ಮಂಡ್ಯ: ಇಲ್ಲಿಯ ಕೆ.ಆರ್. ಪೇಟೆ ಪಟ್ಟಣದಲ್ಲಿ ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆದಿದೆ. ಪಟ್ಟಣದ ಹೃದಯ ಭಾಗದಲ್ಲಿದ್ದ ಅನಧಿಕೃತ ಕಟ್ಟಡಗಳ ತೆರವಿಗಾಗಿ ತಾಲೂಕು ಆಡಳಿತ ಹಾಗೂ ಪುರಸಭೆಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ಮೂಲಕ ಮಾಜಿ ಶಾಸಕನ ಸಹೋದರರಿಗೆ ಸೇರಿದ ಅಕ್ರಮ ಕಟ್ಟಡಗಳು, ಸೇರಿದಂತೆ ಅನಧಿಕೃತ ಮಳಿಗೆಗಳನ್ನು ಜೆಸಿಬಿ ಯಂತ್ರಗಳ ಮೂಲಕ ಕೆಳಗುರುಳಿಸಿದ್ದಾರೆ.
ಕೆ.ಆರ್. ಪೇಟೆ ಪಟ್ಟಣದಲ್ಲಿ ಶನಿವಾರ ಬೆಳ್ಳಂಬೆಳಿಗ್ಗೆ ನಡೆದ ಜೆಸಿಬಿಗಳ ಘರ್ಜನೆಗೆ ಪಟ್ಟಣದ ಜನರು ಬೆಚ್ಚಿ ಬಿದ್ದರು. ಅದ್ರಲ್ಲೂ ಕ್ಷೇತ್ರದ ಮಾಜಿ ಶಾಸಕ ಕೆಬಿ ಚಂದ್ರಶೇಖರ್ ಅವರಿಗೆ ಇದು ದೊಡ್ಡ ಶಾಕ್ ನೀಡಿತ್ತು. ಚಂದ್ರಶೇಖರ್ ಅವರ ಸಹೋದರರಿಗೆ ಸೇರಿದ ಮೂರಂತಸ್ತಿನ ಅಕ್ರಮ ಕಟ್ಟಡ ಹಾಗೂ ಅನಧಿಕೃತ ಮಳಿಗೆಗಳನ್ನು ಜೆಸಿಬಿ ಯಂತ್ರದ ಮೂಲಕ ನೆಲಸಮಗೊಳಿಸುವ ಕಾರ್ಯದಲ್ಲಿ ತಾಲೂಕು ಆಡಳಿತದ ಅಧಿಕಾರಿಗಳು ಮುಂದಾದರು. ತಡರಾತ್ರಿಯೇ ತಾಲೂಕು ಆಡ ಳಿತದ ತಹಶೀಲ್ದಾರ್ ಶಿವಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಸತೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಂಡು ಇದಕ್ಕಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಪಡೆದು ಅನಧಿಕೃತ ಅಕ್ರಮ ಕಟ್ಟಡವನ್ನು ನೆಲಸಮಗೊಳಿದ್ದಾರೆ.
ಇದನ್ನೂ ಓದಿ: ಕೇಂದ್ರದ ಬಳಿ ಜಿಎಸ್ಟಿ, ನೆರೆ ಪರಿಹಾರ ಕೇಳುವ ಗುಂಡಿಗೆ ಸಿಎಂಗೂ ಇಲ್ಲ, ಸಂಸದರಿಗೂ ಇಲ್ಲ; ಸಿದ್ದರಾಮಯ್ಯ ಆಕ್ರೋಶ
ಇನ್ನು, ಪಟ್ಟಣದಲ್ಲಿ ತಮಗೆ ಸೇರಿದ ಈ ಜಾಗದಲ್ಲಿದ್ದ ಕಟ್ಟಡ ಹಾಗೂ ಅಂಗಡಿ ಮಳಿಗೆಗಳನ್ನು ತಾಲೂಕು ಆಡಳಿತದ ಅಧಿಕಾರಿಗಳ ಮಾತಿನಿಂದ ಜಿಲ್ಲಾಡಳಿತ ನೆಲಸಮದ ಆದೇಶ ನೀಡಿದೆ. ಇದು ದೌರ್ಜನ್ಯದಿಂದ ನಡೆದ ಕೆಲಸವಾಗಿದೆ. ಇದಕ್ಕೆ ಈ ಕ್ಷೇತ್ರದ ಶಾಸಕನ ಕುಮ್ಮಕ್ಕಿದೆ ಎಂದು ಮಾಜಿ ಶಾಸಕ KB ಚಂದ್ರಶೇಖರ್ ಆರೋಪಿಸಿ, ಸಚಿವ ನಾರಾಯಣಗೌಡ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ರಾತ್ರೋ ರಾತ್ರಿ ಪಟ್ಟಣದಲ್ಲಿ ನಿಷೇಧಾಜ್ಞೆ ಹೇರಿ ರಾತ್ರಿ ವೇಳೆ ಸರ್ವೇ ಕಾರ್ಯಾಚರಣೆ ಮಾಡ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಜಾಗದ ಮೇಲೆ ಹೈಕೋರ್ಟ್ನಲ್ಲಿ ಪ್ರಕರಣವಿದ್ದು, ತಡೆಯಾಜ್ಞೆ ಕೂಡ ಇದೆ. ಇಷ್ಟಿದ್ದರೂ ಅಕ್ರಮವಾಗಿ ದೌರ್ಜನ್ಯದಿಂದ ನನಗೆ ಸೇರಿದ ಜಾಗದಲ್ಲಿದ್ದ ಕಟ್ಟಡ ಒಡೆದು ಹಾಕಿದ್ದಾರೆ ಎಂದು ಮಾಜಿ ಶಾಸಕನ ಸಹೋದರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ, ಕೆ.ಆರ್.ಪೇಟೆಯಲ್ಲಿ ಮಾಜಿ ಶಾಸಕನ ಸಹೋದರರಿಗೆ ಸೇರಿದ ಅನಧಿಕೃತ ಕಟ್ಟಡ ತೆರವಿಗೆ ತಾಲೂಕು ಆಡಳಿತ ನಿಷೇಧಾಜ್ಞೆ ಮೂಲಕ ಅಕ್ರಮ ಕಟ್ವಡದ ತೆರವು ಕಾರ್ಯಾಚರಣೆ ನಡೆಸಿದ ಕ್ರಮವನ್ನು ಬಹಳಷ್ಟು ಸಾರ್ವಜನಿಕರು ಸ್ವಾಗತಿಸಿದ್ದಾರೆ.
ವರದಿ: ರಾಘವೇಂದ್ರ ಗಂಜಾಮ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ