ವಿಜಯಪುರ (ಆಗಸ್ಟ್ 31); ಒಂದೇ ಕುಟುಂಬದ ಎಷ್ಟು ಜನರಿಗೆ ಇನ್ನೂ ಅವಕಾಶ ನೀಡಬೇಕು ಎಂದು ಕೇಳುವ ಮೂಲಕ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda patil yatnal) ಮತ್ತೊಮ್ಮೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (BS Yddyurappa) ವಿರುದ್ಧ ಕಿಡಿಕಾರಿದ್ದಾರೆ. ಈ ಹಿಂದೆ ಯಡಿಯೂರಪ್ಪ ಸಿಎಂ ಸ್ಥಾನದಲ್ಲಿದ್ದಾಗಲೇ ಅವರ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ್ದ ಮತ್ತು ಭ್ರಷ್ಟಾಚಾರದ ಆರೋಪ ಹೊರಿಸಿದ್ದ ನಾಯಕ ಯತ್ನಾಳ್. ಅಲ್ಲದೆ, ಯಡಿಯೂರಪ್ಪ ಶೀಘ್ರವಾಗಿ ಸಿಎಂ ಸ್ಥಾನದಿಂದ ಕೆಳಗಿಳಿಯಲಿ ದ್ದಾರೆ ಎಂದು ಆಗಿಂದಾಗ್ಗೆ ಪ್ರೆಸ್ಮೀಟ್ ಮಾಡುವ ಮೂಲಕ ಸಂಚಲ ಮೂಡಿಸು ತ್ತಿದ್ದರು. ಅದರಂತೆ ಕೊನೆಗೂ ಯಡಿಯೂರಪ್ಪ ಸಿಎಂ ಸ್ಥಾನದಿಂದ ಇಳಿದದ್ದಾಯ್ತು. ಬಸವರಾಜ ಬೊಮ್ಮಾಯಿ (Basavaraja Bommai) ರಾಜ್ಯ ನೂತನ ಸಿಎಂ ಆಗಿ ಅಧಿಕಾರ ವಹಿಸಿದ್ದೂ ಆಗಿದೆ. ಆದರೆ, ಈ ನಡುವೆ ಬಸನಗೌಡ ಪಾಟೀಲ್ ಯತ್ನಾಲ್ ಮತ್ತೆ ಯಡಿಯೂರಪ್ಪ ಕುಟುಂಬದ ವಿರುದ್ಧ ಕಿಡಿಕಾರಿದ್ದಾರೆ.
ಅಸಲಿಗೆ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆ ಅವರ ಮಗ ವಿಜಯೇಂದ್ರ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆಯನ್ನು ಹೈಕಮಾಂಡ್ ಎದುರು ಇಡಲಾಗಿತ್ತು. ಆದರೆ, ಹೈಕಮಾಂಡ್ ಈ ಬೇಡಿಕೆಗೆ ಸೊಪ್ಪು ಹಾಕಿರಲಿಲ್ಲ. ಆದರೆ, ಇದೀಗ ಮತ್ತೆ ವಿಜಯೇಂದ್ರ ಅವರಿಗೆ ಸಿಎಂ ಸ್ಥಾನ ನೀಡಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಈ ಬಗ್ಗೆ ಕಿಡಿಕಾರಿರುವ ಬಸನಗೌಡ ಪಾಟೀಲ್ ಯತ್ನಾಲ್,
"ಒಂದು ಕುಟುಂಬದಲ್ಲಿ ಎಷ್ಟು ಜನರಿಗೆ ಅವಕಾಶ ನೀಡಬೇಕು? ಒಂದೇ ಕುಟುಂಬದ ಮೂರು ನಾಲ್ಕು ಜನರಿಗೆ ಅವಕಾಶ ನೀಡಿದರೆ ಕಾರ್ಯಕರ್ತರು ಏನು ಮಾಡಬೇಕು? ಈಗಾಗಲೇ ಯಡಿಯೂರಪ್ಪ ಅವರ ಪುತ್ರ ರಾಘವೇಂದ್ರ ಶಿವಮೊಗ್ಗದ ಸಂಸದರಾಗಿದ್ದಾರೆ. ಯಡಿಯೂರಪ್ಪ ಅವರು ಇಷ್ಟು ದಿನ ಸಿಎಂ ಆಗಿದ್ದರು, ಮತ್ತೊಬ್ಬ ಮಗ ವಿಜಯೇಂದ್ರ ರಾಜ್ಯ ಉಪಾಧ್ಯಕ್ಷರಾಗಿದ್ದಾರೆ ಇಷ್ಟು ಸಾಲುವುದಿಲ್ಲವೇ? ಎಂದು ಕಟುವಾಗಿ ಪ್ರಶ್ನೆ ಮಾಡಿದ್ದಾರೆ.
ಇನ್ನು ಏನು ಆಗಬೇಕೆಂದು ಪರೋಕ್ಷವಾಗಿ ಬಿ.ಎಸ್. ಯಡಿಯೂರಪ್ಪ ಕುಟುಂಬದ ವಿರುದ್ಧ ಹರಿಹಾಯ್ದ ಯತ್ನಾಲ್, "ವಿಜಯೇಂದ್ರ ನಿಗೆ ಸಚಿವ ಸ್ಥಾನ ನೀಡದಿದ್ದರೆ ಯತ್ನಾಳ್ ಗೂ ಸಚಿವ ನೀಡಬಾರದೆಂದು ಯಡಿಯೂರಪ್ಪ ಈ ಹಿಂದೆಯೇ ಹೈಕಮಾಂಡ್ ನಾಯಕರ ಎದುರು ಬೇಡಿಕೆ ಇಟ್ಟಿದ್ದರು. ಇದರಿಂದ ವಿಜಯೇಂದ್ರನಿಗೆ ಸಚಿವ ಸ್ಥಾನ ತಪ್ಪಿಸಿದ್ದು ಯತ್ನಾಳ ಎಂಬುದು ಸಾಬೀತಾದಂತಾಗಿದೆ.
ಯಾರನ್ನು ಬೇಕಾದ್ರೆ ಸಚಿವರನ್ನಾಗಿ ಮಾಡಿ ಆದರೆ ಯತ್ನಾಳರನ್ನು ಮಾತ್ರ ಸಚಿವರನ್ನಾಗಿ ಮಾಡಬೇಡಿ ಎಂದು ಯಡಿಯೂರಪ್ಪ ಹೈಕಮಾಂಡ್ ನಾಯಕರ ಎದುರು ಆಗ್ರಹಿಸಿದ್ದರು ಅವರನ್ನು ಸಚಿವರನ್ನಾಗಿ ಮಾಡದಿದ್ದರೆ ವಿಜಯೇಂದ್ರರನ್ನು ಮಾಡಲ್ಲ ಎಂದು ವರಿಷ್ಠರು ಹೇಳಿದ್ದರು. ಹೀಗಾಗಿ ವಿಜಯೆಂದ್ರ ಅವರಿಗೂ ಸಚಿವ ಸ್ಥಾನ ತಪ್ಪಿತು" ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದು ವಿಜಯಪುರದಲ್ಲಿ ಹೇಳಿಕೆ ನೀಡಿದ್ದಾರೆ. ಒಟ್ಟಾರೆ ಬಿ.ಎಸ್. ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗೆ ಇಳಿದಿದ್ದರೂ ಸಹ ಯತ್ನಾಳ್ ಮತ್ತು ಬಿಎಸ್ವೈ ಕುಟುಂಬದ ನಡುವಿನ ವಾಗ್ಯುದ್ಧ ಮಾತ್ರ ಮುಗಿಯುವ ಯಾವುದೇ ಲಕ್ಷಣಗಳೂ ಗೋಚರಿಸುತ್ತಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ