news18-kannada Updated:December 5, 2020, 7:21 PM IST
ಬಸವರಾಜ್ ಹೊರಟ್ಟಿ
ಧಾರವಾಡ: ಸಿದ್ದರಾಮಯ್ಯ ಜೆಡಿಎಸ್ ಮುಗಿಸುವ ಹೇಳಿಕೆ ನೀಡಿದ್ದರಿಂದ ಕಾಂಗ್ರೆಸ್ ಜತೆ ಮೈತ್ರಿ ಬೇಡ ಅಂತಾ ಕುಮಾರಸ್ವಾಮಿಗೆ ಸಲಹೆ ನೀಡಿದ್ದೆ. ಇಬ್ಬರು ಸಮನ್ವಯದಿಂದ ಹೋಗಬೇಕಿತ್ತು. ಆದರೆ, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಕುಳಿತು ಮಾತನಾಡಲೇ ಇಲ್ಲವೆಂದು ಪರಿಷತ್ ಸದಸ್ಯ ಹಾಗೂ ಜೆಡಿಎಸ್ ಹಿರಿಯ ನಾಯಕ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮನ್ವಯದ ಕೊರತೆಯಿಂದ ಮೈತ್ರಿ ಸರ್ಕಾರ ಅಧಿಕಾರ ಕಳೆದುಕೊಳ್ಳುವ ಸ್ಥಿತಿ ಬಂತು. ಇದು ಒತ್ತಾಯದ ಮದುವೆ ಆದಂತಾಯಿತು. ಲೋಕಸಭಾ ಚುನಾವಣೆಯಲ್ಲಿ 8 ಸೀಟಿಗೆ ಬಿಜೆಪಿ ಆಫರ್ ನೀಡಿ, ಜತೆಗೆ ಎಚ್ಡಿಕೆಗೆ ಮುಖ್ಯಮಂತ್ರಿ ಆಗಿ ಮುಂದುವರೆಯುವ ಅವಕಾಶವಿದ್ದರೂ, ಕೈಚೆಲ್ಲಿ ಕುಳಿತರು ಎಂದು ಹೇಳಿದರು.
ಜಾತ್ಯತೀತ ನಿಲುವು ಹಿನ್ನೆಲೆಯಲ್ಲಿ ಎಚ್.ಡಿ.ದೇವೇಗೌಡರು ಬಿಜೆಪಿ ಜತೆ ಹೊಂದಾಣಿಕೆ ಬೇಡ ಅಂದಿದ್ದರು. ಗೌಡರು ಹೇಳಿಕೆಯಲ್ಲಿ ಆದರ್ಶವಿರುತ್ತದೆ. ಆದರೆ, ಇವರೆಲ್ಲ ಗೌಡರನ್ನೂ ಟೀಕಿಸುತ್ತಿದ್ದಾರೆ. ಜನವರಿಯಿಂದ ಬದಲಾವಣೆ ಎಂದು ಎಚ್ಡಿಕೆ ಹೇಳಿಕೆಯಲ್ಲೂ ಸತ್ಯವಿದೆ. ಕುಮಾರಸ್ವಾಮಿ ಎಲ್ಲವನ್ನು ತಿಳಿದುಕೊಂಡೇ ಮಾತನಾಡುತ್ತಾರೆಂದು ಹೇಳಿದರು.
ಇದನ್ನು ಓದಿ: ತೆರದಾಳ ಪ್ರಕರಣದ ಬಗ್ಗೆ ಸರ್ಕಾರ, ಬಿಜೆಪಿ ಮಹಿಳಾ ಸಂಘಟನೆಗಳ ಮೌನವೇಕೆ?: ಡಿ.ಕೆ. ಶಿವಕುಮಾರ್ ಪ್ರಶ್ನೆ
ಬಿಜೆಪಿಯಲ್ಲಿ 105 ಮತ್ತು 17 ರ ಮಧ್ಯೆ ತಿಕ್ಕಾಟ ನಡೆದಿದೆ. 17 ಜನ ಬಂದ ಮೇಲೆ ಸರ್ಕಾರ ರಚನೆಯಾಗಿದೆ. ಪಕ್ಷಕ್ಕೆ ಕರೆತರುವ ವೇಳೆ ಅವರಿಗೆ ನೀಡಿದ ಭರವಸೆ ಈಡೇರಿಸಲು ಅವರಿಗೆಲ್ಲ ಮಂತ್ರಿ ಸ್ಥಾನ ಕೊಡಬೇಕಾಗುತ್ತದೆ ಎಂದ ಅವರು, ವಿಶ್ವನಾಥರಿಂದ ಬಿಜೆಪಿ ಟೀಕೆ ವಿಚಾರಕ್ಕೆ ಉತ್ತರಿಸಿದ ಹೊರಟ್ಟಿ, ಅವರ ಆರೋಪ ಸಹಜವಾಗಿದೆ ಎಂದರು.
ಮೈತ್ರಿ ಸರ್ಕಾರ ರಚನೆ, ಪತನದ ವಿಷಯವಾಗಿ ಇಂದು ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದ ಎಚ್.ಡಿ.ಕುಮಾರಸ್ವಾಮಿ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪೂರ್ವ ಯೋಜಿತವಾಗಿ ರೂಪಿಸಿದ ಬಲೆಯಲ್ಲಿ ಬಿದ್ದು ನಾನು ಹಾಳಾದೆ. ನನ್ನ ಹೆಸರನ್ನು ಹಾಳು ಮಾಡುವ ಉದ್ದೇಶದಿಂದ ಸಿದ್ದರಾಮಯ್ಯ ಈ ನನ್ನನ್ನು ಟ್ರ್ಯಾಪ್ ಮಾಡಿದರು. ಇದಕ್ಕಾಗಿ ಅವರು ದೇವೇಗೌಡ ಅವರನ್ನು ಭಾವನಾತ್ಮಕವಾಗಿ ಬಳಸಿ, ನಮ್ಮ ಶಕ್ತಿ ಕುಂದುವಂತೆ ಮಾಡಿದರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ವರದಿ; ಮಂಜುನಾಥ ಯಡಳ್ಳಿ
Published by:
HR Ramesh
First published:
December 5, 2020, 7:21 PM IST