Huge Blast - ಶಿವಮೊಗ್ಗದಲ್ಲಿ ಭಾರೀ ಡೈನಮೈಟ್ ಸ್ಫೋಟ; 15ಕ್ಕೂ ಹೆಚ್ಚು ಮಂದಿ ದುರ್ಮರಣ
ಕಲ್ಲು ಕ್ವಾರಿ ಬಳಿ ಲಾರಿಯಲ್ಲಿ ಸಾಗಿಸಲಾಗುತ್ತಿದ್ದ ಜಿಲೆಟಿನ್ ಕಡ್ಡಿಗಳು ಸ್ಫೋಟಗೊಂಡು 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದ ಬಳಿ ಗುರುವಾರ ರಾತ್ರಿ 10:30ಕ್ಕೆ ಈ ಅನಾಹುತ ಸಂಭವಿಸಿದೆ.
ಬೆಂಗಳೂರು(ಜ. 22): ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದಲ್ಲಿ ನಿನ್ನೆ ರಾತ್ರಿ ಭಾರೀ ಜಿಲೆಟಿನ್ ಸ್ಫೋಟವಾದ ದುರ್ಘಟನೆ ಸಂಭವಿಸಿದೆ. ಕಲ್ಲು ಕ್ವಾರಿಯೊಂದರ ಬಳಿ ರಾತ್ರಿ 10:30ಕ್ಕೆ ಸಂಭವಿಸಿದೆ ಈ ಅವಘಡದಲ್ಲಿ 15ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವುದು ತಿಳಿದುಬಂದಿದೆ. ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ಭೂಮಿ ಕಂಪಿಸುವ ಮತ್ತು ಶಬ್ದ ಕೇಳುವ ಮಟ್ಟಕ್ಕೆ ಸ್ಫೋಟದ ತೀವ್ರತೆ ಇತ್ತು. ಜನರು ಭೂ ಕಂಪವಾಯಿತೆಂದು ಮನೆಯಿಂದ ಹೊರಗೋಡಿದ ಘಟನೆಗಳೂ ಹಲವೆಡೆ ವರದಿಯಾಗಿವೆ.
ಸ್ಫೋಟಗೊಂಡ ಜಿಲೆಟಿನ್ಗಳನ್ನ ಹೊತ್ತು ಸಾಗುತ್ತಿದ್ದ ಲಾರಿ ಸಂಪೂರ್ಣ ನಾಶವಾಗಿದೆ. ಕೆಲವರ ಪ್ರಕಾರ, ಲಾರಿಯಲ್ಲಿದ್ದ 50 ಬಾಕ್ಸ್ಗಳ ಡೈನಮೈಟ್ಗಳು ಒಂದಾದ ಒಂದರಂತೆ ಸ್ಫೋಟಗೊಂಡಿವೆ. ಶಿವಮೊಗ್ಗ ಗ್ರಾಮೀಣ ಶಾಸಕ ಅಶೋಕ್ ನಾಯ್ಕ್ ಈ ಬಗ್ಗೆ ಮಾತನಾಡಿ, ತನ್ನ ಕ್ಷೇತ್ರದಲ್ಲೇ ಈ ದುರ್ಘಟನೆ ಸಂಭವಿಸಿದ್ದು, ತನಗೂ ಭಾರೀ ಶಬ್ದ ಕೇಳಿಸಿತೆಂದಿದ್ದಾರೆ.
“ಎಲ್ಲಾ ಕಡೆ ದಟ್ಟ ಹೊಗೆ ಹಬ್ಬಿದೆ. ಏನೂ ಕಾಣುತ್ತಿಲ್ಲ. ಕನಿಷ್ಠ 6 ಮಂದಿ ಸಾವನ್ನಪ್ಪಿರುವುದು ತಿಳಿದುಬಂದಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಿರಬಹುದು. ಈಗಲೇ ಏನನ್ನೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ” ಎಂದು ನಿನ್ನೆ ತಡರಾತ್ರಿ ಅವರು ನ್ಯೂಸ್18ಗೆ ಪ್ರತಿಕ್ರಿಯಿಸಿದ್ದಾರೆ.
ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ಅಧಿಕಾರಿಗಳು ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಆದರೆ, ಇನ್ನಷ್ಟು ಜಿಲೆಟಿನ್ ಕಡ್ಡಿಗಳು ಸ್ಫೋಟಗೊಳ್ಳುವ ಅಪಾಯ ಇದ್ದರಿಂದ ಬಹಳ ಎಚ್ಚರಿಕೆಯಿಂದ ಅಪಘಾತದ ಸ್ಥಳಕ್ಕೆ ಹೋಗಲಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಒಂದು ವರದಿ ಪ್ರಕಾರ ಕಲ್ಲು ಕ್ವಾರಿಯಲ್ಲಿ ಬಿಹಾರ ಮೂಲದ 15ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರೆನ್ನಲಾಗಿದೆ. ಅವರಲ್ಲಿ ಯಾರೂ ಬದುಕಿರುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ. ಸ್ಫೋಟಗೊಂಡ ರಭಸಕ್ಕೆ ದೇಹಗಳು ಗುರುತು ಸಿಗಲಾರದಷ್ಟು ಛಿದ್ರಗೊಂಡಿವೆ.
ಜಿಲೆಟಿನ್ ಕಡ್ಡಿಗಳ ಸ್ಫೋಟಕ್ಕೆ ಇನ್ನೂ ನಿಖರ ಕಾರಣ ಗೊತ್ತಾಗಿಲ್ಲ. ಲಘು ಭೂಕಂಪನದಿಂದ ಜಿಲೆಟಿನ್ ಕಡ್ಡಿಗಳ ಘರ್ಷಣೆಯಾಗಿ ಅದರಿಂದ ಡೈನಾಮೈಟ್ ಸ್ಫೋಟಗೊಂಡಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಆದರೆ ಭೂಕಂಪನ ಸಂಭವಿಸಿರುವುದು ಎಲ್ಲಿಯೂ ದಾಖಲಾಗಿಲ್ಲ. ಭೂಕಂಪ ಮಾಪನ ಕೇಂದ್ರಗಳಲ್ಲಿ ಕಂಪನ ದಾಖಲಾಗಿಲ್ಲ.
ವರದಿ: ಡಿ ಪಿ ಸತೀಶ್
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ