news18-kannada Updated:October 6, 2020, 9:02 PM IST
ಸಚಿವ ಜಗದೀಶ್ ಶೆಟ್ಟರ್
ಹುಬ್ಬಳ್ಳಿ (ಅಕ್ಟೋಬರ್. 06): ಮಾಜಿ ಸಚಿವ ವಿನಯ್ ಕುಲಕರ್ಣಿ ಬಿಜೆಪಿ ಸೇರ್ಪಡೆಗೆ ಯತ್ನಿಸುತ್ತಿರುವ ವಿಚಾರದ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಮ್ಮನ್ನು ಯಾರೂ ಸಂಪರ್ಕಿಸಿಲ್ಲ, ನಾವೂ ಯಾರನ್ನೂ ಸಂಪರ್ಕಿಸಿಲ್ಲ ಎಂದಿದ್ದಾರೆ. ವಿನಯ್ ಕುಲಕರ್ಣಿ ನಮ್ಮ ಪಕ್ಷಕ್ಕೆ ಸೇರುತ್ತಾರೋ, ಬಿಡುತ್ತಾರೋ ಏನೂ ಗೊತ್ತಿಲ್ಲ. ನಮ್ಮ ವರಿಷ್ಠರು ಕೂಡ ಈ ಬಗ್ಗೆ ನಮ್ಮ ಜೊತೆ ಚರ್ಚಿಸಿಲ್ಲ. ವಿನಯ್ ಕುಲಕರ್ಣಿ ಅಥವಾ ಅವರ ಪರವಾಗಿ ಯಾರೂ ಕೂಡ ಇದುವರೆಗೂ ಮಾತನಾಡಿಲ್ಲ. ಅವರ ಕಡೆಯಿಂದ ಹೇಳಿಕೆಗಳು ಬಂದರೆ ಪ್ರತಿಕ್ರಿಯೆ ಕೊಡುತ್ತೇನೆ ಎಂದು ತಿಳಿಸಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೇಶ್ ಗೌಡ ಕೊಲೆ ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ಸಂಸ್ಥೆ (ಸಿಬಿಐ)ಯು ತೀವ್ರಗೊಳಿಸಿರುವುದು ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಸೇರಬಯಸಲು ಪ್ರಮುಖ ಕಾರಣ. ಈ ನಿಟ್ಟಿನಲ್ಲಿ ಎರಡು ತಿಂಗಳಿಂದ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದುಬಂದಿದೆ
ಡಿ.ಕೆ. ಶಿವಕುಮಾರ್ ನಾಟಕ ಮಾಡುವುದನ್ನು ಬಿಡಬೇಕು :ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ತಪ್ಪು ಮಾಡದಿದ್ದರೆ ಯಾರಿಗೂ ಹೆದರಬೇಕಿಲ್ಲ. ಲೆಕ್ಕಪತ್ರ ಸರಿಯಿದ್ದರೆ ಸಿಬಿಐಗೆ ದಾಖಲೆಗಳನ್ನು ಕೊಡಲಿ. ಸಿಬಿಐ ಸ್ವತಂತ್ರ ಸಂಸ್ಥೆ, ಸುಮ್ಮಸುಮ್ಮನೆ ಯಾರ ಮನೆಯ ಮೇಲೂ ದಾಳಿ ನಡೆಸಲ್ಲ. ಸಿಬಿಐನವರು ಎರಡು ಮೂರು ತಿಂಗಳು ದಾಖಲೆ ಕಲೆಹಾಕಿ, ಪೂರ್ವ ಸಿದ್ಧತೆಗಳೊಂದಿಗೆ ದಾಳಿ ಮಾಡುತ್ತಾರೆ.
ಯುಪಿಎ ಸರ್ಕಾರವಿದ್ದಾಗ ಆಂಧ್ರ ಪ್ರದೇಶದಲ್ಲಿ ಜಗನ್ಮೋಹನ್ ರೆಡ್ಡಿಯವರನ್ನು ಜೈಲಲ್ಲಿ ಇಟ್ಟಿದ್ದರು. ಕೇಂದ್ರ ಸಚಿವ ಅಮಿತ್ ಷಾ ಮೇಲೆ ಸುಳ್ಳು ಕೇಸ್ ಹಾಕಿದ್ದರು. ಆಗ ನಾವು ದೇಶದ ತುಂಬಾ ಹೋರಾಟ, ಪ್ರತಿಭನೆ ಮಾಡಿರಲಿಲ್ಲ. ಅಮಿತ್ ಷಾ ಕಾನೂನು ಹೋರಾಟ ನಡೆಸಿದರು. ಈಗ ದೇಶದ ಗೃಹ ಮಂತ್ರಿ ಆಗಿದ್ದಾರೆ ಎಂದರು.
ಇದನ್ನೂ ಓದಿ :
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಸ್ತಿ ವಿವರ ಬಹಿರಂಗ ಪಡಿಸಲಿ ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸವಾಲ್
ಕಾಂಗ್ರೆಸ್ನವರು ದೇಶ ಲೂಟಿ ಮಾಡಿದರು, ಈಗ ಒಂದೊಂದೆ ಪ್ರಕರಣಗಳು ಹೊರಗೆ ಬರುತ್ತಿವೆ. ಡಿಕೆ ಶಿವಕುಮಾರ್ ಕಾನೂನು ಹೋರಾಟ ಮಾಡಲಿ, ಸಂಪಾದನೆ ಕುರಿತು ದಾಖಲೆಗಳನ್ನು ಕೊಡಲಿ. ತಪ್ಪಿಲ್ಲದಿದ್ದರೆ ಆರೋಪ ಮುಕ್ತರಾಗಿ ಹೊರಗೆ ಬರಲಿ. ಬೆಳಗ್ಗೆಯಿಂದ ಸಂಜೆಯವರೆಗೆ ರಾಜಕೀಯ ಪ್ರೇರಿತ ಅಂದ್ರೆ ಜನರು ನಂಬಲ್ಲಾ ಎಂದು ತಿಳಿಸಿದರು.
ಡಿಕೆ ಶಿವಕುಮಾರ್ ಬಂಧನ ಮಾಡಿಸಿದ್ರೆ ನಾವು ಉಪ ಚುನಾವಣೆಯಲ್ಲಿ ಗೆಲ್ಲುತ್ತೇವಾ? ಈ ಹಿಂದೆ ಹನ್ನೆರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಗೆದ್ದಿದ್ದೇವೆ. ಆಗ ಡಿಕೆ ಶಿವಕುಮಾರ್ ಹೊರಗೆ ಇದ್ದರು. ಜನರ ಆಶಿರ್ವಾದದಿಂದ ಬಿಜೆಪಿಗೆ ಗೆಲುವಾಗಿದೆ. ಉಪಚುನಾವಣೆ ಹಾಗೂ ರಾಜಕೀಯ ಪ್ರೇರಿತವಾಗಿ ಸಿಬಿಐ ದಾಳಿ ನಡೆದಿದೆ ಎನ್ನುವುದೆಲ್ಲಾ ಸುಳ್ಳು. ಡಿ.ಕೆ. ಶಿವಕುಮಾರ್ ನಾಟಕ ಮಾಡುವುದನ್ನು ಬಿಡಬೇಕು ಎಂದು ಸಚಿವ ಜಗದೀಶ್ ಶೆಟ್ಟರ್ ಕಿಡಿ ಕಾರಿದ್ದಾರೆ.
Published by:
G Hareeshkumar
First published:
October 6, 2020, 9:02 PM IST