮುನ್ನೆಚ್ಚರಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಂಗನಾಥ್, ಜಿಲ್ಲೆಯಲ್ಲಿ ಕಳೆದ ತಿಂಗಳಿನಿಂದ ಈವರೆಗೆ 215 ಮಕ್ಕಳಲ್ಲಿ ಕಂಡುಬಂದ ILI ಪಕ್ರರಣ ದಾಖಲಿಸಿದ್ದೆವು. ಅದರಲ್ಲಿ 205 ಜಿಲ್ಲಾ ಆಸ್ಪತ್ರೆಯಲ್ಲಿ, 10 ಪ್ರಕರಣ ಹೊಸದುರ್ಗ ತಾಲ್ಲೂಕು ಆಸ್ಪತ್ರೆಯಲ್ಲಿ ದಾಖಲಾಗಿವೆ. ಇವರಿಗೆ ಕೋವಿಡ್ RTPCR ಪರೀಕ್ಷೆ ಮಾಡಿದ್ದು, ನೆಗಟಿವ್ ವರದಿ ಬಂದಿದೆ. ಆದರೆ ಇವರಿಗೆ ನೆಗಡಿ, ಕೆಮ್ಮು, ಜ್ವರ ಲಕ್ಷಣಗಳು ಇದೆ. ಶ್ವಾಸಕೋಶದ ರೋಗ ಲಕ್ಷಣಗಳು ಬೇರೆ ವೈರಾಣು ಇರಬಹುದು ಎಂದು ಬೆಂಗಳೂರಿನ NIV ಲ್ಯಾಬ್ ಗೆ ಪರೀಕ್ಷೆಗಾಗಿ ಸ್ಯಾಂಪಲ್ ಕಳಿಸಿದ್ದೇವೆ. ವರದಿ ಬಂದ ಬಳಿಕ ಅವರಿಗೆ ಹೆಚಿನ ಚಿಕಿತ್ಸೆ ಅವಶ್ಯಕತೆ ತಿಳಿದು ಕ್ರಮ ವಹಿಸುತ್ತೇವೆ ಎಂದು ಹೇಳಿದ್ದಾರೆ.
ಒಟ್ಟಾರೆ ಕೊರೋನಾ ಸೋಂಕು ಕಡಿಮೆಯಾದ ಬಳಿಕ ಕೊಂಚ ನಿಟ್ಟುಸಿರು ಬಿಟ್ಟಿದ್ದ ಜಿಲ್ಲೆ ಜನರಿಗೆ ಮತ್ತೆ ಸಾಂಕ್ರಾಮಿಕ ರೋಗಗಳ ಭಯ ಕಾಡ ತೊಡಗಿದೆ. ಇದರಿಂದ ಮಕ್ಕಳನ್ನು ರಕ್ಷಿಸಿಕೊಳ್ಳುವ ದಾವಂತದಿಂದ ಪೋಷಕರಲ್ಲಿ ಆತಂಕ ಮೂಡಿದೆ. ಇದನ್ನರಿತ ಜಿಲ್ಲಾಡಳಿತ ಆರೋಗ್ಯ ಇಲಾಖೆ ತ್ವರಿತವಾಗಿ ವರದಿ ತರಿಸಿಕೊಂಡು ಸಾಂಕ್ರಾಮಿಕ ರೋಗಗಳ ತಡೆಗೆ ಕ್ರಮ ವಹಿಸಬೇಕು. ಅಲ್ಲದೇ ಸರ್ಕಾರವೂ ಕೂಡ ಇತ್ತ ಗಮನ ಹರಿಸಿ ಎಚ್ಚೆತ್ತು ಮಕ್ಕಳ ಆರೋಗ್ಯ ರಕ್ಷಣಾ ಕಾರ್ಯ ಮಾಡಬೇಕಿದೆ.
ಇದನ್ನು ಓದಿ: Kodagu: ಕೊಡಗು ಜಿಲ್ಲೆಯ ಚೆಂಬು ಗ್ರಾಮ ಪಂಚಾಯಿತಿ ಸದಸ್ಯೆ ಹತ್ಯೆಗೈದು ಕೊನೆಗೆ ತಾನು ನೇಣಿಗೆ ಶರಣಾದ ವ್ಯಕ್ತಿ
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
ವರದಿ : ವಿನಾಯಕ ತೊಡರನಾಳ್ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ