ಹುಬ್ಬಳ್ಳಿ(ಸೆಪ್ಟೆಂಬರ್.29): ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ 137 ಕೋವಿಡ್ ರೋಗಿಗಳಿಗೆ 400 ಬಾರಿ ಡಯಾಲಿಸಿಸ್ ಮಾಡುವ ಮೂಲಕ ಕಿಮ್ಸ್ ಆಸ್ಪತ್ರೆ ವಿಶೇಷ ಸಾಧನೆ ಮಾಡಿದೆ ಎಂದು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಹೇಳಿದ್ದಾರೆ. ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೇಕಡ 10 ರಿಂದ 15ರಷ್ಟು ಕೋವಿಡ್ ಸೋಂಕಿತರು ಮುತ್ರಪಿಂಡ ವೈಫಲ್ಯಕ್ಕೆ ತುತ್ತಾಗುವ ಸಂಭವವಿದೆ ಎಂದಿದ್ದಾರೆ. ಕೊರೋನಾ ವೈರಸ್ ಮೂತ್ರಪಿಂಡಗಳ ಮೇಲೆಯೂ ಪರಿಣಾಮ ಬೀರುತ್ತಿದೆ. ಮೂತ್ರಪಿಂಡಗಳ ಕಾಯಿಲೆ ಇರುವ ಕೋವಿಡ್ ರೋಗಿಗಳನ್ನು ಸುತ್ತಮತ್ತಲಿನ ಜಿಲ್ಲೆಗಳಿಂದ ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ಗೆ ಕಳುಹಿಸಲಾಗುತ್ತಿದೆ. ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು, 100 ಕ್ಕೂ ಹೆಚ್ಚು ರೋಗಿಗಳು ಉತ್ತಮ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಕೋವಿಡ್ ಸೋಂಕಿತ ಮೂತ್ರಪಿಂಡಗಳ ಕಾಯಿಲೆ ಇರುವ ರೋಗಿಗಳ ಮರಣ ಪ್ರಮಾಣ ಶೇಕಡಾ 10 ರಷ್ಟಿದೆ. ಮೂತ್ರಪಿಂಡ ವಿಭಾಗದ ಸಿಬ್ಬಂದಿ ಆರು ತಿಂಗಳಿನಿಂದ ರಜೆ ಪಡೆಯದೇ ಹಗಲು ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್ ರೋಗ ಲಕ್ಷಣಗಳು ಕಂಡು ಬಂದ ತಕ್ಷಣವೇ ಆಸ್ಪತ್ರೆಗೆ ದಾಖಲಾದರೆ ಮರಣ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದರು.
ಕಿಮ್ಸ್ ನಲ್ಲಿ 16 ಸಾವಿರ ಕೋವಿಡ್ ತಪಾಸಣಾ ಪರೀಕ್ಷೆಗಳನ್ನು ನಡೆಸಲಾಗಿದೆ. ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಲಾಗುವುದು. ಇದುವರೆಗೂ 400 ಕೋವಿಡ್ ರೋಗಿಗಳು ಮೃತಪಟ್ಟಿದ್ದಾರೆ. ರಾಜ್ಯ ಸರ್ಕಾರದಿಂದ 45 ಹಾಗೂ ಕೇಂದ್ರ ಸರ್ಕಾರದಿಂದ 35 ವೆಂಟಿಲೇಟರ್ಗಳನ್ನು ಕಿಮ್ಸ್ ಒದಗಿಸಲಾಗಿದೆ. 12 ಡಯಾಲಿಸ್ ಯಂತ್ರಗಳು ಇದ್ದು ಕಿಮ್ಸ್ನಲ್ಲಿ ಯಾವುದೇ ಉಪಕರಣಗಳ ಕೊರತೆ ಇಲ್ಲಾ ಎಂದಿದ್ದಾರೆ.
ಮೂತ್ರಪಿಂಡ ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ವೆಂಕಟೇಶ್ ಮೊಗೇರ್ ಮಾತನಾಡಿ ಸೂಪರ್ ಸ್ಪೆಷಾಲಿಟ್ ಆಸ್ಪತ್ರೆಯಲ್ಲಿಯೇ ಕೋವಿಡ್ ರೋಗಿಗಳಿಗೆ ಡಯಾಲಿಸ್ ನಡೆಸಲಾಗುತ್ತಿದೆ. ಎಲ್.ಐ.ಸಿ ಹಾಗೂ ಲಯನ್ಸ್ ಕಬ್ಲ್ ಸಿ.ಎಸ್.ಆರ್ ನಿಧಿಯಡಿ ಎರಡು ಡಯಾಲಿಸ್ ಯಂತ್ರಗಳನ್ನು ನೀಡಿದ್ದಾರೆ. ಡಯಾಲಿಸ್ ಘಟಕದಲ್ಲಿ ಪ್ರತ್ಯೇಕವಾಗಿ ಎರಡು ವೆಂಟಿಲೇಟರ್ಗಳನ್ನು ಇರಿಸಲಾಗಿದೆ. ಕೋವಿಡ್ ರೋಗಿಗಳಿಗೆ ತೊಂದರೆಯಾಗದಂತೆ ಡಯಾಲಿಸ್ ಕಾರ್ಯ ನಡೆಸಲಾಗುತ್ತಿದೆ ಎಂದಿದ್ದಾರೆ.
ಕೋವಿಡ್ ಸೋಂಕಿತ ಮಹಿಳೆಗೆ ಯಶಸ್ವಿ ಕರಳು ಶಸ್ತ್ರಚಿಕಿತ್ಸೆ
ಕೊಪ್ಪಳ ಜಿಲ್ಲೆಯ ಗಂಗಾವತಿಯ 45 ವರ್ಷದ ಕೋವಿಡ್ ಸೊಂಕಿತ ಮಹಿಳೆಗೆ ಯಶಸ್ವಿಯಾಗಿ ಕರಳು ಶಸ್ತ್ರಚಿಕಿತ್ಸೆಯನ್ನು ಕಿಮ್ಸ್ ನಲ್ಲಿ ನೆರವೇರಿಸಲಾಗಿದೆ. ಇದೊಂದು ವಿಶೇಷ ಪ್ರಕರಣವಾಗಿದೆ. ಹೊಟ್ಟೆ ನೊವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಕೊಪ್ಪಳದ ಜಿಲ್ಲಾಸ್ಪತ್ರೆಯಿಂದ ಕಿಮ್ಸ್ ರವಾನಿಸಲಾಗಿತ್ತು. ಈ ವೇಳೆ ಮಹಿಳೆಯ ಕೊರೊನ ಪರೀಕ್ಷೆ ನಡೆಸಿದಾಗಿ ಕೋವಿಡ್ ಇರುವುದು ಪತ್ತೆಯಾಗಿತ್ತು.
ಮಹಿಳೆಯ ಸಣ್ಣ ಕರುಳಿಗೆ ರಕ್ತ ಸಂಚಾರ ಮಾಡುವ ನರಗಳು ಹಾನಿಯಾಗಿದ್ದು, ಸಣ್ಣ ಕರಳು ಗ್ಯಾಂಗ್ರೀನ್ಗೆ ತುತ್ತಾಗಿತ್ತು. ಈ ಸಣ್ಣ ಕರಳಿನ ಭಾಗವನನ್ನು ಕತ್ತರಿಸಿ ತೆಗೆದು ಹಾಕಲಾಗಿದೆ. ಶಸ್ತ್ರ ಚಿಕಿತ್ಸೆಯ ಯಶಸ್ವಿಯಾಗಿದ್ದು ಮಹಿಳೆ ಚೇತರಿಸಿಕೊಳ್ಳುತ್ತಿದ್ದಾಳೆ.
ಕಿಮ್ಸ್ನ ಶಸ್ತ್ರಚಿಕಿತ್ಸಾ ವಿಭಾಗದ ಡಾ.ವಿನಾಯಕ ಬ್ಯಾಟಪ್ಪನವರ ಶಸ್ತ್ರಚಿಕಿತ್ಸೆ ನೆಡೆಸಿದ್ದಾರೆ. ವಿಭಾಗದ ಮುಖ್ಯಸ್ಥ ಡಾ. ಗುರುಶಾಂತಪ್ಪ ಯಲಗಟ್ಟಿ, ಡಾ. ರಮೇಶ್ ಹೊಸಮನಿ, ಡಾ.ವಿಜಯ್ ಕಾಮತ್ ಹಾಗೂ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಶಸ್ತ್ರ ಚಿಕಿತ್ಸೆಯಲ್ಲಿ ಸಹಾಯಕರಾಗಿ ಪಾಲ್ಗೊಂಡಿದ್ದರು. ಕಿಮ್ಸ್ ನಿರ್ದೇಶಕ ಡಾ. ಡಾ ರಾಮಲಿಂಗಪ್ಪ ಅಂಟರಠಾಣಿ ಶಸ್ತ್ರ ಚಿಕಿತ್ಸಾ ವಿಭಾಗದ ತಂಡವನ್ನು ಅಭಿನಂದಿಸಿದ್ದಾರೆ.
Published by:G Hareeshkumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ