ರಾಯಚೂರು: ಒಂದು ಕಡೆ ಕೊರೋನಾದಿಂದಾಗಿ ಉದ್ಯಮಗಳು ನೆಲಕಚ್ಚುತ್ತಿವೆ. ಅನೇಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಆದರೆ, ಸರ್ಕಾರ ಸ್ವಾಮ್ಯದ ಹಟ್ಟಿ ಚಿನ್ನದ ಕಂಪನಿ ಮಾತ್ರ ನಷ್ಟವಿಲ್ಲದೆ ಎಂದಿನಂತೆ ನಡೆಯುತ್ತಿದೆ. ಇದಕ್ಕೆ ಮುಖ್ಯ ಕಾರಣ ಈಗ ಜಾಗತಿಕ ಮಟ್ಟದಲ್ಲಿ ಹಳದಿ ಲೋಹದ ಬೆಲೆ ಗಗನಕ್ಕೇರಿದ್ದು, ಚಿನ್ನದ ಗಣಿ ಕಂಪನಿಗೆ ವರದಾನವಾಗಿದೆ.
ಪುರಾತನವಾಗಿರುವ ಹಟ್ಟಿ ಚಿನ್ನದ ಗಣಿ ಕಂಪನಿ ಈಗಲೂ ಚಿನ್ನ ಉತ್ಪಾದಿಸುವ ರಾಜ್ಯದ ಏಕೈಕ ಕಂಪನಿಯಾಗಿದೆ. ರಾಯಚೂರು ಜಿಲ್ಲೆಗೆ ಚಿನ್ನದ ನಾಡು ಎಂಬ ಹೆಗ್ಗಳಿಕೆಯು ಚಿನ್ನದ ಗಣಿಯಿಂದಲೇ ಬಂದಿದೆ. ಸರಕಾರದ ಉದ್ಯಮವಾಗಿರುವ ಹಟ್ಟಿ ಚಿನ್ನದ ಗಣಿ ಕಂಪನಿಯು ಇತ್ತೀಚಿಗೆ ನಷ್ಟ ಅನುಭವಿಸಿದ್ದು ಕಡಿಮೆ. ಈ ನಡುವೆ ಈಗ ಚಿನ್ನದ ಬೆಲೆ ದಾಖಲೆ ಪ್ರಮಾಣದ ಏರಿಕೆಯಾಗಿದ್ದರಿಂದ ಚಿನ್ನದ ಕಂಪನಿ ಈಗಲೂ ನಷ್ಟವಿಲ್ಲದೆ ಲಾಭದಲ್ಲಿ ನಡೆಯುತ್ತಿದೆ.
ಜಿಲ್ಲೆಯ ಹಟ್ಟಿ ಚಿನ್ನದ ಗಣಿ ಕಂಪನಿಯು ಈಗ ವಾರ್ಷ 1400 ಕೆ.ಜಿ ಚಿನ್ನ ಉತ್ಪಾದಿಸುವ ಗುರಿ ಹೊಂದಿದೆ. ಕಳೆದ 2-3 ವರ್ಷಗಳಲ್ಲಿ ನಿಗಿದಿಗಿಂತ ಅಧಿಕ ಚಿನ್ನ ಉತ್ಪಾದಿಸಿದ ಹೆಗ್ಗಳಿಕೆಯನ್ನೂ ಹೊಂದಿದೆ. ಸುಮಾರು 4200 ಕಾರ್ಮಿಕರು ದುಡಿಯುವ ಹಟ್ಟಿ ಚಿನ್ನದ ಗಣಿಯಲ್ಲಿ ಈ ಆರ್ಥಿಕ ವರ್ಷದ ಆರಂಭದಲ್ಲಿ ಕೊರೋನಾ ಸೋಂಕಿನಿಂದಾಗಿ ಆತಂಕ ಸೃಷ್ಠಿಯಾಗಿತ್ತು. ಮಾರ್ಚ್ 21 ರಿಂದ ಎಪ್ರಿಲ್ ತಿಂಗಳ ಅಂತ್ಯದವರೆಗೂ ಗಣಿ ಮುಚ್ಚಲಾಗಿತ್ತು. ಆದರೆ, ಸರಕಾರ ಮಾರ್ಗಸೂಚಿಯಂತೆ ಮೇ ತಿಂಗಳಿನಿಂದ ಕಡಿಮೆ ಸಿಬ್ಬಂದಿ ಬಳಕೆ ಮಾಡಿ ಚಿನ್ನ ಉತ್ಪಾದಿಸಲಾಗುತ್ತಿದೆ.
ಪ್ರತಿ ತಿಂಗಳು 180-190 ಕೆ.ಜಿ ಚಿನ್ನ ಉತ್ಪಾದಿಸುವ ಗುರಿ ಹೊಂದಲಾಗಿದೆ. ಆದರೆ, ಈಗಿನ ಸಂದರ್ಭದಲ್ಲಿ ಅಷ್ಟು ಚಿನ್ನ ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ. ಮೂರು ತಿಂಗಳ ಅವಧಿಯಲ್ಲಿ ಅಂದಾಜು 340 ಕೆ.ಜಿ ಚಿನ್ನ ಉತ್ಪಾದಿಸಲಾಗಿದೆ. ಮೇ ತಿಂಗಳಲ್ಲಿ 80 ಕೆ.ಜಿ, ಜೂನ ತಿಂಗಳಲ್ಲಿ 140 ಕೆಜಿ ಉತ್ಪಾದಿಸಲಾಗಿದೆ. ಈ ತಿಂಗಳು 145 ಕೆಜಿ ಚಿನ್ನ ಉತ್ಪಾದಿಸಲಾಗುವ ಸಾಧ್ಯತೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ